ಮಿಲನಾಂತ್ಯದಲ್ಲಿ ಸಂತಸದಿಂದಿರುವ ಬದಲು ಗಂಡನ ಮುಖ ಕಪ್ಪಿಟ್ಟಿದ್ದು ಕಂಡು ಕೈಕಸಿ ಕೇಳಿದಳು; " ಯಾಕೆ ಸ್ವಾಮಿ ಮುಖ ಮುದುಡಿದೆ ? ನಗುವಿನ ಬದಲು ಏನೋ ಕಳವಳ, ಏನೋ ಹೆದರಿಕೆಯ ಭಾವ ಕಾಣಿಸುತ್ತಿದಿಯಲ್ಲ? ನನ್ನಿಂದೇನಾದರೂ ತಪ್ಪಾಯಿತಾ? ". ತಲೆ ಸವರುತ್ತಾ ವಿಶ್ರವಸ್ ನುಡಿದ, " ತಪ್ಪಾಗಿದ್ದು ನಿಜ, ಆದರೆ ಅದು ನಿನ್ನಿಂದ ಅಲ್ಲ. ನೀನು ಮಗು ಬಯಸಿ ಬಂದಿದ್ದೂ ತಪ್ಪಿಲ್ಲ. ನಿನ್ನನ್ನು ಕೂಡಿದ್ದೂ ತಪ್ಪಲ್ಲ. ಆದರೆ ತಪ್ಪು ಆಗಿದ್ದು ಎಲ್ಲಿ ಎಂದರೆ ನಮ್ಮ ನಿರ್ಣಯವನ್ನು ಜಾರಿ ಮಾಡುವ ಕಾಲದಲ್ಲಿ. ನಮ್ಮ ಋಷಿ - ಮುನಿಗಳು ಪ್ರತಿಯೊಂದು ಕಾರ್ಯಕ್ಕೂ ಒಂದು ಮುಹೂರ್ತವನ್ನು ಸ್ಪಷ್ಟ ಪಡಿಸುತ್ತಾರೆ. ಮದುವೆಯಿರಲಿ, ಉಪನಯನ ಇರಲಿ, ವ್ರತ ಇರಲಿ, ಯಙ್ಞ ಇರಲಿ, ಗೃಹಾರಂಭ ಇರಲಿ, ಪ್ರಯಾಣ ಇರಲಿ... ಹೀಗೆ ಏನು ಮಾಡಬೇಕಾಗಿದ್ದರೂ ಕೆಲವು ಸುಮುಹೂರ್ತಗಳನ್ನ ಅವರು ಗುರ್ತು ಮಾಡಿದ್ದಾರೆ. ನಾವು ಅಙ್ಞಾನದಿಂದಲೋ, ಅಹಂಕಾರದಿಂದಲೋ ಅವನ್ನು ಮೀರಿದರೆ ಹೀಗೇ ಆಗುವುದು. ಇವೆಲ್ಲಾ ಗೊತ್ತಿದ್ದ ನಾನು, ನಾನೂ ಕೊಂಚ ಆತುರ ಪಟ್ಟೆ. "ಕೈಕಸಿಗೂ ಈಗ ಕೊಂಚ ಅಧೈರ್ಯ, ನಡುಕ. " ಏನಾಯಿತೀಗ ಅದರಿಂದ ?" . ಭವಿಷ್ಯದಲ್ಲಿ ಕಣ್ಣಿಟ್ಟು ಹೇಳಿದ ವಿಶ್ರವಸ್; " ದುರ್ಮುಹೂರ್ತದಲ್ಲಿ ಸಂಯೋಗವಾದ್ದರಿಂದ ಆ ಪ್ರದೋಷದಲ್ಲಿ ನಮ್ಮೀರ್ವರ ಜೀವ ಧಾತುಗಳು ಬೆರೆತಿದ್ದರಿಂದ ಫಲಿತವೂ ಕೆಟ್ಟದ್ದೇ. ಹುಟ್ಟುವ ಸಂತಾನ, ನೋಡೋದಕ್ಕೆ ಭೀಕರ, ಮಾಡೋ ಕೆಲಸಗಳು ದುಷ್ಟ ಕಾರ್ಯಗಳು, ಜಗತ್ತಿಗೇ ಭಯ ಉಂಟು ಮಾಡುತ್ತಾರೆ, ಸಾಧುಗಳಿಗೆ ಹಿಂಸೆ ಕೊಡುತ್ತಾರೆ, ಒಟ್ಟಿನಲ್ಲಿ ಪಾಪಿಷ್ಟರನ್ನ ನೀನು ಹೆರಬೇಕಾಗುತ್ತೆ. "