ಕನ್ನಡ ನಾಡಿನಲ್ಲಿಯೇ ವಿಶಿಷ್ಟವಾಗಿ ಮೂಡಿದ, ವೈದಿಕ ಸಂಪ್ರದಾಯಕ್ಕೆ ಕೆಲವೊಮ್ಮೆ ವಿರೋಧವಾಗಿಯೂ, ಮತ್ತೆ ಕೆಲವೊಮ್ಮೆ ಸಮಾನಾನಂತರವಾಗಿಯೂ ಬೆಳೆದ ಭಕ್ತಿ ಚಳುವಳಿಯ ಪ್ರಮುಖನಾದ ಅಲ್ಲಮನ ಜೀವನವನ್ನು ಇಂದಿನ ಪೀಳಿಗೆಗೆ ಕಟ್ಟಿಕೊಡುವ, ನೆನಪಿಸುವ ನಿರ್ದೇಶಕರ ಪ್ರಯತ್ನ, ಬದ್ಧತೆ ಶ್ಲಾಘನೀಯವಾಗಿದ್ದರು ಅದನ್ನು ನಿರೂಪಿಸಿರುವ, ಕಲ್ಪಿಸಿರುವ, ಮೂಡಿಸಿರುವ ರೀತಿ ಅಷ್ಟು ಪರಿಣಾಮಕಾರಿಯಾಗಲ್ಲ ಎಂಬ ಭಾವನೆ ಮೂಡುತ್ತದೆ. ಅಲ್ಲಮನ ಬಾಲ್ಯ, ಮದ್ದಳೆ ನುಡಿಸುವ ಬಗ್ಗೆ ಅವನ ತೀವ್ರ ಆಸಕ್ತಿ, ಇವೆಲ್ಲವೂ ಆಪ್ತವಾಗಿ ಮೂಡಿವೆ. ತಾಯಿಯನ್ನು (ಅವಳಿಗೆ ತಿಳಿಯದಂತೆ) ತೊರೆದು ನಂದಿಮಯ್ಯನ ಜೊತೆಗೆ ಗೌತಮಾರ್ಯರ ಗುರುಕುಲ ಸೇರುವುದು-ಅಲ್ಲಿ ತಾಯಿಯ ಚಿಂತೆಯನ್ನೇ ಮರೆತು ಪ್ರಾವೀಣ್ಯತೆ ಪಡೆಯುವುದು, ಹೀಗೆ ನಿರ್ದೇಶಕರ-ಕಥೆಗಾರರ ಕಲ್ಪನೆಯಲ್ಲಿ (ಅಲ್ಲಮ ಪ್ರಭುವಿನ ಬಾಲ್ಯದ ಬಗ್ಗೆ ಇರುವ ಹಲವಾರು ಕಥೆಗಳಲ್ಲಿ ಇದು ಒಂದು) ಸಾಗುವ ಕಥೆ, ಇನ್ನಷ್ಟು ವಿವರಗಳು ಬೇಕಿತ್ತು ಎಂದು ಬೇಡುತ್ತದೆ. ಅಲ್ಲಿ ನಡೆಯುವ ಕೆಲವು ಘಟನೆಗಳು ಕೂಡ ಅಲ್ಲಮನ ಒಟ್ಟಾರೆ ವ್ಯಕ್ತಿತ್ವನ್ನು ರೂಪಿಸುವುದಕ್ಕೆ ಸಹಕರಿಸಿದವು ಎಂದು ಹೇಳಲು ಶಕ್ತಿಯುತವಾದವೇನಲ್ಲ.