ಕಾರ್ತವೀರ್ಯನ ಮಕ್ಕಳು ಬಂದಾಗ ಆಶ್ರಮದಲ್ಲಿ ನಿಶ್ಶಬ್ದ; ಯಾರೂ ಇಲ್ಲ; ಖಾಲಿ. ಎಲ್ಲರೂ ಎಲ್ಲೋ ಹೋಗಿದ್ದಾರೆ. ಇನ್ನೇನು ಹಿಂದಿರುಗಬೇಕೆಂದಿದ್ದರು. ಮೃದುವಾದ ಧ್ವನಿ ಕೇಳಿತು. "ಬನ್ನಿ, ಬನ್ನಿ. ಮಧ್ಯಾಹ್ನಕ್ಕೆ ಬಂದಿದ್ದೀರಿ. ಊಟ ಮಾಡಿಕೊಂಡು ಹೋಗಿ. "ತಿರುಗಿ ನೋಡಿದರು, ವಿಭೂತಿಯಿಟ್ಟ ಪ್ರಶಾಂತ ಮುಖ. "ಒಳಗೆ ಬಚ್ಚಿಟ್ಟುಕೊಂಡಿದ್ದೋ, ನಾವು ಊಟ ಮಾಡುವುದೂ ಇಲ್ಲ; ನೀನು ಊಟ ಮಾಡುವುದಕ್ಕೆ ಬಿಡುವುದೂ ಇಲ್ಲ. "ನುಗ್ಗಿದರು, ಸುತ್ತುಗಟ್ಟಿದರು, ಕಾಲುಗಳನ್ನು ಹಿಡಿದು ನೂಕಿದರು, ನೆಲಕ್ಕೆ ತಲೆ ಒಡೆದು ನೋವಿನಿಂದ ಕಿರಿಚಿದರು, ದರದರ ಎಳೆದರು. ಕಲ್ಲು-ಮುಳ್ಳುಗಳಲ್ಲಿ ದೇಹ ಉಜ್ಜಿ-ಉಜ್ಜಿ ರಕ್ತ ಸುರಿಯಿತು. ಋಷಿಗಳು ನೋವಿನಿಂದ ಕೂಗಿದರು, ನೋವು! ನೋವು! ಆದರೆ ಸಿಟ್ಟೇ ಬರುತ್ತಿಲ್ಲ. ಒಮ್ಮೆ ಮಂತ್ರ ನೆನಪಿಸಿಕೊಂಡು ಶಪಿಸಿದ್ದರೆ ಸಾಕಿತ್ತು; ಎಲ್ಲರೂ ಸುಟ್ಟು ಹೋಗುತ್ತಿದ್ದರು! ಇಲ್ಲ, ಕೋಪ ಹುಟ್ಟುತ್ತಿಲ್ಲ. ಸಾಮಾನ್ಯರಂತೆ ಅರಚುತ್ತಿದ್ದರು. ಎಳೆದು, ಎಳೆದು, ಕೊನೆಗೆ ಭಲ್ಲೆಗಳಿಂದ ಜಮದಗ್ನಿಗಳನ್ನು ಮೈತುಂಬ ಚುಚ್ಚಿದರು. ಕತ್ತಿಯ ತುದಿ ಕಣ್ಣುಗಳನ್ನು ಇರಿದು ಗುಡ್ಡೆಗಳನ್ನು ಒಡೆದು ಹಾಕಿತು. ಕಲ್ಲನ್ನೆತ್ತಿ ಬುರುಡೆಗೆ ಹೊಡೆದರು, ಬ್ರಹ್ಮ ರಂಧ್ರ ಒಡೆದು ಪ್ರಾಣ ಹಾರಿ ಹೋಯಿತು. (ಮುಂದುವರೆಯುವುದು...)