ಝಗಝಗಿಸುತ್ತಿರುವ, ನವರತ್ನಗಳನ್ನೇ ಹುದುಗಿಸಿರುವ ಅರಮನೆ. ಅದರ ಎದುರು ಇಳಿಯುತ್ತಿದ್ದಂತೆಯೇ ಸ್ವಾಗತಿಸಲು ಸಡಗರದಿಂದ ಬಂದರು ದೇವತೆಗಳು. ತ್ರಿವಿಕ್ರಮನೇ ಮುಂದಿದ್ದಾನೆ. ತನ್ನ ಕೈ ಹಿಡಿದು ಕೆಳಗಿಳಿಸಿಕೊಂಡಿದ್ದೂ ವಾಮನನೇ. ಹೆಬ್ಬಾಗಿಲ ಬಳಿ ನಿಂತು ಹೇಳಿದ; " ಬಲಿಚಕ್ರವರ್ತಿ, ನಿನ್ನ ದಾನಕ್ಕೆ ಸಮವಾಗಿ ನಾನೆಷ್ಟೇ ಕೊಟ್ಟರೂ ನನಗೆ ತೃಪ್ತಿ ಇಲ್ಲ. ನಾನು ನನ್ನೊಂದಂಶದಿಂದ ಇನ್ನು ಮುಂದೆ ನಿನ್ನ ದ್ವಾರಪಾಲಕನಾಗಿಬಿಡುವೆ. (ಆತ್ಮೀಯರೇ, " ದಾನ ಕೊಟ್ಟಾಗ ಯಾವ ಗಾತ್ರವಿತ್ತೋ, ಆ ಪಾದದ ಅಳತೆಗೆ ಮಾತ್ರ ದಾನ ಕೊಡುವೆ" ಎಂದು ಮೊದಲೆರಡು ದಾನಗಳಲ್ಲಿ ಕಾನೂನಿನ ಮಾತನಾಡದೇ, ಸಾವು ನಿಶ್ಚಯವೆಂದು ಗೊತ್ತಿದ್ದೂ, ಗೊತ್ತಿದ್ದೂ ತಲೆಯನ್ನೇ ಕೊಟ್ಟ ಬಲಿ ದೊಡ್ಡವನೋ, ಎಲ್ಲವನ್ನೂ ಹಿಂತಿರುಗಿಸಿ , ಭವಿಷ್ಯದ ಇಂದ್ರ ಪದವಿಯನ್ನೂ ಕೊಟ್ಟು , ಬಲಿಯ ಅಪೇಕ್ಷೆಯಂತೆ ಪ್ರತಿನಿತ್ಯವೂ ಭೂಲೋಕಕ್ಕೆ ಹೋಗಿ ಬರಲು ಅವಕಾಶವನ್ನು ಕಲ್ಪಿಸಿ, ಇದೀಗ ಬಲಿಯ ಬಾಗಿಲ ಭಂಟನಾಗುವೆನೆಂದ ಹರಿ ದೊಡ್ಡವನೋ, ಓದುಗರೇ, ನೀವೇ ತೀರ್ಮಾನಿಸಿ-ಲೇ)