ಶ್ರೀರಾಮರನ್ನು ವಿರೋಧಿಸುವುದಕ್ಕೇ ಆಗುತ್ತಿಲ್ಲವಲ್ಲ! ಹೇಗೆ ಇಷ್ಟು ಖಚಿತವಾಗಿ ತಮ್ಮ ಅಭಿಪ್ರಾಯವನ್ನು ಮಂಡಿಸುತ್ತಿದ್ದಾರೆ? "ಅಲ್ಲಪ್ಪ, ಕನ್ಯಾದಾನದಿಂದ ತನ್ನ ಹಿಂದಿನ ಹತ್ತು ತಲೆಮಾರಿಗೆ, ಮುಂದಿನ ಹತ್ತು ತಲೆಮಾರಿಗೆ, ಹಾಗೂ ತನಗೆ, ಒಟ್ಟು ಇಪ್ಪತ್ತೊಂದು ತಲೆಗಳಿಗೆ ನರಕ ಬರದಂತೆ ಎಂದಿದೆಯಲ್ಲ... "ಎಂದು ಯಾವುದೋ ಮದುವೆ ಮಂತ್ರವನ್ನು ನೆನಪಿಸಿಕೊಳ್ಳುತ್ತಾ ಹೇಳಿದರು ಶತಾನಂದರು. "ಗುರುಗಳೆ, ಅಕಸ್ಮಾತ್ ಪುಣ್ಯ ಬರುವುದಿದ್ದರೆ; ಸ್ವರ್ಗ ಸಿಗುವುದಿದ್ದರೆ, ಅಪ್ಪನ ಮನೆ ಬಿಟ್ಟು, ಕಂಡು ಕೇಳರಿಯದ ಗಂಡನ ಮನೆಗೆ ಹೋಗಿ, ಅಲ್ಲಿನ ಮನೆಯ ಎಲ್ಲ ಸದಸ್ಯರನ್ನೂ ಹೊಂದಿಕೊಳ್ಳುವ ಹೆಣ್ಣಿಗೆ ಬರಬೇಕೋ, ಅಪ್ಪನಿಗೆ ಬರಬೇಕೋ? ಇದಾವ ನ್ಯಾಯ? "ಶ್ರೀರಾಮರ ಮಾತಿಗೆ ತಮ್ಮ ಕೊನೆಯ ಅಸ್ತ್ರವಾಗಿ ಶತಾನಂದರು ಮನುವಿನ ಮಾತನ್ನು ಘೋಷಿಸಿಬಿಟ್ಟರು. " ಬ್ರಹ್ಮ ವಿವಾಹದಲ್ಲಿ ಆಹೂಯ ದಾನಂ ಕನ್ಯಾಯಾಂ ಎಂದೂ, ದೈವ ವಿವಾಹದಲ್ಲಿ ಅಲಂಕೃತ್ಯ ಸುತಾ ದಾನಂ ಎಂದೂ, ಆರ್ಷವಿವಾಹದಲ್ಲಿ ಕನ್ಯಾ ಪ್ರದದಾನಂ ವಿಧಿವತ್ ಆರ್ಷೇ ಎಂದೂ, ಪ್ರಾಜಾಪತ್ಯದಲ್ಲಿ ಕನ್ಯಾ ಪ್ರದಾನಂ ಅಭ್ಯರ್ಚ್ಯ ಎಂದೂ, ಅಸುರ ವಿವಾಹದಲ್ಲಿ ಕನ್ಯಾ ಪ್ರದಾನಂ ಸ್ವಾಚ್ಛಂದ್ಯ ಎಂದೂ, ನಿಮ್ಮ ವಂಶದ ಮೂಲ ಪುರುಷರಲ್ಲೊಬ್ಬ ಮನುವೇ ಹೇಳಿದ್ದಾನಲ್ಲ?"