ಮಾಂಡಲಿಕರು, ಪುರಪ್ರಮುಖರು, ಅರಮನೆಯ ಮುಖ್ಯರು, ಸ್ನೇಹಿತರು, .... ಎಲ್ಲರನ್ನೂ ಆಹ್ವಾನಿಸಿದ್ದಾನೆ ದಶರಥ. ಜನಕ ಮಹಾರಾಜನನ್ನು ಕರೆಸಿಕೊಂಡಿಲ್ಲದ್ದೂ, ಭರತ-ಶತ್ರುಘ್ನರು ಊರಿನಲ್ಲಿರದ್ದೂ ಗಮನಾರ್ಹವಾಗಿದೆ. ಕಿಕ್ಕಿರಿದ ಸಭೆಗೆ ವೇದಘೋಷ ಮಾಡುತ್ತ ವಸಿಷ್ಠ ವಾಮದೇವೇತ್ಯಾದಿ ವೃಂದ ಪ್ರವೇಶಿಸಿತು. ಅವರ ಹಿಂದೆ ತಾಳ, ಮೇಳ, ಕೊಂಬು, ಕಹಳೆಗಳ ಕಿವಿಗಡಚಿಕ್ಕುವ ಧ್ವನಿ, ಅವರ ಹಿಂದೆ ರಾಜ ಚಿನ್ಹೆಗಳಾದ ನಂದಿ, ಹಸು, ಆನೆ, ಕುದುರೆ, ಸೂರ್ಯ, ಇಕ್ಷ್ವಾಕು ವಂಶದಲ್ಲಿ ಆಗಿಹೋದ ಪ್ರಮುಖ ರಾಜರು........ ಈ ಎಲ್ಲ ಭಿತ್ತಿ ಚಿತ್ರಗಳೂ ಬರುತ್ತಿವೆ. ಅದರ ಹಿಂದೆ ಮೃದು ಕೆಂಪು ಹಾಸಿನ ಮೇಲೆ ಪಾದ ಊರುತ್ತ ಗಂಭೀರವಾಗಿ ವೃದ್ಧ ದಶರಥನ ಆಗಮನ. ರಾಜ ಸಿಂಹಾಸನಕ್ಕೆ ಕೈ ಮುಗಿದು ಜನಸ್ತೋಮದೆಡೆಗೆ ತಿರುಗುತ್ತಿದ್ದಂತೆಯೇ ನಿಮಿಷವಾದರೂ ನಿಲ್ಲದ ಕರತಾಡನ. ಕೆಂಪು ಮಂಡಾಸಿನ ಭಟರು, ಕೋಲೆತ್ತಿ ಸದ್ದು ಸದ್ದು ಎಂದ ಮೇಲೇ ಅದು ನಿಂತದ್ದು. ರಾಜನ ಪಕ್ಕದಲ್ಲಿ ಐದು ಅಡಿ ಅಂತರ ಬಿಟ್ಟು ಬಲಗಡೆಗೆ ಐದು ಮೆಟ್ಟಿಲು ಕೆಳಗೆ, ವಸಿಷ್ಠ ಬ್ರಹ್ಮರ್ಷಿಗಳಿಗೆ ಚೊಕ್ಕ ಚಿನ್ನದ ಆಸನ. ದಶರಥ ಅವರಿಗೆ ಕೈ ಮುಗಿದು ಆಸನ ಸ್ವೀಕರಿಸಲು ಪ್ರಾರ್ಥಿಸಿದ. ರುದ್ರಾಕ್ಷಿಮಾಲೆಯನ್ನು ಧರಿಸಿದ್ದ ಬಲಗೈ ಎತ್ತಿ ಹರಸಿ ವಸಿಷ್ಠರು ಕುಳಿತ ಮೇಲೆ ಮಹಾರಾಜ ಮತ್ತೊಮ್ಮೆ ಜನರಿಗೆ ಅಭಿವಾದಿಸಿ ಮಂಡಿಸಿದ ಮೇಲೆ, ಮಹಾಜನರೆಲ್ಲ ಕುಳಿತು ಮುಂದಿನ ಘೋಷಣೆಗಾಗಿ ಉತ್ಕಂಠಿತರಾಗಿ ಕಾಯತೊಡಗಿದರು.