ನಮ್ಮ ನಡುವಿನ ಅಂತರಕ್ಕೆ, ಬೆಂಗಳೂರಿನ ಸೈಟಿನ ಬೆಲೆ ಏರುವಿಕೆಗೆ, ಶಾಲೆಯ ಫೀಸ್ ಏರುವಿಕೆ, ಡಾಲರ್, ಬಂಗಾರದ ಬೆಲೆಯೇರಿಕೆ ಹೀಗೆ ಜಗತ್ತಿನ ಯಾವುದೇ ಸಮಸ್ಯೆಯ ಹೆಸರೇಳಿ ಅದಕ್ಕೆಲ್ಲಾ ಕಾರಣ ನಾವು-ನೀವು. ನಾವು-ನೀವು ಸರಿಯಾಗಿಬಿಟ್ಟರೆ ಸಮಾಜ ತಾನಾಗೇ ಸರಿಯಾಗುತ್ತದೆ. ಸಣ್ಣ ಉದಾಹರಣೆ ನೋಡಿ ಸಾವಿರಾರು ಸಂಖ್ಯೆಯ ಜಿಂಕೆಗಳ ಹಿಂಡನ್ನ ಕೇವಲ ನಾಲ್ಕೈದು ಸಿಂಹ ಅಥವಾ ಹುಲಿಗಳು ಅಟ್ಟಾಡಿಸಿ.. ಬೇರ್ಪಡಿಸಿ ಕೊನೆಗೆ ತನ್ನ ಆಹಾರವ ಪಡೆದುಕೊಳ್ಳುತ್ತದೆ. ನಮ್ಮ ಸ್ಥಿತಿಯೂ ಇದಕ್ಕಿಂತ ಭಿನ್ನವೇನಲ್ಲ. ಜಿಂಕೆಗಳಿಗೆ ಸಿಂಹದ ವಿರುದ್ಧ ತಿರುಗಿ ಬೀಳುವ ಯೋಚನಾಶಕ್ತಿ, ಸಂಘಟನಾಶಕ್ತಿ ಇಲ್ಲ. ನಾವು ಮನುಷ್ಯ ಪ್ರಾಣಿಗಳು ಚಿಂತಿಸುವ ಶಕ್ತಿ ನಮಗಿದೆ ಆದರೆ ಸಂಘಟನೆಗೆ ಯಾರ ಅಪ್ಪಣೆಗಾಗಿ ಕಾದು ಕುಳಿತ್ತಿದ್ದೇವೆ?