ಒಟ್ಟಿಗೇ ಮತ್ತೊಂದು ಅಭಿಪ್ರಾಯವನ್ನೂ ಮಂಡಿಸಿದಳು. ನನ್ನ ಮಾತನ್ನು ಮೀರಿ ಹೋಗುವುದೇ ನಿಜವಾದರೆ, ಕೊಂಚ ತಡೆದು ಗಂಟಲು ಸರಿಪಡಿಸಿಕೊಂಡು, ರಾಮಾ, ಕರುವನ್ನು ಹಿಂಬಾಲಿಸಿ ತಾನೇ ಹಸು ಹೋಗುವುದು? ನಾನೂ ನಿನ್ನ ಜೊತೇನೇ ಬರ್ತೀನಿ.. ರಾಮರಿಗೆ ತಲೆ ಕೆಟ್ಟುಹೋಯಿತು. ತಾವು ಹೊರಡುವುದೇ ದುಸ್ತರವಾಗಿದ್ದಾಗ, ಇನ್ನು ಈ ವೃದ್ಧೆಯನ್ನೆಲ್ಲಿ ಕರೆದುಕೊಡುಹೋಗುವುದು? ಹೇಗೆ ಆಕೆಯನ್ನು ತಡೆಯುವುದು? ತಾಯಿಯ ಆಙ್ಞೆ ಮೀರಕೂಡದೆನ್ನುತ್ತಿದ್ದಳೆ. ಧರ್ಮದ ಮಾತು ಬೇರೆ ಹೇಳುತ್ತಿದ್ದಾಳೆ. ಎಂಥ ಇಕ್ಕಟ್ಟಿನಲ್ಲಿ ಸಿಕ್ಕಿಸುತ್ತಿದ್ದಾಳೆ! ಹಾಗೆಂದು ಜೋರಾಗಿ ಮಾತನಾಡುವಂತಿಲ್ಲ! ಮೊದಲೇ ನೊಂದಿರುವ ತಾಯಿ, ಮುದುಕಿ, ಆಮೇಲೆ ಏನಾದರೂ ಹೆಚ್ಚು-ಕಮ್ಮಿ ಆಗಬಾರದಲ್ಲ? ಅದೆಂತು ರಾಮರು ಯೋಚಿಸಿದರೋ? ಅವರಿಗೆ ಆ ಸ್ಥಿರತೆ ಎಲ್ಲಿತ್ತೋ? ಅಮ್ಮಾ ಗಂಡ ಬದುಕಿದ್ದಾಗ, ಹೆಂಡತಿ ಅವನನ್ನು ಬಿಟ್ಟುಬಂದರೆ ಬೇರೆ ಅರ್ಥ ಬರುವುದಿಲ್ಲವೆ? ನೀನು ವಿಧವೆಯಂತೆ ಬರುವೆಯಾ? ರಾಮರ ಮಾತು ಕೌಸಲ್ಯೆಯ ರಭಸಕ್ಕೆ ಅಡ್ಡಗಟ್ಟೆ ಕಟ್ಟಿತು. ರಾಮರು ಮುಂದುವರಿಸಿದರು. ನಮ್ಮ ವಂಶ ಎಂಥ ದೊಡ್ಡದು? ನಮ್ಮದು ಕಕುತ್ಸ್ಥ ವಂಶ. ಭೂಪತಿಯಾಗಿ ನಮ್ಮಪ್ಪ ಬದುಕಿದ್ದಾಗ ನೀನವನ ಬಳಿ ಅವನಿಗೆ ಸೇವೆ ಮಾಡಿಕೊಂಡಿರಬೇಕಾದ್ದು ಸನಾತನ ಧರ್ಮವಲ್ಲವೆ? ನೀನು ಇಲ್ಲೇ ಇರಬೇಕು.