ಭಾರತ ದೇಶದ ವಿವಿಧ ಬ್ಯಾಂಕ್ ಗಳಲ್ಲಿ 10 ಸಾವಿರ ಕೋಟಿ ರು. ಗೂ ಹೆಚ್ಚು ಸಾಲ ಉಳಿಸಿಕೊಂಡು, ಉದ್ದೇಶಪೂರ್ವಕ ಸುಸ್ತಿದಾರ ಪಟ್ಟ ಕಟ್ಟಿಕೊಂಡು, ದೇಶ ತೊರೆದು, ಇಂಗ್ಲೆಂಡ್ ನ ಲಂಡನ್ ನಗರದಲ್ಲಿ ಅಡಗಿಕೊಂಡಿರುವ ಮದ್ಯದ ದೊರೆ ವಿಜಯ್ ಮಲ್ಯ ಈಗ ದೇಶದ ಜನರ ಮನಸ್ಸಿನಲ್ಲಿ ವಿಲನ್ ಆಗಿರುವುದು ಸುಳ್ಳಲ್ಲ. ಅಷ್ಟೇ ಅಲ್ಲದೇ ಮಲ್ಯ ದೇಶ ತೊರೆದಿರುವ ಮತ್ತು ಸಾಲದ ವಿಚಾರ ಎಲ್ಲಾ ಮಾಧ್ಯಮಗಳಲ್ಲಿ ಮತ್ತು ಸಂಸತ್ತಿನಲ್ಲಿ ಸಾಕಷ್ಟು ಸದ್ದು ಮಾಡುತ್ತಿವೆ. ಆದರೆ ದೇಶದ ಬ್ಯಾಂಕ್ ಗಳಲ್ಲಿ ಮಲ್ಯ ಮಾತ್ರವೇ ಸಾಲ ಮಾಡಿ ಉದ್ದೇಶ ಪೂರ್ವಕ ಸುಸ್ತಿದಾರ ಪಟ್ಟಿಯಲ್ಲಿ ಇದ್ದಾರಾ? ಬೇರೆಯವರೂ ಇದ್ದು ಅವರನ್ನೇಕೆ ಸಾಲ ಮರುಪಾವತಿ ಮಾಡಿ ಎಂದು ಒತ್ತಡ ಹೇರುತ್ತಿಲ್ಲ? ಈ ರೀತಿಯ ಸುಸ್ತಿದಾರರ ಸಂಖ್ಯೆ ಎಷ್ಟು? ಇವರಿಂದ ಎಷ್ಟು ಸಾಲ ಮರುಪಾವತಿಯಾಗಬೇಕು? ಈ ಲೆಕ್ಕಗಳೆಲ್ಲ ಪಕ್ಕಾ ಗೊತ್ತಾಗಬೇಕಾದರೆ ಕ್ರೆಡಿಟ್ ಇನ್ಫಾರ್ಮೆಶನ್ ಬ್ಯೂರೋ (ಸಿಬಿಲ್) ಬಿಡುಗಡೆಗೊಳಿಸಿರುವ ದಾಖಲೆಗಳನ್ನು ಗಮನಿಸಬೇಕು.