ಶಬ್ದ ಮತ್ತು ವಿಧಿ ವಿಪರೀತಗಳ ನಡುವೆ ಢಮ್ ಢಮಾ ಢಮಾರ್

ಪೊಲೀಸ್ ಮತ್ತು ಜನಪ್ರಿಯ ಸಿನೆಮಾಗಳಿಗೆ ಅವಿನಾಭಾವ ಸಂಬಂಧ. ಪೊಲೀಸ್ ವ್ಯವಸ್ಥೆಯ ಬಗ್ಗೆ, ಅದರ ಕಾರ್ಯಚಟುವಟಿಕೆಗಳ ಬಗ್ಗೆ, ಪೋಲೀಸರ ಖಾಸಗಿ ಮತ್ತು ವೃತ್ತಿಪರ ಬದುಕುಗಳ ಬಗ್ಗೆ ಇರುವ ಅಪರಿಮಿತ
ಪಟಾಕಿ ಸಿನೆಮಾ ವಿಮರ್ಶೆ
ಪಟಾಕಿ ಸಿನೆಮಾ ವಿಮರ್ಶೆ
ಪೊಲೀಸ್ ಮತ್ತು ಜನಪ್ರಿಯ ಸಿನೆಮಾಗಳಿಗೆ ಅವಿನಾಭಾವ ಸಂಬಂಧ. ಪೊಲೀಸ್ ವ್ಯವಸ್ಥೆಯ ಬಗ್ಗೆ, ಅದರ ಕಾರ್ಯಚಟುವಟಿಕೆಗಳ ಬಗ್ಗೆ, ಪೋಲೀಸರ ಖಾಸಗಿ ಮತ್ತು ವೃತ್ತಿಪರ ಬದುಕುಗಳ ಬಗ್ಗೆ ಇರುವ ಅಪರಿಮಿತ ಕತೆಗಳು ಜನರಿಗೆ ಎಂದಿಗೂ ಕುತೂಹಲ ಹುಟ್ಟಿಸುತ್ತವೆ. ಇನ್ನು ಪೊಲೀಸರು ಪ್ರತಿದಿನ ನಿಭಾಯಿಸುವ ಅಪರಾಧ ಜಗತ್ತು ಕೂಡ ಸಾಮಾನ್ಯರ ಕಲ್ಪನೆಗೆ ಸುಲಭವಾಗಿ ದಕ್ಕುವುದಲ್ಲ. ಈ ಅಂಶವನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳುವ ಜನಪ್ರಿಯ ಸಿನೆಮಾ ಮಾಧ್ಯಮ, ಬಹಳಷ್ಟು ಹಿಂದಿನಿಂದಲೂ ಪೋಲೀಸರ ಕಥೆಗಳನ್ನು, ಅಥವಾ ಬೇರೆ ಕಥೆಗಳನ್ನು ಪೊಲೀಸ್ ಪಾತ್ರಗಳ ಮೂಲಕ ಹೇಳುವ ವಿಧಾನವನ್ನು ಬಳಸುತ್ತಲೇ, ಪ್ರೇಕ್ಷಕರನ್ನು ರಂಜಿಸುತ್ತಲೋ, ಆ ಲೋಕವನ್ನು ಜನರಿಗೆ ತೆರದಿಡುತ್ತಲೋ ಬಂದಿದೆ. ಈಗ ಮತ್ತೊಂದು ಪೊಲೀಸ್ ಕಥಾನಕ ತೆಲುಗಿನಿಂದ ಆಮದಾಗಿದೆ. ೨೦೧೫ರ 'ಪಟಾಸ್' ಸಿನೆಮಾ ಈಗ ಗಣೇಶ್ ಅಭಿನಯದಲ್ಲಿ 'ಪಟಾಕಿ'ಯಾಗಿ ಮೂಡಿಬಂದಿದ್ದು, ನಿಜವಾಗಿಯೂ ಪಟಾಕಿ ಹೊಡೆದು ಸಂಭ್ರಮಿಸಿ ಸ್ವಾಗತಿಸುವಂತಿದೆಯೇ? 
ಆದರ್ಶ ಪೊಲೀಸ್ ಗೆ ಉದಾಹರಣೆಯಂತಿರುವ ಡಿಜಿಪಿ ಅಗ್ನಿ (ಸಾಯಿಕುಮಾರ್). 'ನಾನು ಪೊಲೀಸರನ್ನು ದ್ವೇಷಿಸುತ್ತೇನೆ' ಎಂದು ಪೋಲೀಸರ ವಸತಿ ಸಮುಚ್ಛಯಕ್ಕೆ 50 ಎಕರೆ ಭೂಮಿ ನೀಡಿ, ಶಿಲಾನ್ಯಾಸದ ಸಮಯದಲ್ಲಿ ಪೊಲೀಸ್ ಪಡೆಯ ಮುಂದೆಯೇ ಸಾರ್ವಜನಿಕವಾಗಿ ಬೊಬ್ಬಿಡುವ ರುದ್ರ ಪ್ರತಾಪ (ಆಶಿಶ್ ವಿದ್ಯಾರ್ಥಿ). ಇವರಿಬ್ಬರೂ ಎಣ್ಣೆಸೀಗೆಯಂತ ಎದುರಾಳಿಗಳು. ಹುಬ್ಬಳ್ಳಿಯಿಂದ ಬೆಂಗಳೂರಿಗೆ ವರ್ಗಾವಣೆ ಮಾಡಿಸಿಕೊಳ್ಳುವ, ಎಸಿಪಿ ಸೂರ್ಯ (ಗಣೇಶ್) ಕಡುಭ್ರಷ್ಟ. ವೃತ್ತಿಧರ್ಮ ಪಾಲನೆಯನ್ನು ಮರೆತು ಸ್ವಂತಕ್ಕೆ ಮತ್ತು ತನ್ನ ಕುಟುಂಬಕ್ಕಾಗಿ ಎಷ್ಟು ಬೇಕಾದರೂ ಲಂಚ ತಿಂದು ಸುಖವಾಗಿರಬೇಕು ಎಂಬ ತತ್ವವನ್ನು ಇಟ್ಟುಕೊಂಡು ಬದುಕುವ ಇವನು ಪ್ರತಾಪನಿಗೆ ನಿಕಟವಾಗುತ್ತಾನೆ. ಈ ಮೂವರಿಗೂ ಸಂಬಂಧವಿದೆಯೇ? ಪ್ರತಾಪ ಮತ್ತು ಗೃಹಮಂತ್ರಿಯ ಆಟಾಟೋಪಗಳಿಗೆ ಕಡಿವಾಣ ಹಾಕಲು ಸೂರ್ಯ ಬದಲಾಗುತ್ತಾನೆಯೇ? ಇದಕ್ಕೆ ಕಾರಣವಾಗುವುದು ಏನು? 
ಇತ್ತ ಗಂಭೀರ ಥ್ರಿಲ್ಲರ್ ಅಲ್ಲದ, ಅತ್ಯುತ್ತಮ ಹಾಸ್ಯವನ್ನು ಹೊಂದದ, ತಾಜಾತನದ ಕಥೆಯು ಇರದ ಈ  ಕಮರ್ಷಿಯಲ್ ಮಸಾಲ ಸಿನೆಮಾಗೆ ಸಮಾಧಾನಚಿತ್ತರನ್ನು ಕೆರಳಿಸಿ ನರಳಿಸುವ ಶಕ್ತಿ ಇದೆ. ಮೊದಲಾರ್ಧ ಭ್ರಷ್ಟ ಪೊಲೀಸ್ ಅಧಿಕಾರಿಯ ಕುಚೇಷ್ಟೆಗಳು ಸಾಕಪ್ಪ ಎನ್ನುವಷ್ಟು ಬೇಸರಿಸುತ್ತವೆ. ಸಂಗೀತಳನ್ನು (ರನ್ಯಾ ರಾವ್) ದೇವಸ್ಥಾನದಲ್ಲಿ ಕಂಡು, ಅವಳನ್ನು ವಿವಿಧ ಉಡುಪುಗಳಲ್ಲಿ ಕಲ್ಪಿಸಿಕೊಂಡು, ಅವಳ ಹಿಂದೆ ಬೀಳುವ ಅಧಿಕಾರಿ ತನ್ನೆಲ್ಲಾ ಹುಚ್ಚಾಟಗಳನ್ನು ಪ್ರದರ್ಶಿಸುತ್ತಾನೆ. ಪೊಲೀಸ್ ಠಾಣೆಯಲ್ಲಿ ಪತ್ರಿಕಾ ಗೋಷ್ಠಿ ಕರೆದು, ಪ್ರೇಮವನ್ನು ನಿವೇದಿಸಿಕೊಳ್ಳುತ್ತಾನೆ. ಆ ಯುವತಿಯ ಮನೆಗೆ ಏಕಾಏಕಿ ನುಗ್ಗಿ ಮದುವೆಯಾಗುವಂತೆ ಕೋರುತ್ತಾನೆ. ತನ್ನ ಹಿಂಸೆಯನ್ನು ವಿರೋಧಿಸುವವರಿಗೆ ಯಮನ ರೀತಿಯ ತನ್ನ ಫೋಟೋವುಳ್ಳ ೮೦೧ ಆಂಬ್ಯುಲೆನ್ಸ್ ಒಳಗೆ ದಬ್ಬಿ ಚಚ್ಚಿ ಭಯ ಹುಟ್ಟಿಸುತ್ತಾನೆ. ಇಂತಹ ಅತಿರೇಕದ ಅಸಂಬದ್ಧದ ಘಟನೆಗಳೇ ತುಂಬಿರುವ ಮೊದಲಾರ್ಧ ಇತ್ತ ಸಾಮಜಿಕ-ಪೊಲೀಸ್ ವ್ಯವಸ್ಥೆಗೆ ಒಳ್ಳೆಯ ವಿಡಂಬನೆಯೂ ಅನ್ನಿಸದೆ, ಅತ್ತ ಹಾಸ್ಯ ಕಚಗುಳಿಯನ್ನು ಇಡದೆ, ಪರಿಣಾಮಕಾರಿಯಾದ ಕಥೆಯು ಎನ್ನಿಸದೆ ಪ್ರೇಕ್ಷಕರನ್ನು ಸುಳಿವಿಲ್ಲದ ಸುಳಿಗೆ ಸಿಲುಕಿಸುತ್ತಾರೆ ನಿರ್ದೇಶಕ. ಮಾತುಗಳ-ಶಬ್ದ ವಿಪರೀತತೆಯ ನಂತರ ವಿಧಿ ವಿಪರೀತಕ್ಕೆ ದ್ವಿತೀಯಾರ್ಧ ನೂಕುತ್ತದೆ ಮತ್ತು ಸೂರ್ಯ-ಅಗ್ನಿ-ಪ್ರತಾಪರ ನಡುವಿನ ಸಂಬಂಧ ಅನಾವರಣಗೊಳ್ಳುತ್ತದೆ. 
ದ್ವಿತೀಯಾರ್ಧದಲ್ಲಿ ಪೂರ್ವ ಕಥೆಯ ಫ್ಲಾಶ್ ಬ್ಯಾಕ್ ನಿಂದ, ಒಂದು ಸಣ್ಣ ತಿರುವು ನೀಡಲು ಪ್ರಯತ್ನಿಸಿದರೂ, ಬಹಳ ಪೇಲವವಾದ ಆ ಅಬದಲಾವಣೆ ಪ್ರೇಕ್ಷಕನಿಗೆ ನೆಮ್ಮದಿ ತರುವುದಿಲ್ಲ. ಕೃತಕ ಭಾವುಕತೆಯ ಸಲುವಾಗಿ, ಸೂರ್ಯನನ್ನು ಒಳ್ಳೆಯವನನ್ನಾಗಿಸುವ ಸಲುವಾಗಿ ಮತ್ತೊಂದಷ್ಟು ಘಟನೆಗಳನ್ನು ತುಂಬಿ, ಹೇಗೋ ಕೆಡುಕಿನ ಶಕ್ತಿಗಳನ್ನು ಸಂಹರಿಸುವ ಹೊತ್ತಿಗೆ ಪಟಾಕಿಯ ಹೊಗೆ ಆವರಿಸಿಕೊಂಡಿರುತ್ತದೆ. ವೃತ್ತಿನಿಷ್ಠ ಪೊಲೀಸ್ ಅಧಿಕಾರಿಯ ಮಗನಾಗಿ ಬೆಳೆಯುವ ಮಕ್ಕಳು ತಂದೆಯ ಪ್ರೀತಿಯಿಂದ ವಂಚಿತರಾಗುತ್ತಾರೆ ಎಂಬ ಎಳೆಯನ್ನು ಪ್ರೇಕ್ಷಕರಿಗೆ ದಾಟಿಸಲು ಈ ಕಥೆಗೆ ಸಾಧ್ಯವಾಗಿಲ್ಲ. ತಂದೆ-ಮಗನ ಸಂಘರ್ಷದ ಎಳೆ ಕೂಡ ತೆಳುವಾಗಿ ಮಾತಿನ, ಅತಿರೇಕದ ಕಿರುಚಾಟದ ನಡುವೆ ಗೌಣವಾಗಿ ಕಾಣುತ್ತದೆ. 
ತಾಂತ್ರಿಕವಾಗಿಯೂ ಸಿನೆಮಾ ಅಂತಹ ಉತ್ಕೃಷ್ಟತೆಯನ್ನೇನು ಸಾಧಿಸಿಲ್ಲ. ಇದ್ದುದರಲ್ಲಿ ಛಾಯಾಗ್ರಹಣ ಪೂರಕವಾಗಿ ಕೆಲಸ ಮಾಡಿದೆ. ಅರ್ಜುನ್ ಜನ್ಯ ಸಂಗೀತದಲ್ಲಿ ಮೂಡಿ ಬಂದಿರುವ ಹಾಡುಗಳು ಯಾವುವು ಮನಸ್ಸಿನಲ್ಲಿ ಉಳಿಯುವುದಿಲ್ಲ. ಗಣೇಶ್, ಸಾಯಿಕುಮಾರ್, ಆಶಿಶ್ ವಿದ್ಯಾರ್ಥಿ, ಸಾಧು ಕೋಕಿಲ ಎಂದಿನಂತೆ ತಮ್ಮ ನಟನೆಯನ್ನು ಅಭಿಮಾನಿಗಳಿಗೆ ತಣಿಸುವ ರೀತಿಯಲ್ಲಿ ಮುಂದುವರೆಸಿದ್ದಾರೆ. ಸಣ್ಣ ಪಾತ್ರದಲ್ಲಿ ರನ್ಯಾ ರಾವ್ ಆಗಾಗ ಕಾಣಿಸಿಕೊಂಡು ಮಾಯವಾಗುತ್ತಾರೆ. 
ಬಹುಷಃ ವಾಣಿಜ್ಯ ದೃಷ್ಟಿಯಿಂದ ತೆಲುಗಿನಲ್ಲಿ ಸಾಕಷ್ಟು ಗಳಿಕೆ ಕಂಡಿರಬಹುದು ಎಂಬುದನ್ನು ಬಿಟ್ಟರೆ, ಯಾವ ಕೋನದಲ್ಲಿಯೂ ಇದು ಕನ್ನಡಕ್ಕೆ ರಿಮೇಕ್ ಆಗಲೇಬೇಕಿತ್ತು ಎನ್ನಿಸುವಂತಹ ಗಟ್ಟಿ ಸಿನೆಮಾದಂತೆ ಕಾಣುವುದಿಲ್ಲ. ಕಥೆಯ ತಾಜಾತನದ ದೃಷ್ಟಿಯಿಂದಾಗಲಿ, ಪೊಲೀಸ್ ವ್ಯವಸ್ಥೆಯನ್ನು ನಿರೂಪಿಸುವ ಶೈಲಿಗಾಗಲಿ, ಅಥವಾ ಕಥೆಯಲ್ಲಿನ ಸಂಘರ್ಷವಾಗಲಿ ಯಾವುದಕ್ಕೂ ಹೆಚ್ಚಿನ ತೂಕವಿಲ್ಲದೆ ಹತ್ತರಲ್ಲಿ ಹನ್ನೊಂದನೆಯ ರಿಮೇಕ್ ಆಗಿ ಮೂಡಿದೆ 'ಪಟಾಕಿ'. ತುಸು ಹಾಸ್ಯವನ್ನು ಹೊರತುಪಡಿಸಿದಲ್ಲಿ ನಿರ್ದೇಶಕ ಮಂಜು ಸ್ವರಾಜ್ ಅವರ ಈ ಸೃಷ್ಟಿಯಲ್ಲಿ ಪ್ರೇಕ್ಷಕನಿಗೆ ಆಪ್ತವಾಗುವಂತಾದ್ದು ಹುಡುಕುವುದು ಕಷ್ಟದ ಕೆಲಸ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com