ಕಥೆಗಾರನ ಸಂದೇಶದ ಭಾರಕ್ಕೆ ಮಂಕಾದ ಎಳೆಯರ ತುಂಟಾಟ, ಸಾಹಸ ಮತ್ತು ಮುಗ್ಧತೆ

ಮಕ್ಕಳ ಸಿನೆಮಾಗಳು ಅಂದರೆ ಕೂಡಲೇ ನೆನಪಿಗೆ ಬರುವುದು ಸಾಹಸಮಯ ಸನ್ನಿವೇಶಗಳು-ಕಥೆಗಳು. ಆ ಕಥೆಗಳಿಗೆ ಬೆನ್ನುಲುಬಾಗಿ ನಿಲ್ಲುವುದು ಮಕ್ಕಳ ತುಂಟಾಟ, ಮುಗ್ಧತೆಯಿಂದ ಹುಟ್ಟುವ ಚೇಷ್ಟೆಗಳು
ಎಳೆಯರು ನಾವು ಗೆಳೆಯರು ಸಿನೆಮಾ ವಿಮರ್ಶೆ
ಎಳೆಯರು ನಾವು ಗೆಳೆಯರು ಸಿನೆಮಾ ವಿಮರ್ಶೆ
ಮಕ್ಕಳ ಸಿನೆಮಾಗಳು ಅಂದರೆ ಕೂಡಲೇ ನೆನಪಿಗೆ ಬರುವುದು ಸಾಹಸಮಯ ಸನ್ನಿವೇಶಗಳು-ಕಥೆಗಳು. ಆ ಕಥೆಗಳಿಗೆ ಬೆನ್ನುಲುಬಾಗಿ ನಿಲ್ಲುವುದು ಮಕ್ಕಳ ತುಂಟಾಟ, ಮುಗ್ಧತೆಯಿಂದ ಹುಟ್ಟುವ ಚೇಷ್ಟೆಗಳು ಮತ್ತು ಸದಾ ಸಾಹಸವನ್ನು ಅರಸುವ ಅವರ ಅಪರಿಮಿತ ಉತ್ಸಾಹ. ಕನ್ನಡ ಕಿರುತೆರೆಯ ರಿಯಾಲಿಟಿ ಕಾರ್ಯಕ್ರಮವೊಂದರಲ್ಲಿ ಜನಪ್ರಿಯವಾಗಿದ್ದ ಮಕ್ಕಳ ತಂಡವನ್ನು ಬಳಸಿಕೊಂಡು ವಿಕ್ರಂ ಸೂರಿ ನಿರ್ದೇಶಿಸಿರುವ ಮಕ್ಕಳ ಚಿತ್ರ 'ಎಳೆಯರು ನಾವು ಗೆಳೆಯರು', ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಮಕ್ಕಳ ಚಿತ್ರಗಳು ಮೂಡಿಬರುತ್ತಿಲ್ಲ ಎಂಬ ಕೊರಗನ್ನು ನಿವಾರಿಸಲು ಸಾಧ್ಯವಾಗಿದೆಯೇ? ಆ ಮಕ್ಕಳ ತುಂಟಾಟ, ಸಾಹಸ ಬೆಳ್ಳಿ ತೆರೆಗೆ ಮರುಕಳಿಸಿದೆಯೇ? 
ಪೇಪರ್ ಮೋಹನ್ (ತುಷಾರ್), ಮರಕೋತಿ ಸೀನ (ಮಹೇಂದ್ರ), ಮೆಕ್ಯಾನಿಕ್ ಉಸ್ತಾದ್ (ಸೂರಜ್), ಕಂಬರ್ಕಟ್ ಸ್ವಾಮಿ (ನಿಹಾಲ್), ತಿಂಡಿಪೋತಿ ಪದ್ಮ (ತೇಜಸ್ವಿನಿ), ಹಕ್ಕಿಪಿಕ್ಕಿ ರಾಮ (ಪುಟ್ಟರಾಜು), ಹೀರೊ ರಾಜ (ಅಚಿಂತ್ಯ), ಹಲ್ಕಿರಿ ವಜ್ರಪ್ಪ (ಅಭಿಷೇಕ್), ಗೊರಕೆ ಶಂಕರ (ಅಮೋಘ್) ಹಳ್ಳಿಯೊಂದರಲ್ಲಿ ವಾಸಿಸುವ ಗೆಳೆಯರು. ಒಬ್ಬೊಬ್ಬರಿಗೂ ಒಂದೊಂದು ವಿಶೇಷ ಪ್ರತಿಭೆ ಇರುವ ಇವರು ಗೆಳೆಯರ ಕಟ್ಟೆ ಕಟ್ಟಿಕೊಂಡು ತಮ್ಮ ತುಂಟ ಚೇಷ್ಟೆಗಳ ಮೂಲಕ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವವರು. ಬಹಿರ್ದೆಸೆಗೆ ಹೋಗುವವ ಹಿರಿಯರ ಕುಂಡಿಗೆ ಕ್ಯಾಟರ್ ಪಿಲ್ಲರ್ ಮೂಲಕ ಕಲ್ಲು ಬೀಸುತ್ತಾರೆ. ಗ್ರಂಥಾಲಯದಲ್ಲಿ ಹಿರಿಯ ವ್ಯಕ್ತಿಗಳಿಂದ ಪೇಪರ್ ಕಸಿದು ಓದಲು ಪಟಾಕಿ ಹಚ್ಚಿ ಬೆದರಿಸುತ್ತಾರೆ. ವಿದ್ಯಾರ್ಥಿಗಳಿಲ್ಲ ಎಂಬ ಕಾರಣಕ್ಕೆ ತಮ ಹಳ್ಳಿಯಲ್ಲಿ ಮುಚ್ಚಿದ ಸರ್ಕಾರಿ ಶಾಲೆಯನ್ನು ನೆನದು ಮರುಗುತ್ತಾರೆ ಅದಕ್ಕೆ ನಮಸ್ಕರಿಸುತ್ತಾರೆ. ಮುಂದಿನ ದಿನ ಶಾಲೆಗೆ ಪಕ್ಕದ ಊರಿಗೆ ಹೋಗಬೇಕೆಂದು, ಕಾಡಿಗೆ ಪ್ರವಾಸ ಬೆಳೆಸಿ ಹರಟೆ ಹೊಡೆಯುತ್ತಾರೆ. ಹೀಗೆ ಮೊದಲಾರ್ಧ ಯಾವುದೇ ಕಥೆ ಹೇಳಲು ಮುಂದಾಗದ ಸಿನೆಮಾ ಇಂತಹ ಸಣ್ಣಪುಟ್ಟ ಘಟನೆಗಳ ಸುತ್ತ ಸುತ್ತುತ್ತದೆ. ಆದರೆ ಈ ಘಟನೆಗಳು ಮಕ್ಕಳ ಮುಗ್ಧತೆಯಿಂದ, ತುಂಟಾಟದಿಂದ ಮೂಡಿ ಬಂದಿವೆ ಎಂದೆನಿಸದೆ, ನಿರ್ದೇಶಕರ ಕಲ್ಪನೆಯ ಸಾಮಾಜಿಕ ಸಮಸ್ಯೆಗಳನ್ನು, ಸಂದೇಶಗಳನ್ನು ಮಕ್ಕಳ ಮೂಲಕ ಕೃತಕವಾಗಿ ಹೇಳಿಸುತ್ತಿದ್ದಾರೇನೋ ಎಂದೆನಿಸಿ ಬಹುತೇಕ ಬೇಸರಿಸುವಂತೆ ಮಾಡುತ್ತದೆ. 
ಇದ್ದುದರಲ್ಲಿ ದ್ವಿತೀಯಾರ್ಧ ಮಕ್ಕಳ ಸಾಹಸದ ಕಥೆಯನ್ನು ಹೇಳಲು ಮುಂದಾಗುವದು ಪ್ರೇಕ್ಷಕರಲ್ಲಿ ತುಸು ಭರವಸೆ ಮೂಡಿಸುತ್ತದೆ. ಅಳಿವಿನಂಚಿನಲ್ಲಿರುವ ಪಕ್ಷಿಯನ್ನು ಹುಡುಕಿ ಜರ್ಮನಿಯಿಂದ ಬರುವ ವಿಜ್ಞಾನಿಗೆ, ಪಕ್ಷಿಗಳ ಕೂಗನ್ನು ಅನುಕರಿಸುವ ಶಕ್ತಿ ಇರುವ ಹಕ್ಕಿಪಿಕ್ಕಿ ರಾಮ ನೇರವಾಗಿಯೂ ಮತ್ತಿತರ ಮಕ್ಕಳು ತಮ್ಮ ವಿಶಿಷ್ಟ ಪ್ರತಿಭೆಗಳಿಂದ ಪರೋಕ್ಷವಾಗಿಯೂ ನೆರವಾಗುತ್ತಾರೆ. ಆದರೆ ಈ ಸಾಹಸಮಯ ಅನ್ವೇಷಣೆ ಕೂಡ, ತಮ್ಮ ಶಾಲೆಯ ಮತ್ತೊಬ್ಬಳು ವಿದ್ಯಾರ್ಥಿ ರ್ಯಾಂಕ್ ವಿದ್ಯಾ (ಮಹತಿ) ಅವಳ ಚಿಕಿತ್ಸೆಗೆ ನೆರವಾಗುವುದಕ್ಕೆ ಎಂಬ ಮೂಲಕಾರಣದ ಆರೋಪ ಹಚ್ಚಿ ಮತ್ತೆ ಆ ಸಾಹಸದ ಮುಗ್ಧತೆಗೆ ಬ್ರೇಕ್ ಹಾಕಿ, ಬೋಧನೆಯನ್ನು, ಸಹಾಯಹಸ್ತ ಚಾಚುವ ಭಾವನಾತ್ಮಕ ಸನ್ನಿವೇಶವನ್ನು ಮುಂದೆ ಮಾಡುತ್ತಾರೆ ನಿರ್ದೇಶಕ. ತನ್ನ ಗೆಳತಿಯ ಸಹಾಯಕ್ಕೆ ಕಂಕಣ ಕಟ್ಟಿ ನಿಲ್ಲುವ ಮಕ್ಕಳ ಸಾಹಸ ಆದರ್ಶಪ್ರಾಯವಾಗಿ ಕಂಡರೂ, ಇನ್ನಷ್ಟು ಸ್ವಾಭಾವಿಕವಾಗಿ ಅದನ್ನು ಮೂಡಿಸಲು ನಿರ್ದೇಶಕ-ಕಥೆಗಾರ ಜೋಡಿ ಪ್ರಯತ್ನಿಸಿದ್ದರೆ ಹೆಚ್ಚು ಪರಿಣಾಮಕಾರಿಯೆಂದೆನಿಸಿ ಆಪ್ತವಾಗುತ್ತಿತ್ತೇನೋ. ಪ್ರತಿ ಮಕ್ಕಳಿಗೆ ಒಂದೊಂದು ವಿಶೇಷ ಪ್ರತಿಭೆಯನ್ನು ಆರೋಪಿಸಿ, ಅದನ್ನು ನಿರೂಪಿಸುವ-ತೋರಿಸುವ (ಎಷ್ಟೋ ಬಾರಿ ಕಥೆಗೆ ಹೊಂದಿಕೊಳ್ಳದೇ ಹೋದರು) ಜಿದ್ದಿಗೆ ಬಿದ್ದು, ಸಾಕಷ್ಟು ಹರಸಾಹಸ ಪಟ್ಟಿದ್ದಾರೆ ನಿರ್ದೇಶಕರು. ನಿರ್ದೇಶಕನ ಈ ಸಾಹಸ ಅನಗತ್ಯವಾಗಿತ್ತೇನೋ ಎಂದೆನಿಸದೆ ಇರದು. 
ಕೆಲವೊಮ್ಮೆ ಮಕ್ಕಳ ತೊದಲು ನುಡಿ ಮನಸ್ಸಿಗೆ ಮುದ ತಂದರೂ, ಹಲವು ಬಾರಿ ಮಕ್ಕಳು ಅತಿ ಗ್ರಾಂಥಿಕವಾಗಿ ಮಾತನಾಡುವುದು, ದೇಶದ ಸಮಸ್ಯೆಗಳನ್ನೆಲ್ಲಾ ತಮ್ಮ ಮೇಲೆ ಹೊತ್ತಿಕೊಂಡವರಂತೆ ತಟಕ್ಕನೆ ಗಂಭೀರವಾಗುವುದು ಇಂತಹ ಸಮಸ್ಯೆಗಳು ಸಿನಿಮಾದುದ್ದಕ್ಕೂ ಪ್ರೇಕ್ಷಕನನ್ನು ಕಾಡುತ್ತವೆ. ಶಾಲೆಯ ಪರಿಸರದಲ್ಲಿ ಮೂಡುವ ಘಟನೆಗಳು ಕೂಡ ಯಾವುವು ವಾಹ್ ಎನ್ನುವಷ್ಟು ಆಪ್ತವಾಗಿರದೆ ಅತಿ ಸಾಧಾರಣ ಎಂಬಂತೆ ಮೂಡಿ ಬಂದಿರುವುದು ನಿರಾಸೆ ಮೂಡಿಸುತ್ತದೆ. 
ತಾಂತ್ರಿಕವಾಗಿ ಸಿನೆಮಾ ಪ್ರೇಕ್ಷಕರಿಗೆ ಒಂದಷ್ಟು ನೆಮ್ಮದಿ ಒದಗಿಸುತ್ತದೆ. ಅನೂಪ್ ಸೀಳಿನ್ ಸಂಗೀತದಲ್ಲಿ ಮೂಡಿಬಂದಿರುವ ಹಾಡುಗಳು ಸಾಂದರ್ಭಿಕವಾಗಿದ್ದು, ಒಂದೆರಡು ಗುನುಗುವಂತೆಯೂ ಇವೆ. ಅಶೋಕ್ ವಿ ರಾಮನ್ ಅವರ ಛಾಯಾಗ್ರಹಣ ಕೂಡ ಕಾಡಿನ ಪರಿಸರದಲ್ಲಿ ಓಡಾಟವನ್ನು ಆಪ್ತವಾಗಿ ಮೂಡಿಸಲು ಒಂದಷ್ಟು ಸಹಕರಿಸಿದೆ. ನಟನೆಯಲ್ಲಿ ಎಲ್ಲ ಮಕ್ಕಳು ಆಪ್ತವಾಗಿ ನಟಿಸಿದ್ದಾರೆ. 
ಕಥೆ ಹೆಣೆಯುವುದರಲ್ಲಿ, ಸಂಭಾಷಣೆಯಲ್ಲಿ ಇನ್ನಷ್ಟು ಶ್ರಮವಹಿಸಿ, ಮಕ್ಕಳ ಮುಗ್ಧತೆಯನ್ನು, ತುಂಟಾಟವನ್ನು, ಸಾಹಸಮಯ ಉತ್ಸಾಹವನ್ನು ಇನ್ನಷ್ಟು ನೈಜವಾಗಿ ಮೂಡಿಸಿ, ಸ್ವಾಭಾವಿಕವಾಗಿ ಕಟ್ಟಿಕೊಡಲು ನಿರ್ದೇಶಕ ವಿಕ್ರಂ ಸೂರಿ ಮತ್ತು ಕಥೆಗಾರ ಜೋಡಿ ಪ್ರಯತ್ನಿಸಿದ್ದರೆ ಸಿನೆಮಾ ಇನ್ನಷ್ಟು ಆಪ್ತವಾಗುತ್ತಿತ್ತೇನೋ. ಆದರೂ ಸಾಮಾಜಿಕ ಸಮಸ್ಯೆಗಳನ್ನು ಮಕ್ಕಳ ಮೂಲಕ ಬೇಧಿಸುವ, ಗೆಳೆತನವನ್ನು ಭಾವನಾತ್ಮಕವಾಗಿ ಕಟ್ಟಿಕೊಡುವ ಪಾಠಗಳನ್ನು ಮಕ್ಕಳು ನೋಡಿ ಮೈಗೂಡಿಸಿಕೊಳ್ಳಬಹದು ಎಂಬ ನಿಲುವು ನಿಮ್ಮದಾಗಿದ್ದರೆ, ಮಕ್ಕಳಿಗೆ ತೋರಿಸಬಹುದಾದ ಚಿತ್ರ!

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com