ಬೆಳೆದ ಪೊದೆಗೂದಲ ತಲೆ, ಮುಖತುಂಬಿದ ಮೀಸೆ ಗಡ್ಡ, ಕಂಬಳಿ ಹೊದ್ದ ದೇಹ, ತುಂಡು ಬಟ್ಟೆ ಕಟ್ಟಿದ ಸೊಂಟ, ಕೈಲೊಂದು ಚಿತೆ ಕೆದಕುವ ಉದ್ದ ಕೋಲು. (ರೇಶಿಮೆಯಲ್ಲಿ ಹುದುಗಿ, ಕಿರೀಟ ತೊಟ್ಟು, ಕತ್ತಿ ಹಿಡಿದ ಧೀರ ಹರಿಶ್ಚಂದ್ರನೆಲ್ಲಿ, ಈ ಅನಾಥ ಸ್ಮಶಾನದ ಆಳೆಲ್ಲಿ?) ಆಳೆತ್ತರ ಬೊಂಬುಗಳ ಮೇಲಿನ ಗುಡಿಸಿಲಲ್ಲಿ ಯೋಚಿಸುತ್ತಿದ್ದ ಹರಿಶ್ಚಂದ್ರ. ’ ಹೆಂಡತಿ ಎಲ್ಲೋ, ಮಗ ಹೇಗೋ, ಅವನ ಪಾಡೇನೋ, ಅಪ್ಪ ಇದ್ದೂ ಅವನೀಗ ಅನ್ಯರ ಜೀತದಾಳು. ಯಾರ ಮನೆಯಲ್ಲಿ ಏನು ಕೆಲಸ ಮಾಡುತ್ತಿದ್ದಾನೋ. ಕೈಗೊಬ್ಬ, ಕಾಲಿಗೊಬ್ಬ ಆಳಿದ್ದ ಮಹಾರಾಣಿ ಚಂದ್ರಮತಿ ಎಲ್ಲಿ ನೆಲ ಸಾರಿಸುತ್ತಾಳೋ, ಯಾರ ಪಾದ ತೊಳೆಯುತ್ತಾಳೋ, ಎಷ್ಟು ನೀರು ಸೇದಬೇಕಿದೆಯೋ.. ಛೇ ..ಛೇ ಆ ಹುಡುಗ ಇನ್ನೂ ಬಾಲಕ. ಅವನನ್ನು ಮನೆಯವರು ಗದರುತ್ತಾರೋ, ಬಡಿಯುತ್ತಾರೋ; ತನ್ನೆದುರೇ ಕೆನ್ನೆಗೆ ಕೊಟ್ಟು ಎಳೆದಿದ್ದ, ಅವನನ್ನು ಕೊಂಡಾತ. ನೆನೆದರೆ ಹೊಟ್ಟೆ ಉರಿಯುತ್ತದೆ. ಏನೂ ಮಾಡಲಾರದೆ ಕೇವಲ ಅಳುವುದಷ್ಟೇ ತನಗೆ.’ ಎಷ್ಟನೇ ಬಾರಿಯೋ ಹರಿಶ್ಚಂದ್ರನ ಈ ಸ್ವಗತ! ಮುಂದೇನೆಂದೂ ಗೊತ್ತಿಲ್ಲದ, ಬಹುಶಃ ತನ್ನ ಜೀವನ ಮುಗಿಯಿತೆಂಬ ಭಾವ. ಬದುಕಿರುವ ತನಕ, ಅಷ್ಟು ಹಣ ಕೊಟ್ಟು ಕೊಂಡ ಯಜಮಾನನಿಗೆ, ತನ್ನಿಂದ ಕೆಲಸದಲ್ಲಿ ಯಾವುದೇ ವಿಧವಾದ ತಪ್ಪಾಗುವುದೂ ಬೇಡ. ತನ್ನಿಂದ ಕರ್ತವ್ಯ ಲೋಪವಾಗದಂತೆ ನೋಡಿಕೊಳ್ಳಬೇಕು.