ಮತ್ತೆ ತಾಯಿಗೆ ವಂದಿಸಿ ಹೊರಡುವ ಮುನ್ನ ಕೊಂಚ ಆತಂಕದಿಂದ ಹೇಳಿದರು; "ಅಮ್ಮ, ನನಗೆ ಈ ರಾಜ್ಯವನ್ನು ಆಳುವ ಶಕ್ತಿ ಇದೆಯೆ? ನಿನ್ನ ಆಶೀರ್ವಾದ ಬೇಕು". ತಾಯಿ ಮಗನ ತಲೆ ನೇವರಿಸಿ "ನಿನ್ನ ಶಕ್ತಿ ಎಷ್ಟೆಂದು ಎಲ್ಲರೂ ಹೇಳುತ್ತಿದ್ದಾರೆ. ನನ್ನ ಪುಣ್ಯ ಕರ್ಮಗಳು ಫಲಿಸಿ ನಾನೀಗ ರಾಜಮಾತೆಯಾಗುತ್ತಿದ್ದೇನೆ". ಸಂತಸದಿಂದ ಬೀಗುತ್ತ ಹೇಳಿದಳು ತಾಯಿ. "ಅಮ್ಮ, ಅರಸರು ನನಗೆ ಪಟ್ಟ ಕಟ್ಟುವೆನೆಂದಾಗ ಹೇಳಿದ ಒಂದು ಮಾತು, ಆ ಹುದ್ದೆಯ ಗಾಂಭೀರ್ಯವನ್ನೂ, ಜವಾಬ್ದಾರಿಯನ್ನೂ, ಭಾರವನ್ನೂ ಹೇಳಿಬಿಟ್ಟಿತು. ’ಅಮ್ಮ ನನ್ನನ್ನು ಪ್ರಜೆಗಳ ಪಾಲನೆಯನ್ನು ಮಾಡಲೆಂದು ಅಪ್ಪ ನಿಯೋಜಿಸಿದ್ದಾರೆ’ (ಅಂಬ ಪಿತ್ರಾ ನಿಯುಕ್ತೋಸ್ಮಿ ಪ್ರಜಾಪಾಲನ ಕರ್ಮಣಿ) ಎಂದರೆ ಅಷ್ಟೊಂದು ಸಂಖ್ಯೆಯ ಜನಪದರಿಗೆ ಅನ್ಯಾಯವಾಗದಂತೆ, ಯಾರಿಗೂ ತೊಂದರೆಯಾಗದಂತೆ ಎಲ್ಲರನ್ನೂ ಪಾಲಿಸುವುದು ಹೇಗೆ? ಪ್ರಜಾಪಾಲನೆಯೆಂದರೆ ಮಕ್ಕಳಂತೆ ಪೋಷಿಸುವುದು. ಪ್ರಜಾನಾಯಕನದು ಎಷ್ಟು ದೊಡ್ಡ ಜವಾಬ್ದಾರಿ. ಎಂದೂ ಧರ್ಮದ ದಾರಿಯಲ್ಲಿ, ನ್ಯಾಯವಾಗಿ, ಯಾವುದೇ ಪಕ್ಷಪಾತವಿಲ್ಲದೇ, ಸುಗಮವಾಗಿ ಕರ್ತವ್ಯ ನಿರ್ವಹಿಸುವಂತೆ ಆಶೀರ್ವಾದ ಮಾಡು."