ಇದ್ದಕ್ಕಿದ್ದಂತೆಯೇ ರಾಮರು ಸುಮ್ಮನಾಗಿದ್ದನ್ನು ಕಂಡು.. " ಅಷ್ಟೇನೇ? ಮುಗಿದೇ ಹೋಯಿತೆ? "ಎಂದರು ಶತಾನಂದರು. "ನನಗೆ ತಿಳಿದಷ್ಟು ಮತ್ತು ನನ್ನ ಅಪೇಕ್ಷೆಯೆಂದರೆ ಇಷ್ಟೇ. ಅಗ್ನಿಯನ್ನೂ ಸಾಕ್ಷಿಯಾಗಿಟ್ಟುಕೊಳ್ಳುವುದರಿಂದ ಯಙ್ಞಕುಂಡಕ್ಕೆ ಪ್ರದಕ್ಷಿಣೆ ಬಂದು, ಆ ಹವ್ಯವಾಹನನಿಗೆ ನಮಸ್ಕರಿಸಿದರೆ ಅಲ್ಲಿಗೆ ಮುಗಿದೇ ಹೋಯಿತು. ".ಶ್ರೀರಾಮರು "ಓಂ ಸ್ವಸ್ತಿ!" ಎಂದು ಎದ್ದರು.
***************
ಇತ್ತ ಶ್ರೀರಾಮರೊಡನೆ ಶತಾನಂದರು ಮಾತನಾಡುತ್ತಿದ್ದಂತೆಯೇ ಅತ್ತ ಜನಕ - ದಶರಥರ ನಡುವೆ ವಿವಾಹದ ವಿಷಯವೇ ಮಾತುಕತೆಯಾಗುತ್ತಿತ್ತು. ಆದರೆ ಅದು ವಿವಾಹ ಕ್ರಮದಬಗ್ಗೆ ಅಲ್ಲ! ಭರತ, ಲಕ್ಷ್ಮಣ, ಶತ್ರುಘ್ಞರ ಮದುವೆಗೆ ಸಂಬಂಧಿಸಿದ್ದು. ಜನಕರ ಮತ್ತೊಬ್ಬ ಮಗಳು ಊರ್ಮಿಳೆಯನ್ನು ಲಕ್ಷ್ಮಣನಿಗೂ, ಜನಕನ ತಮ್ಮ ಕುಶಧ್ವಜನ ಮಕ್ಕಳು ಮಾಂಡವೀ- ಶೃತಕೀರ್ತಿಯರನ್ನು ಭರತ-ಶತ್ರುಘ್ನರಿಗೂ ಮದುವೆ ಮಾಡಿಕೊಡಬೇಕೆಂದು ವಿಶ್ವಮಿತ್ರರು ಮುಂದಿಟ್ಟ ಪ್ರಸ್ತಾವಕ್ಕೆ ಸರ್ವಾನುಮತದ ಬೆಂಬಲ ಸಿಕ್ಕಿತು.
****************
ಮಾರನೆಯ ದಿನವೇ ಲಗ್ನ. ನಿರೀಕ್ಷಿಸಿದ್ದಂತೆಯೇ ನಾಲ್ಕು ವೇದಿಕೆಗಳನ್ನು ನಿರ್ಮಿಸಿದ್ದಾರೆ. ಹೋಮ ಕುಂಡಗಳು, ರಂಧ್ರ ಸಹಿತ ಕಲಶಗಳು, ಬಣ್ಣದ ಮಡಕೆಗಳು, ಮಾವಿನ ತೋರಣ, ಬಾಳೆ ಗಿಡಗಳು, ಇತ್ಯಾದಿಗಳಿಂದ ಕಲ್ಯಾಣ ಮಂಟಪ ಸಿದ್ಧವಾಗಿತ್ತು. ಹಿಂದಿನ ದಿನವೇ ಶ್ರಾದ್ಧ ಮಾಡಿ ಗೋದಾನ ಮಾಡಿ ಸಿದ್ಧವಾಗಿದ್ದಾನೆ ದಶರಥ.
( ಶ್ರಾದ್ಧಂ ಕೃತ್ವಾ ವಿಧಾನತಃ ಚಕ್ರೇ ಗೋದಾನಂ ಉತ್ತಮಂ )
ಜನಕ ಮಹಾರಾಜ ತನ್ನ ಮಕ್ಕಳನ್ನು ವೇದಿಕೆಗೆ ಕರತಂದ. ಆಗಲೇ ಸೀತಾದರ್ಶನ ರಾಮರಿಗೆ! ಗಾಂಭೀರ್ಯವೇ ನೆಡೆದುಬಂದಂತೆ; ಸೌಂದರ್ಯವೇ ರೂಪುವೆತ್ತಂತೆ; ಸಾತ್ವಿಕತೆಯೇ ಸೀತೆಯಾದಂತೆ; ಕೋಮಲತೆಯೇ ಕದಲಿ ಬಂದಂತೆ, ಮಾರ್ದವತೆಯೇ ಮೈದೋರಿದಂತೆ. ಕಂಗಳಲ್ಲಿ ಹೊಳಪು, ನಡಿಗೆಯಲ್ಲಿ ಮಂದಗಮನ, ತುಸು ನಾಚಿದ ಮುಖ, ತನ್ನನ್ನು ಗೆದ್ದ ವೀರನ ಬಗ್ಗೆ ಕೇಳಿ - ಕೇಳಿ ಕುತೂಹಲವೇ ಕಣ್ಣಾಗಿ ಕಂಡಳು ಶ್ರೀರಾಮರನ್ನು! ಎಂತಹ ತೇಜಸ್ಸು! ಎಂತಹ ದೃಢ ಶರೀರ! ಎಂತಹ ಸೌಂದರ್ಯ! ಎಂತಹ ನೆಟ್ಟ ಧೀರ ನಿಲುವು! ಓಹ್ ! ಬೆವರಿಬಿಟ್ಟಳು ಜಾನಕಿ!! ತನ್ನ ಕಣ್ಣ ಮುಂದೆ ಆಗಾಗ್ಗೆ ಮಿಂಚುತ್ತಿದ್ದ ಮೋಹನಾಂಗಿ ಮೈಥಿಲಿಯನ್ನು ಕಂಡು ಶ್ರೀರಾಮರಿಗೆ ಮೈ ಬಿಸಿ ! ನಡೆದು ಬಂದ ನಳಿನಾಕ್ಷಿ ಯಙ್ಞ ಕುಂಡದ ಮುಂದೆ ನಿಂತಳು. ಆಕೆಯಲ್ಲಿ ಮಗ್ನರಾದ ರಾಮರನ್ನು ಎಚ್ಚರಿಸಿತು ಜನಕ ಕಂಠ, " ರಾಮ, ಈಕೆ ನನ್ನ ಮಗಳು ಸೀತೆ. ಇದೀಗ ನಿನ್ನ ಧರ್ಮಾಚರಣೆಯಲ್ಲಿ ಭಾಗಸ್ವಾಮಿಯಾಗುತ್ತಾಳೆ. ಬಾ , ಇವಳನ್ನೊಪ್ಪಿಸಿಕೊ. ನಿನಗೆ ಒಳ್ಳೆಯದಾಗಲಿ, ಇವಳ ಪಾಣಿಗ್ರಹಣ ಮಾಡು.
(ಇಯಂ ಸೀತಾ ಮಮ ಸುತಾ ಸಹ ಧರ್ಮ ಚರೀ ತವಾ
ಪ್ರತೀಚ್ಚ ಚೈನಾಂ ಭದ್ರಂತೇ ಪಾಣಿಂ ಗೃಹ್ಣೀಷ್ವ ಪಾಣಿನಾ)
" ಈಕೆ ನಿನ್ನನ್ನು ನಿನ್ನ ನೆರಳಿನಂತೆ ಸದಾ ಅನುಸರಿಸುತ್ತಾಳೆ . ಈಕೆ ಮಹಾ ಪತಿವ್ರತೆ , ಹಾಗೂ ನಿನ್ನ ಕೈ ಹಿಡಿದಿದ್ದರಿಂದ ಮಹಾ ಭಾಗ್ಯಶಾಲಿನಿ"
( ಪತಿವ್ರತಾ ಮಹಾಭಾಗಾ ಭಾರ್ಯೇವ ಅನುಗತಾ ಸದಾ )
---೦೦೦---