ಪಶ್ಚಿಮ ದೇಶದ ಮಿಲನ್ ನಲ್ಲಿ ಸಂಭವಿಸುವ ಕಥೆಯ ಮೊದಲಾರ್ಧದಲ್ಲಿ ಉದ್ದಿಮೆದಾರ ಶಿವು ಗರ್ವದ, ಮನುಷ್ಯ ಪ್ರೀತಿಯಿಲ್ಲದ, ನೆನ್ನೆ ನಾಳೆಗಳ ಹಂಗಿಲ್ಲದೆ ವರ್ತಮಾನದಲ್ಲಿ ಥ್ರಿಲ್ ಅನುಭವಿಸುತ್ತಾ ಬದುಕುವ ವ್ಯಕ್ತಿ. ಅದೇ ದೇಶದಲ್ಲಿ ಒಬ್ಬ ಆಧುನಿಕ ಜ್ಯೋತಿಷಿಯ ಮಾತು ಕೇಳಿ, ಅದರಂತೆಯೇ ಶಿವುಗೆ ಆಕಸ್ಮಿಕವಾಗಿ ಢಿಕ್ಕಿ ಹೊಡೆದು, ಪ್ರೀತಿಯಲ್ಲಿ ಬೀಳುವ ನಯನ (ವಿದ್ಯಾ ಪ್ರದೀಪ್) ಶಿವುವಿನ ನಡತೆಯನ್ನು, ವ್ಯಕ್ತಿತ್ವವನ್ನು ಬದಲಿಸಲು ಬಹಳ ಪ್ರಯತ್ನ ಮಾಡುತ್ತಾಳೆ. ಕುಡಿದು ವಾಹನ ಚಲಾಯಿಸಿ ಮತ್ತಿನಲ್ಲಿ ಐ ಲವ್ ಯು ಎಂದು ನಯನಳಿಗೆ ಹೇಳಿ, ಮುಂದಿನ ದಿನ ಅಲ್ಲಗೆಳೆಯುವ, ಅದಕ್ಕೆ ನಯನ ಸವಾಲೆಸೆದು ಮತ್ತೆ ನಿನ್ನಿಂದ ಐ ಲವ್ ಯು ಹೇಳಿಸುವುದಾಗಿ ಚಾಲೆಂಜ್ ಮಾಡುವಂತಹ ಬಾಲಿಶ ಘಟನೆಗಳೇ ತುಂಬಿದ್ದು, ಪ್ರೇಕ್ಷಕನನ್ನು ಇನ್ನಿಲ್ಲದಂತೆ ಬೇಸರಿಸುತ್ತವೆ. ವಿದೇಶ ತೊರೆದು ಬೇಗ ಹಳ್ಳಿ ಕಡೆ ಬರಲಿ, ನಂತರವಾದರೂ ಸಿನೆಮಾದಲ್ಲಿ ಒಂದಷ್ಟು ಆಹ್ಲಾದಕರ ಬದಲಾವಣೆಗಳಾಗಬಹುದು ಎಂದು ಕಾದು ಕೂರುವಂತಾಗುತ್ತದೆ ಪ್ರೇಕ್ಷಕನಿಗೆ!