ಅಮರಾವತಿಯಲ್ಲಿ ಇಂದ್ರಸಭೆ. ಈ ಇಂದ್ರನೋ, ಮಹಾ ಭೋಗಿ; ಚಪಲಚಿತ್ತ. ಇಂದ್ರ ಪದವಿಗೇರುವ ತನಕ ತಪಸ್ಸು , ಯಙ್ಞ , ದೀಕ್ಷೆ , ಜಪ . ಹೀಗೆ ಎಲ್ಲ ಕಾಲವೂ ಸಾಧನೆ. " ಶತ ಕ್ರತು " ಇವನ ಮತ್ತೊಂದು ಹೆಸರು . ಎಂದರೆ ನೂರು ಯಙ್ಞಗಳನ್ನು ಮಾಡಿದಾತ . ಇದೀಗ ಇಂದ್ರ . ನಮ್ಮ ಮಂತ್ರಿಗಳಿಗೆ ಒಮ್ಮೆ ಗದ್ದುಗೆ ಸಿಕ್ಕಿತೋ , ಮುಗಿಯಿತು . ಪ್ರಜಾ ಕ್ಷೇಮವೂ ಇಲ್ಲ , ಉತ್ತಮ ನಿರ್ವಹಣೆಯೂ ಇಲ್ಲ . ಇದೀಗ ಕೇವಲ ಭೋಗ , ಅಮೃತ ಪಾನ , ರಂಭಾ ನರ್ತನ , ಅಪ್ಸರಸಿಯರ ಅನವರತ ಸಂಗ , ಅಷ್ಟೇ . ಅಂದೂ ಹಾಗೇ , ಯಾರದೋ ಕುಣಿತ . ನಾಟ್ಯವನ್ನು ಆಸ್ವಾದಿಸುತ್ತಿದ್ದನೋ , ದೇಹ ಸಿರಿಯನ್ನು ಹೀರುತ್ತಿದ್ದನೋ . ಪಾನಕದಲ್ಲಿ ಪುಳ್ಳೆ ಅಡ್ಡ ಬಂದಿತು . ಯಾಕೋ ನೋವಿನ ಎಳೆ . ಯಾರದೋ ಆಕ್ರಂದನ , ಭೂಲೋಕದ ಕಡೆಯಿಂದ . " ನೊಂದ ಸುಂದರಿ ಇರಬಹುದೇ ? ಸಹಾಯ ಮಾಡೋಣವೇ ? " ಚಪಲ ಇಂದ್ರ ಆಕೃತಿಯನ್ನು ಕಲ್ಪಿಸಿಕೊಳ್ಳತೊಡಗಿದ . " ಅಲ್ಲಲ್ಲ , ಅದು ಮಗುವಿನ ಅಳು " , ಇಂದ್ರನ ಮನಸ್ಸನ್ನು ಓದಿದಂತೆ ಹೇಳಿದರು ಬೃಹಸ್ಪತಿಗಳು . " ಆ ಮಗು ಲೋಹಿತಾಶ್ವನಿಗೆ ಹುಟ್ಟಿದೆ . ಹಾಲಿಲ್ಲದೇ ಅಳುತ್ತಿದೆ . " ಗೊಂದಲದಿಂದ ಇಂದ್ರ ಕೇಳಿದ , " ಆಯಿತು , ಕೋಟಿ ಕೂಸುಗಳು ಕೂಗುತ್ತವೆ ಹುಟ್ಟುತ್ತಿದ್ದಂತೆಯೆ , ಅದರಲ್ಲೇನು ವಿಶೇಷ ? ಆದರೆ ಇದರ ಕೂಗು ಇಲ್ಲಿ , ಸ್ವರ್ಗದಲ್ಲೇಕೆ ಕೇಳುತ್ತಿದೆ ? " . ಬೃಹಸ್ಪತಿಗಳು ವಿವರಿಸಿದರು , " ಸಾಮಾನ್ಯ ಸಂದರ್ಭಗಳಲ್ಲಾಗಿದ್ದರೆ , ಇದರ ಕೂಗು ಇಲ್ಲಿ ಕೇಳಿಸುತ್ತಿರಲಿಲ್ಲ . ಚ್ಯವನ ಮಹರ್ಷಿ ಚರುವನ್ನು ತಯಾರಿಸುತ್ತಿರುವಾಗ ಇಂದ್ರ ಮಂತ್ರವನ್ನು ಆವಾಹಿಸಿದ್ದ ; ‘ ಹುಟ್ಟಿದ ಮಗು ಇಂದ್ರನಷ್ಟು ಸಬಲವಾಗಲಿ’, ಎಂದು. ಆದರೆ ಅಚಾತುರ್ಯ ನಡೆದು ಹೋಯಿತು. ರಾಣಿಯ ಬದಲು ರಾಜ ಕುಡಿದುಬಿಟ್ಟ. ಹುಟ್ಟಿದ ಮಗುವಿಗೆ ತಾಯಿಯೂ ಇಲ್ಲ, ಹಾಲೂ ಇಲ್ಲ. ಒಂದರ್ಥದಲ್ಲಿ, ದೇವರಾಜ, ನೀನೂ ಅದರ ತಂದೆ ಅಲ್ಲವೇ? ಮಗುವಿನ ನಿಜವಾದ ಅಪ್ಪ ಹೊಟ್ಟೆ ಕುಯ್ಸಿಕೊಂಡು ಮಲಗಿದ್ದಾನೆ, ಏನೂ ಮಾಡಲಾಗದೆ. ಇದೀಗ ಮಗುವಿನ ರಕ್ಷಣೆ ನಿನ್ನ ಕರ್ತವ್ಯ . "