ವರ್ತಮಾನದ ಮೆಟ್ರೋ ರೈಲಿನ ಜೊತೆಗೆ ಮೂಡಿದ ಭೂತದ ಭೂಗತ

ಸುಲಭವಾಗಿ ದಕ್ಕದ ಸಮಾಜದ ಬಗ್ಗೆ ಸಹಜ ಕುತೂಹಲ ಇದ್ದದ್ದೇ. ಇದು ಭೂಗತಲೋಕಕ್ಕೂ ಅನ್ವಯ. ನಿಜ ಘಟನೆಗಳಿಂದ ಕೂಡಿದ್ದೇ ಆಗಲಿ, ಕಾಲ್ಪನಿಕ ಕಥೆಯೇ ಆಗಲಿ ಕನ್ನಡ ಚಿತ್ರರಂಗದಲ್ಲಿ ಮೂಡಿರುವ
ಬೆಂಗಳೂರು ಅಂಡರ್ ವರ್ಲ್ಡ್ ಸಿನೆಮಾ ವಿಮರ್ಶೆ
ಬೆಂಗಳೂರು ಅಂಡರ್ ವರ್ಲ್ಡ್ ಸಿನೆಮಾ ವಿಮರ್ಶೆ
Updated on
ಸುಲಭವಾಗಿ ದಕ್ಕದ ಸಮಾಜದ ಬಗ್ಗೆ ಸಹಜ ಕುತೂಹಲ ಇದ್ದದ್ದೇ. ಇದು ಭೂಗತಲೋಕಕ್ಕೂ ಅನ್ವಯ. ನಿಜ ಘಟನೆಗಳಿಂದ ಕೂಡಿದ್ದೇ ಆಗಲಿ, ಕಾಲ್ಪನಿಕ ಕಥೆಯೇ ಆಗಲಿ ಕನ್ನಡ ಚಿತ್ರರಂಗದಲ್ಲಿ ಮೂಡಿರುವ ಭೂಗತಲೋಕದ ಬಗೆಗಿನ ಹಲವು ಸಿನೆಮಾಗಳು ಪ್ರೇಕ್ಷಕರನ್ನು ರಂಜಿಸಿವೆ. 'ಆ ದಿನಗಳು' ದಂತಹ ಸಿನೆಮಾ ಮೂಲಕ ಬೆಂಗಳೂರಿನ ಭೂಗತ  ಲೋಕದ ಬಗ್ಗೆ ಪರಿಚಯ ಸಿಕ್ಕಿದು ನಿಜ. ಆದರೆ ರೌಡಿಸಮ್, ಭೂಗತಲೋಕ, ಮಚ್ಚು-ಕೊಚ್ಚು ರೀತಿಯ ಕಥೆಗಳು ಹೇರಳವಾದಾಗ, 'ಬಂತು ಮತ್ತೊಂದು ಮಚ್ಚಿನ ಕಥೆ' ಎಂದು ಪ್ರೇಕ್ಷಕರು ಲೇವಡಿ ಮಾಡಿ, ಸುಮ್ಮನಾದದ್ದು ಸುಳ್ಳಲ್ಲ. ಕಾಲ್ಪನಿಕ ಕಥೆ ಎಂದೇ ಹೇಳಿಕೊಂಡಿರುವ, ಈಗಾಗಲೇ ಹಲವಾರು ಅಂಡರ್ ವರ್ಲ್ಡ್ ಸಿನೆಮಾಗಳನ್ನು ನೀಡಿರುವ ಪಿ ಎನ್ ಸತ್ಯ ನಿರ್ದೇಶನದ 'ಬೆಂಗಳೂರು ಅಂಡರ್ ವರ್ಲ್ಡ್' ಇಂದು ತೆರೆಕಂಡಿದೆ. 'ಡೆಡ್ಲಿ ಸೋಮ', 'ಎದೆಗಾರಿಕೆ' ಖ್ಯಾತಿಯ ಆದಿತ್ಯ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಸಿನೆಮಾದಲ್ಲಿ ತುಸು ಹೊಸತನದ ನಿರೀಕ್ಷೆ ಹೊತ್ತು ಹೋಗುವ ಪ್ರೇಕ್ಷಕನಿಗೆ ದಕ್ಕಿದ್ದು ಏನು?
ಬೆಂಗಳೂರು ನಗರಕ್ಕೆ ಆಗಮಿಸುವ ಮಾಲಿಕ್ (ಆದಿತ್ಯ) ತನ್ನ ತೋಳ್ಬಲ ಮತ್ತು ಬುದ್ಧಿ ಬಲದಿಂದ ಆಸಿಡ್ ಬಾಬುವಿನ ಜೊತೆಗೆ ಸಮಾನ ಪಾರ್ಟ್ನರ್ ಆಗಿ ಸೇರಿಕೊಳ್ಳುತ್ತಾನೆ. ಬಾಬುವಿನ ವಿರೋಧಿಗಳನ್ನು ಪುಡಿಗುಟ್ಟಿ ಲೀಲಾಜಾಲವಾಗಿ ಕೊಲೆಗಳನ್ನು ಮಾಡುವ ಮಾಲಿಕ್ ಯುವತಿಯೊಬ್ಬಳನ್ನು (ಪಾಯಲ್ ರಾಧಾಕೃಷ್ಣ) ಪ್ರೀತಿಸಿ, ಅವಳನ್ನು ಅತ್ಯಾಚಾರವೆಸಗಲು ಪ್ರಯತ್ನಿಸುವ ಬಾಬುವಿನ ತಮ್ಮನನ್ನು ಕೂಡ ಮುಗಿಸುತ್ತಾನೆ. ಬಾಬುವಿನ ವಿರೋಧಿ ಜೈಲಿನಲ್ಲಿರುವ ಕೊತ್ವಾಲ್ ಗೆ ಜಾಮೀನು ಕೊಡಿಸಿ, ಅವನ್ನು ಕೊಂದು ಅದನ್ನು ಬಾಬುವಿಗೆ ನೇರಪ್ರಸಾರ ಮಾಡುತ್ತಾನೆ. ಬಾಬುವಿನ ಸಲಹೆಯನ್ನು ಮೀರಿ ಪೊಲೀಸ್ ಅಧಿಕಾರಿ ಥಾಮಸ್ ಅನ್ನು ರಸ್ತೆಯಲ್ಲೇ ಹೊಡೆದುಹಾಕಿ ಪೋಲೀಸರ ವಿರುದ್ಧ ಬಾಬುವನ್ನ ಎತ್ತಿಕಟ್ಟಿ ಸಿಕ್ಕಿಸುತ್ತಾನೆ. ಇದೆಲ್ಲಾ ಮಾಲಿಕ್ ಮಾಡಿದ್ದೇಕೆ? ಇವೆಲ್ಲದರಿಂದ ಅವನಿಗೆ ಹೊರಬರಲು ಸಾಧ್ಯವೇ?
ಇಲ್ಲಿಯವರೆಗೂ ಬಂದಿರುವ ಹತ್ತು ಹಲವು ಭೂಗತ ಸಿನೆಮಾಗಳನ್ನು ನೆನಪಿಸುವಂತಹ ಈ ಸಿನೆಮಾ ಕಥೆಯಲ್ಲಿ ಹೊಸತನದ ಲವಶೇಷವು ಇಲ್ಲ ಅಥವಾ ನೈಜ ಭೂಗತಲೋಕಕ್ಕೆ ಕನ್ನಡಿ ಹಿಡಿಯುವ ಪ್ರಯತ್ನವು ಇಲ್ಲ. ಭೂಗತ ಲೋಕದ ಹಿನ್ನಲೆಯಲ್ಲಿ ಸೇಡಿನ ಕಥೆಯೊಂದನ್ನು ಹೇಳಲು ಮುಂದಾಗಿರುವ ನಿರ್ದೇಶಕ ಮಾಮೂಲಿ ಹೀರೋಯಿಸಂ, ಸೇಡು-ಮೋಸ, ರಕ್ತಪಾತದ ದೃಶ್ಯಗಳಿಗೆ ಬೇಸ್ತುಬಿದ್ದು ಈಗಾಗಲೇ ನೋಡಿರುವ ರೌಡಿಸಂ ಸಿನೆಮಾಗಳನ್ನು ನವೀಕರಿಸಿ ಹಳತನ್ನೆ ಉಣಬಡಿಸಿದ್ದಾರೆ. ಸೇಡಿನ ಕಥೆಗೆ ಹೆಣೆದಿರುವ ಹಿನ್ನಲೆಯಾಗಲಿ, ಅಂತ್ಯದ ತೀರ್ಮಾನವಾಗಲೀ ಎಲ್ಲಾವೂ ಹಿಂದಿನ ಅಂಡರ್ ವರ್ಲ್ಡ್ ಸಿನೆಮಾಗಳಲ್ಲಿ ತೀರ್ಮಾನಗೊಂಡಿರುವವೇ!
ಕನಿಷ್ಠ ಪಕ್ಷ ನಿರೂಪಣೆಯಲ್ಲಿ ಒಂದಷ್ಟು ಆಪ್ತ ವಿವರಗಳೊಂದಿಗೆ ಒಂದು ಥ್ರಿಲ್ಲರ್ ಸಿನೆಮಾವಾಗಿ ಚಿತ್ರಿಸುವ ಅವಕಾಶವನ್ನು ಕೂಡ ನಿರ್ದೇಶಕ ಕೈಚೆಲ್ಲಿದ್ದಾರೆ. ಸಿನೆಮಾದಲ್ಲಿ ಮೆಟ್ರೋ ರೈಲು ಓಡುವುದು ಕಂಡರೂ, ಭೂಗತಲೋಕದ ಚಟುವಟಿಕೆಗಳು, ಪೋಲೀಸರ ತನಿಖಾ ಶೈಲಿ ಎಲ್ಲವು ತೊಂಭತ್ತರ ದಶಕದವು. ಡ್ರಗ್ ಮಾಫಿಯಾ ಎಂದು ತೇಲಿಸಿ (ಅದರ ವಿವರಗಳು-ಕಾರ್ಯಶೈಲಿ ಯಾವುದನ್ನು ನಂಬುವ ರೀತಿಯಲ್ಲಿ ಕಟ್ಟಿಕೊಡದೆ) ಮಾತಿನಲ್ಲಿ ಹೇಳಿಬಿಡುವ ಚಟ, ಯಾರನ್ನೋ ಒಬ್ಬನನ್ನು ಕೊಲ್ಲುವುದೆಂದರೆ (ಅದಕ್ಕೆ ಯೋಜನೆಯೇ ಇಲ್ಲದೆ) ಹಿರೋಯಿಕ್ ಶೈಲಿಯಲ್ಲಿ ಕೊಚ್ಚಿ ಹಾಕುವುದು ಹೀಗೆ ಅತಿರಂಜಿತತೆ ಪ್ರೇಕ್ಷಕನಿಗೆ ಬೇಸರಿಸುತ್ತದೆ. ಪ್ರೇಮ ಕಥೆ ಕೂಡ ಪ್ರೇಕ್ಷಕನಿಗೆ ಸಮಾಧಾನ ನೀಡುವುದಿಲ್ಲ. ಮಾಲಿಕ್ ಪಾತ್ರದ ಹಿನ್ನಲೆಯ ದುರಂತ ಕಥೆ ಕೂಡ, ಭಾವನಾತ್ಮಕವಾಗಿ ಕಾಡುವಲ್ಲಿ ವಿಫಲವಾಗಿದೆ. ಭಟ್ಕಳದಲ್ಲಿ ಸುಲಭವಾಗಿ ಪೊಲೀಸನ ಮಗಳನ್ನು ಅಪಹರಿಸಿ ಮುಸ್ತಫಾ ಎನ್ನುವ ರೌಡಿಯನ್ನು ಕೊಲೆಗಯ್ಯುವ, ಅಥವಾ ಥಾಮಸ್ ಎಂಬ ಪೊಲೀಸ್ ಅಧಿಕಾರಿಗೆ ಕರೆ ಮಾಡಿ (ಅವನು ಒಬ್ಬನೇ ಬರುತ್ತಾನೆ) ಅವನನ್ನು ರಸ್ತೆಯಲ್ಲಿ ಅಟ್ಟಾಡಿಸಿಕೊಂಡು ಹೊಡೆಯುವ ದೃಶ್ಯಗಳು ಬಹಳ ಪೇಲವವಾಗಿ ಮೂಡಿಬಂದಿವೆ. 
ತಾಂತ್ರಿಕವಾಗಿಯೂ ಸಿನೆಮಾ ಪ್ರೇಕ್ಷಕನಿಗೆ ಕಾಡುವುದಿಲ್ಲ. ಭೂಗತಲೋಕವೆಂದರೆ ಹೀಗೆ ಎಂದು ಈಗಾಗಲೇ ಹಲವು ಸಿನೆಮಾಗಳು ಕಟ್ಟಿಕೊಟ್ಟರುವಂತವೇ ಸೆಟ್ ಗಳು, ಅಂತಹುದೇ ಪಂಚಿಂಗ್ ಸಂಭಾಷಣೆಗಳು, ಪುಡಿ ರೌಡಿಗಳ ಕ್ಲೀಷೆಯ ಕೇಶ ಶೈಲಿಗಳನ್ನು ಕಟ್ಟಿಕೊಡುವ ನಿರ್ದೇಶಕ ಎಲ್ಲಿಯೂ ಉದ್ಘಾರ ತೆರೆಯುವಂತಹ ಘಟನೆಗಳನ್ನಾಗಲಿ, ದೃಶ್ಯಗಳನ್ನಾಗಲಿ ಮೂಡಿಸುವುದಿಲ್ಲ. ಎಲ್ಲವನ್ನು ಬಿಡಿಸಿ ಹೇಳುವ ಲೀನಿಯರ್ ಸಾಧಾರಣ ನಿರೂಪಣೆ ಕೂಡ ಊಹೆಯಂತೆ ಸಿನೆಮಾ ಮುಂದುವರೆಯುವಂತೆ ಮಾಡುತ್ತದೆ. ಅನೂಪ್ ಸೀಳಿನ್ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ಹಾಡುಗಳು ಸಾಧಾರಣ. ಹಿನ್ನಲೆ ಸಂಗೀತ, ಛಾಯಾಗ್ರಹಣ, ಸಂಕಲನ ಹೇಳುತ್ತಿರುವ ಕಥೆಗೆ ಸಹಕರಿಸಿವೆ. 
ಆಕ್ಷನ್ ದೃಶ್ಯಗಳ ಪ್ರಿಯರಿಗೆ, ಮಚ್ಚುಗಳ ಬೀಸಾಟ, ಗನ್ನುಗಳ ಬೋರ್ಘರೆತ ಹಿಡಿಸುವವರಿಗೆ ನಟ ಆದಿತ್ಯ ನೆಗೆಯುವ, ಹೊಡೆಯುವ, ಕುಟ್ಟುವ ಸಾಹಸಗಳು ಇಷ್ಟವಾಗಬಹುದು. ಆದಿತ್ಯ ಎಂದಿನಂತೆ ನಟನೆಯಲ್ಲಿ, ತಮ್ಮ ಅಭಿಮಾನಿಗಳನ್ನು ಮೆಚ್ಚಿಸಿ, ಶಿಳ್ಳೆಗೆ ಪಾತ್ರರಾಗುತ್ತಾರೆ. ಪಾಯಲ್ ರಾಧಾಕೃಷ್ಣ ಅವರದ್ದು ಬಂದು ಹೋಗುವಂತಹ ಪಾತ್ರ. ಇನ್ನುಳಿದ ರೌಡಿ ಪಾತ್ರಗಳು, ಪೋಷಕ ಪಾತ್ರಗಳು ಕೂಡ ಸೂತ್ರಕ್ಕೆ ತಕ್ಕಂತೆ ಕಾಣಿಸಿಕೊಳ್ಳುತ್ತವೆ. 
ರೌಡಿಸಂ, ಸೇಡು, ಮೋಸ, ಕೊಲೆ ಸಂಬಂಧಿ ಅಸಂಖ್ಯಾತ ಸಿನೆಮಾಗಳ ನಡುವೆ ಮತ್ತೊಂದು ಇರಬಾರದೆಂದೇನಿಲ್ಲ ಆದರೆ ಅದರಲ್ಲಿ ಯಾವುದಾದರೂ ಒಂದು ಅಂಶವಾದರೂ ತಾಜಾತನದಿಂದ ಕೂಡಿದ್ದರೆ ಪ್ರೇಕ್ಷಕನಿಗೆ ಈ ಮಟ್ಟದ ನಿರಾಶೆಯಾಗದು. ಅನಗತ್ಯ ಹಾಸ್ಯವನ್ನು ಕತ್ತರಿಸಿ, ಕಥೆಯನ್ನು ಬೇಗನೆ ಹೇಳಿ ಮುಗಿಸುವ ಸಿನೆಮಾವನ್ನು ಪಿ ಎನ್ ಸತ್ಯ ಕಟ್ಟಿಕೊಟ್ಟಿದ್ದರು, ಲಾಂಗು-ಮಚ್ಚುಗಳಿಂದ ಈಗಾಗಲೇ  ಬೇಸರಗೊಂಡಿರುವವರಿಗೆ ಸೆಳೆಯುವಂತಾದ್ದೇನು ನೀಡಿಲ್ಲ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com