ಒಳ ಬಂದ ಮಹಾರಾಜರನ್ನು ಕಂಡು ವಿಶ್ವಮಿತ್ರರಿಗೆ ಕರುಳು ಚುರ್ರೆಂದಿತು . ಹೇಗಿದ್ದ ತೇಜಸ್ವಿ ಹೇಗಾಗಿಬಿಟ್ಟ ! ಮೊನ್ನೆ - ಮೊನ್ನೆ ಪಟ್ಟಾಭಿಷೇಕಕ್ಕೆ ತಾವೂ ಹೋಗಿದ್ದರು. ಹೇಗೆ ದೃಢವಾಗಿ, ಆಕರ್ಷಕವಾಗಿ ಸಿಂಹದಂತೆ ಇದ್ದ ! ಈಗ ಬಗ್ಗಿ ಹೋಗಿದೆ ನಡು. ಕಣ್ಣು ಗುಳಿಯಲ್ಲಿ ಇಳಿದಿವೆ . ಕೈಗಳು ಒರಟಾಗಿ ಸುಕ್ಕಾಗಿವೆ. ಕಾಲುಗಳು ಥರ - ಥರ ನಡುಗುತ್ತಿವೆ. ಕಿರೀಟ ಕೆಳಗಿಟ್ಟು ನಮಸ್ಕರಿಸಿದರೆ ಆ ಕೂದಲೋ ... ಓಹ್ ! ಹೇಗೆ ಹೊಳೆಯುತ್ತಿತ್ತು , ಈಗದು ಥೂ ! ಒರಟು , ಕೆಂಚು, ಸಿಕ್ಕು, ಆಕಾಶ ನೋಡುತ್ತಿದೆ. ಆರು ತಿಂಗಳಲ್ಲೇ ಏನು ಬದಲಾವಣೆ!" ಕೂಡಿ. ಕುಶಲವೇ ಎಂದು ಕೇಳುವಂತೆಯೇ ಇಲ್ಲವಲ್ಲ, ಏಕೆ ಹೀಗೆ ಭೂತದಂತೆ ಕಾಣುತ್ತಿದ್ದೀರಿ ಮಹಾರಾಜರೆ?", ನೊಂದ ದನಿಯಲ್ಲೇ ನುಡಿದರು ಮಹರ್ಷಿಗಳು. " ಹೌದು ಮಹಾಸ್ವಾಮಿ , ನನ್ನ ಅದೃಷ್ಟವೇ ಹೀಗೇನೋ ? ಮೊದಲು, ಹೆಂಡತಿಯಾಗುವವಳು ಕೈಕೊಟ್ಟಳು. ಆನಂತರ ಅಪ್ಪ ಮನೆಯಿಂದಲ್ಲ; ಊರಿನಿಂದಲೇ ಹೊರಗಟ್ಟಿದ. ಏನೋ ಒಂದೈದು ವರ್ಷ ನಿಮ್ಮೊಡನಿದ್ದೆ, ಅದೇ ನನ್ನ ಭಾಗ್ಯ. ನಿಮ್ಮ ಅನುಭವಗಳನ್ನ, ನಿಮ್ಮ ಕಥೆಗಳನ್ನ, ನಿಮ್ಮ ಸಾಹಸವನ್ನ, ನಿಮ್ಮ ತಪಸ್ಸನ್ನ ನಿಮ್ಮ ಬಾಯಿಂದಲೇ ಕೇಳಿ ಧನ್ಯನಾದೆ. ಆದರೆ ಈಗ ಯಥಾಪ್ರಕಾರ ನನ್ನ ಗುರುಗಳಿಂದಲೇ ಶಾಪ. ನೇರವಾಗಿ ಅವರಿಂದಲ್ಲದಿದ್ದರೂ ಅವರ ಮಕ್ಕಳು ಶಾಪ ಕೊಟ್ಟಿದ್ದಾರೆ."