ಬಡ್ಡಿ, ತೈಲ, ಹಣದುಬ್ಬರ ಉತ್ತರದ ಕಡೆಗೆ; ವಿಶ್ವಾಸ, ಬೆಳವಣಿಗೆ ದಕ್ಷಿಣದೆಡೆಗೆ!

ಸದ್ಯದ ರೆಪೋ ರೇಟ್ 6. 50 ಪ್ರತಿಶತವಿದೆ. ಹೀಗೆ ಬಡ್ಡಿ ದರ ಹೆಚ್ಚಾಗುವುದರಿಂದ ಮತ್ತು ಕಡಿಮೆಯಾಗುವುದರಿಂದ ಏನಾಗುತ್ತದೆ? ಎನ್ನುವುದನ್ನ ಈ ವಾರದ ಹಣಕ್ಲಾಸು ಅಂಕಣದಲ್ಲಿ ತಿಳಿದುಕೊಳ್ಳೋಣ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಭಾರತದಂತ ಅತ್ಯಂತ ದೊಡ್ಡ ಮತ್ತು ಜನಭರಿತ ದೇಶದಲ್ಲಿ ಏನೇ ಮಾಡಿದರೂ ಅದರಿಂದ ಲಾಭ ಪಡೆಯುವರ ಸಂಖ್ಯೆ ಮತ್ತು ನಷ್ಟ ಹೊಂದುವರ ಸಂಖ್ಯೆ ಕೂಡ ದೊಡ್ಡದಾಗೇ ಇರುತ್ತದೆ. ಸಮಾಜದ ಒಂದು ವರ್ಗ ಸರಕಾರದ ನಿರ್ಧಾರ ಯಾವುದೇ ಇರಲಿ ಅದರಿಂದ ತೊಂದರೆಗೆ ಒಳಾಗುತ್ತದೆ. ಇನ್ನೊಂದು ವರ್ಗ ಅದೇ ನಿರ್ಧಾರದಿಂದ ಖುಷಿ ಪಡುತ್ತದೆ. ದೇಶದ ಎಲ್ಲಾ ಜನತೆಗೂ ಏಕಕಾಲದಲ್ಲಿ ಒಳಿತಾಗುವ ನಿರ್ಧಾರ ಮಾಡುವುದು ಸರಕಾರ ಯಾವುದೇ ಇರಲಿ ಭಾರತದಂತಹ ದೇಶದಲ್ಲಿ ಕಷ್ಟ ಸಾಧ್ಯ . ಸದ್ಯಕ್ಕೆ ಏರುಗತಿಯಲ್ಲಿರುವ ಬ್ಯಾಂಕ್ ಇಂಟರೆಸ್ಟ್ ರೇಟ್ ಅದಕ್ಕೊಂದು ಅತ್ಯುತ್ತಮ ಉದಾಹರಣೆ.
2014 ರಲ್ಲಿ ಹೊಸ ಸರಕಾರ ಕೇಂದ್ರದಲ್ಲಿ ಅಧಿಕಾರ ಹಿಡಿದ ಸಮಯದಲ್ಲಿ ಇದ್ದ ರೆಪೋ ರೇಟ್ 8 ಪ್ರತಿಶತ. ಅಂದಿನಿಂದ ರೆಪೋ ರೇಟ್ ಕುಸಿತ ಕಾಣಲು ಶುರುವಾಗಿ 6 ಪ್ರತಿಶತ ಕಂಡಿತು. ಕಳೆದ ನಾಲ್ಕು ವರ್ಷದಲ್ಲಿ ಜೂನ್ ತಿಂಗಳಲ್ಲಿ ಪ್ರಥಮ ಬಾರಿಗೆ ಆರ್ ಬಿ ಐ 0.25 ಪ್ರತಿಶತ ದರವನ್ನ ಏರಿಸಿದ್ದು ರೆಪೋ ರೇಟ್ 6.25  ಪ್ರತಿಶತ ತಲುಪಿತು. ತೀರಾ ಇತ್ತೀಚಿಗೆ ಅಂದರೆ ಆಗಸ್ಟ್ 2018ರಲ್ಲಿ ಆರ್ ಬಿ ಐ ಮತ್ತೊಮ್ಮೆ 0. 25 ಪ್ರತಿಶತ ಬಡ್ಡಿ ಅದರ ಏರಿಸಿದ್ದು. ಸದ್ಯದ ರೆಪೋ ರೇಟ್ 6. 50 ಪ್ರತಿಶತವಿದೆ. ಹೀಗೆ ಬಡ್ಡಿ ದರ ಹೆಚ್ಚಾಗುವುದರಿಂದ ಮತ್ತು ಕಡಿಮೆಯಾಗುವುದರಿಂದ ಏನಾಗುತ್ತದೆ? ಎನ್ನುವುದನ್ನ ಈ ವಾರದ ಹಣಕ್ಲಾಸು ಅಂಕಣದಲ್ಲಿ ತಿಳಿದುಕೊಳ್ಳೋಣ. ಅದಕ್ಕೂ ಮುಂಚೆ ಹೀಗೆ ಬಡ್ಡಿ ದರ ಹೆಚ್ಚು -ಕಡಿಮೆಯಾಗಲು ಕಾರಣವಾದ ಹಣದುಬ್ಬರ ಎಂದರೇನು ಮತ್ತು ರೆಪೋರೇಟ್ ಎಂದರೇನು ಎನ್ನುವುದನ್ನ ಕೂಡ ತಿಳಿದುಕೊಂಡರೆ ಬಡ್ಡಿ ದರದ ಏರುಪೇರಾಟದ ಲಾಭ ನಷ್ಟಗಳನ್ನು ಅರಿಯಲು ಸಹಾಯಕವಾಗುತ್ತದೆ. 
ಹಣದುಬ್ಬರ ಅಥವಾ ಜನ ಸಾಮಾನ್ಯನ ಭಾಷೆಯಲ್ಲಿ ಇನ್ಫ್ಲೇಶನ್ ಎಂದರೆ ವಸ್ತುವಿನ ಬೆಲೆಯಲ್ಲಿ ಸತತ ಏರಿಕೆ ಕಾಣುವುದು. ಅಂದರೆ ಉದಾಹರಣೆ ನೋಡಿ ವರ್ಷದ ಹಿಂದೆ ಒಂದು ಕೆ.ಜಿ ಅಕ್ಕಿಯ ಬೆಲೆ ನಲವತ್ತು ರೂಪಾಯಿ ಆದರೆ ಅದೇ ಅಕ್ಕಿಯನ್ನ ಇಂದು ಕೊಳ್ಳಲು ಹೋದರೆ ನಲವತ್ತೈದು ರೂಪಾಯಿ!. ಹೀಗೆ ವಸ್ತುವಿನ ಬೆಲೆ ಸಮಯದಿಂದ ಸಮಯಕ್ಕೆ ಏರುಗತಿ ಕಂಡರೆ ಅದನ್ನ ಹಣದುಬ್ಬರ ಎನ್ನುತ್ತವೆ. ಇದಕ್ಕೆ ವಿರುದ್ಧವಾಗಿ ವಸ್ತುವಿನ ಬೆಲೆ ವರ್ಷದಿಂದ ವರ್ಷಕ್ಕೆ ಕುಸಿತ ಕಂಡರೆ ಅದನ್ನ ಡಿಫ್ಲೇಷನ್ ಎನ್ನುತ್ತೇವೆ. ಗಮನಿಸಿ ಬೆಲೆಯೇರಿಕೆ ಅಥವಾ ಇಳಿಕೆ ಎನ್ನುವುದು ಮನುಷ್ಯನ ದೇಹದಲ್ಲಿ ಸಕ್ಕರೆ ಅಂಶ ಇದ್ದಂತೆ. ಅತ್ಯಂತ ಕಡಿಮೆಯಾದರೂ ಅಪಾಯ, ಹೆಚ್ಚಾದರೂ ಅಪಾಯ ತಪ್ಪಿದ್ದಲ್ಲ. ಹೀಗಾಗಿ ಇದನ್ನ ಒಂದು ಹಂತದಲ್ಲಿ ಹಿಡಿತದಲ್ಲಿ ಇಡುವ ಅವಶ್ಯಕತೆಯಿದೆ. ಹೀಗೆ ಸಮಾಜದಲ್ಲಿ ವಸ್ತುಗಳ ಬೆಲೆ ತೀರಾ ಏರುಪೇರಾಗದಂತೆ ತಡೆಯಲು ಆರ್ ಬಿ ಐ ಬಳಸುವ ಅಸ್ತ್ರ ರೆಪೋ ರೇಟ್. ಇದನ್ನ ನೀವು ದೇಹದಲ್ಲಿ ಸಕ್ಕರೆ ಅಂಶ ನಿಯಂತ್ರಣದಲ್ಲಿಡಲು ಬಳಸುವ ಇನ್ಸುಲಿನ್ ಗೆ ಹೋಲಿಸಬಹದು. 
ರೆಪೋ ರೇಟ್ ಎಂದರೆ ಸೆಂಟ್ರಲ್ ಬ್ಯಾಂಕ್ ಅಂದರೆ ಆರ್ ಬಿ ಐ ತನ್ನ ಬಳಿಯಿರುವ ಹಣವನ್ನ ಇತರ ಬ್ಯಾಂಕ್ಗಳಿಗೆ ಸಾಲ ನೀಡುವಾಗ ಅವಕ್ಕೆ ವಿಧಿಸುವ ಬಡ್ಡಿ ದರ. ಗಮನಿಸಿ ಇದು ದೇಶದ ಅತಿ ದೊಡ್ಡ ಮತ್ತು ಇತರ ಬ್ಯಾಂಕ್ಗಳ ನಡವಳಿಕೆ ಗಮನಿಸುವ ಬ್ಯಾಂಕು. ಇತರ ಬ್ಯಾಂಕುಗಳಿಗೆ ಸಾಲ ನೀಡುವ ಹಣದ ಮೇಲೆ ವಿಧಿಸುವ ಬಡ್ಡಿ ಇಲ್ಲಿ ಸಾಮಾನ್ಯ ಗ್ರಾಹಕನ ಪ್ರವೇಶವಿಲ್ಲ. ಉದಾಹರಣೆ ನೋಡಿ. ಆರ್ ಬಿ ಐ ತನ್ನ ಬಳಿ ಇದ್ದ ಸಾವಿರ ರೂಪಾಯಿಯನ್ನ ಎಸ್ಬಿಐ ಬ್ಯಾಂಕಿಗೆ ಸಾಲ ನೀಡುತ್ತದೆ. ಹಾಗು ಅದರ ಮೇಲೆ ಬಡ್ಡಿ ವಿಧಿಸುತ್ತದೆ. ಹೀಗೆ ಆರ್ ಬಿ ಐ ಇತರ ಬ್ಯಾಂಕ್ಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿ ದರಕ್ಕೆ ರೆಪೋ ರೇಟ್ ಎನ್ನುತ್ತಾರೆ. ಬ್ಯಾಂಕ್ ತನ್ನ ಸಾಮಾನ್ಯ ಗ್ರಾಹಕನಿಗೆ ವಿಧಿಸುವ ಬಡ್ಡಿ ದರ ರೆಪೋ ರೇಟ್ ಗಿಂತ ಹೆಚ್ಚಾಗಿರುತ್ತದೆ. 
ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚುತ್ತಿರುವ ತೈಲ ಬೆಲೆ ಇಲ್ಲಿ ನಾವು ತೈಲಕ್ಕೆ ಹೆಚ್ಚಿನ ಬೆಲೆ ತೆರುವ ಹಾಗೆ ಮಾಡಿದೆ. ಇದೊಂದು ಚೈನ್ ರಿಯಾಕ್ಷನ್. ತೈಲ ಬೆಲೆ ಹೆಚ್ಚಾದ ತಕ್ಷಣ ಟ್ರಾನ್ಸ್ಪೋರ್ಟ್ ಬೆಲೆ ಹೆಚ್ಚಾಗುತ್ತದೆ. ಹೀಗಾಗಿ ಸಹಜವಾಗೇ ಎಲ್ಲಾ ಸರಕುಗಳ ಬೆಲೆ ಹೆಚ್ಚಾಗುತ್ತದೆ. ಇದಕ್ಕೆ ಕಾರಣ ತೈಲ ಬೆಲೆಯನ್ನ ನಿಗದಿ ಮಾಡುವುದು ಡಾಲರ್ ನಲ್ಲಿ. ಈ ಡಾಲರ್ಗೆ ಏಕೆ ಇಷ್ಟೊಂದು ಬೇಡಿಕೆ? ಅದರ ಮೇಲೇಕೆ ಇಷ್ಟೊಂದು ನಂಬಿಕೆ? 
ಉದಾಹರಣೆ ನೋಡಿ ಒಬ್ಬ ಕನ್ನಡಿಗ ಮತ್ತು ಒಬ್ಬ ಮಲೆಯಾಳಿ ಮಾತಿಗೆ ಕೂತರೆ ಕನ್ನಡಬಾರದ ಮಲೆಯಾಳಿ, ಮಲೆಯಾಳಂ ಬಾರದ ಕನ್ನಡಿಗ ಸಂವಹನಕ್ಕೆ ಏನು ಮಾಡಬೇಕು? ಇಂಗ್ಲಿಷ್ ಭಾಷೆಯನ್ನ ಸಾಮಾನ್ಯ ಸಂವಹನ ಮಾಧ್ಯಮವಾಗಿ ಬಳಸಬೇಕು ಅಲ್ಲವೇ? ಹಾಗೆಯೇ ಭಾರತದ ರುಪಾಯಿಯ ಮೌಲ್ಯ ಜಗತ್ತಿನ ಇತರ ದೇಶಗಳ ಕರೆನ್ಸಿ ಮೌಲ್ಯವನ್ನ ನಿಖರವಾಗಿ ಅಳೆಯಲು ನಂಬಿಕೆಯ ಕೊರತೆ ಹೆಚ್ಚಾಗಿದೆ. ಹೀಗಾಗಿ ಅಮೆರಿಕನ್ ಡಾಲರ್ನನ್ನು ಸಾಮಾನ್ಯ ವಿನಿಮಯ ಕರೆನ್ಸಿಯಾಗಿ ಜಗತ್ತು ಬಳಸುತ್ತಿದೆ. ಹಾಗೆ ನೋಡಲು ಹೋದರೆ ಅಮೆರಿಕನ್ ಡಾಲರ್ ಗೆ ಮೌಲ್ಯವೇ ಇಲ್ಲ! 
ಎರಡನೇ ಮಹಾಯುದ್ಧದ ನಂತರ ಚಿನ್ನವನ್ನ ಮೂಲವಾಗಿರಿಸಿ ಹಣವನ್ನ ಮುದ್ರಿಸುವ ನೀತಿಗೆ ತಿಲಾಂಜಲಿ ಇಡಲಾಯಿತು. ಅಂದಿನಿಂದ ಅಮೆರಿಕನ್ ಡಾಲರ್ ಕೇವಲ ಪೇಪರ್ ಅಷ್ಟೇ. ವಸ್ತು ಸ್ಥಿತಿ ಹೀಗಿದ್ದೂ ಅಮೆರಿಕನ್ ಡಾಲರಿಗೇಕೆ ಇಷ್ಟೊಂದು ಬೆಲೆ? ಇದನ್ನ ನಾವೇಕೆ ಸಾಮಾನ್ಯ ವಿನಿಮಯ ಮಾಧ್ಯಮವಾಗಿ ಬಳಸುತ್ತೇವೆ? ಇದಕ್ಕೆ ಉತ್ತರ ಬಹಳ ಸುಲಭ. ನಾನು ನಂಬಿದೆ ಅಥವಾ ಡಾಲರ್ ಬಳಸುತ್ತೇನೆ ಎಂದು ಪಕ್ಕದವನು, ಪಕ್ಕದವನು  ನಂಬಿದ ಎಂದು ಎದುರು ಮನೆಯವನು, ಎದುರು ಮನೆಯವನು ನಂಬಿದ ಎಂದು ಹಿಂದಿನ ಮನೆಯವನು ಹೀಗೆ ಜಗತ್ತಿನ ದೇಶಗಳ ಸಾಮೂಹಿಕ ನಂಬಿಕೆಯಷ್ಟೇ ಡಾಲರ್ ನ ಬಂಡವಾಳ. ಇರಲಿ ಹೀಗೆ ಡಾಲರ್ ಮತ್ತು ತೈಲ ಬೆಲೆ ಹೆಚ್ಚುತ್ತಾ ಹೋಗಿ ನಮ್ಮಲಿ ಹಣದುಬ್ಬರ ಹೆಚ್ಚಾದರೆ  ಪರಿಸ್ಥಿತಿ ಕೈ ಮೀರಿ ಹೋಗದಂತೆ ನೋಡಿಕೊಳ್ಳಲು ಆರ್ ಬಿ ಐ ಮಧ್ಯ ಪ್ರವೇಶಿಸುತ್ತದೆ. ಮೊದಲೇ ಹೇಳಿದಂತೆ ಇದು ಸರಿ ಅಥವಾ ತಪ್ಪು ಎಂದು ನಿಖರವಾಗಿ ಹೇಳಲು ಬರುವುದಿಲ್ಲ. ಮುಖ್ಯವಾಗಿ ಇದನ್ನ ಮೂರು ವಿಭಾಗವಾಗಿ ನೋಡಬಹದು. ಯಾರಿಗೆ ಲಾಭ ಯಾರಿಗೆ ನಷ್ಟ ಎಂದು ನೋಡಬಹದು. ಜೊತೆಗೆ ಸಮಾಜದಲ್ಲಿ ಸಾಮರಸ್ಯ ಕೆಡದಂತೆ ಇಡಲು ಇದು ಅವಶ್ಯಕ ಕೂಡ. 
  1. ಮೊದಲ ಸಾಲಿನಲ್ಲಿ ಹೇಳಿದಂತೆ ನಮ್ಮದು ಅತ್ಯಂತ ದೊಡ್ಡ ದೇಶ. ಎಲ್ಲಾ ನಿರ್ಧಾರಗಳು ಎಲ್ಲರಿಗೂ ಅನುಕೂಲ ಮಾಡಿಕೊಡುವುದಿಲ್ಲ. ಆದರೆ ಬಡ್ಡಿ  ದರ ಏರಿಕೆಯಿಂದ 12 ಕೋಟಿಗೂ ಮೀರಿ ಇರುವ ಹಿರಿಯ ನಾಗರಿಕರ ಮುಖದಲ್ಲಿ ಮಾತ್ರ ಒಂದು ಸಣ್ಣನೆಯ ನಗು ಮೂಡಿಸಿರುವುದು ಮಾತ್ರ ಸುಳ್ಳಲ್ಲ. ಗಮನಿಸಿ ಇಂಗ್ಲೆಂಡ್ ಮತ್ತು ಕೆನಡಾ ದೇಶಗಳ ಒಟ್ಟು ಜನಸಂಖ್ಯೆಷ್ಟು ನಮ್ಮಲ್ಲಿ ಹಿರಿಯ ನಾಗರಿಕರು ಇದ್ದಾರೆ! ಇವರ ಆದಾಯದ ಮೂಲ ಜೀವನ ಪೂರ್ತಿ ಕಷ್ಟ ಪಟ್ಟು ಗಳಿಸಿ ಉಳಿಸಿದ ಒಂದಷ್ಟು ಹಣ. ಅದನ್ನ ಬ್ಯಾಂಕಿನಲ್ಲಿಟ್ಟು ಅದರಿಂದ ಬರುವ ಬಡ್ಡಿಯಲ್ಲಿ ಅವರ ಜೀವನ ಸಾಗಬೇಕು. ಸೋಶಿಯಲ್ ಸೆಕ್ಯುರಿಟಿ ಇಲ್ಲದ ನಮ್ಮ ದೇಶದಲ್ಲಿ ಪಿಂಚಣಿ ಗಳಿಸುವ ಸಂಖ್ಯೆ ನಗಣ್ಯ. ಹೀಗಾಗಿ ಈ ವರ್ಗದ ಜನರ ಜೊತೆಗೆ ಕೈಲಾಗದವರು, ಅಸಹಾಯಕರು ಸೀಮಿತ ಹಣದ ಮೇಲಿನ ಬಡ್ಡಿಯಲ್ಲಿ ಜೀವನ ಸಾಗಿಸುವ ಲಕ್ಷಾಂತರ ಜನರಿಗೆ ಒಳಿತಾಗಲಿದೆ. 
  2. ಬಡ್ಡಿ ದರ ಕಳೆದ ನಾಲ್ಕು ವರ್ಷದಿಂದ ಇಳಿಮುಖವಾಗಿತ್ತು. ಇದು ರಿಯಲ್ ಎಸ್ಟೇಟ್ ಗೆ ವರದಾನವಾಗಿತ್ತು. ಲಕ್ಷಾಂತರ ಜನ ಇಳಿದ ಬಡ್ಡಿ ದರದ ಅನುಕೂಲ ಪಡೆದು ಮನೆ ಕಟ್ಟಲು, ಕಾರು ಕೊಳ್ಳಲು ಸಾಲ ಪಡೆದರು. ಇದೀಗ ಹೆಚ್ಚಾದ ಬಡ್ಡಿ ದರ ಸಾಲದ ಮೇಲೆ ಅವರು ಕಟ್ಟುತ್ತಿದ್ದ ಕಂತನ್ನ ಹೆಚ್ಚಾಗಿಸಲಿದೆ. ಹೊಸದಾಗಿ ಸಾಲ ಕೊಳ್ಳುವರು ಯೋಚಿಸಿ ಬಜೆಟ್ ಹೊಂದಿಸಿಕೊಂಡು ಸಾಲ ಮಾಡುವ ಹಾಗಾಗುತ್ತದೆ. ಜೊತೆಗೆ ಕಾರ್ಪೊರೇಟ್ ವಲಯ ಇಷ್ಟು ದಿನ ಕಡಿಮೆ ಬಡ್ಡಿ ದರದ ಪೂರ್ಣ ಲಾಭ ಪಡೆದವು. ಈಗ ಅವುಗಳಿಗೆ ಕೂಡ ತಮ್ಮ ಸಾಲದ ಮೇಲೆ ಕಟ್ಟುವ ಹಣದ ಮೊತ್ತ ಹೆಚ್ಚಾಗುತ್ತದೆ. ಹೊಸ ಸಾಲ ಮಾಡುವ ಮುನ್ನಾ ಎರಡು ಸಲ ಯೋಚಿಸುವ ಸ್ಥಿತಿ ಎದುರಾಗುತ್ತದೆ. ಇದರಿಂದ ಪ್ರಗತಿಯ ವೇಗ ಕುಂಠಿತವಾಗುತ್ತದೆ ಎನ್ನುವುದು ಕಾರ್ಪೊರೇಟ್ ವಲವದ ಕೂಗು. 
  3. ಒಂದು ಹಂತದ ತನಕ ಹೆಚ್ಚಾಗುವ ಬಡ್ಡಿ ದರ ಷೇರು ಮಾರುಕಟ್ಟೆಯ ಮಟ್ಟಿಗೆ ಹುರುಪನ್ನೇ ತರುತ್ತದೆ. ಇತ್ತೀಚಿನ ದಿನಗಳಲ್ಲಿ ಷೇರು ಮಾರುಕಟ್ಟೆಯನ್ನ ಗಮನಿಸಿ ನೋಡಿ. ಅಲ್ಲಿ ಗೂಳಿಯ ಓಟ ಸ್ಪಷ್ಟವಾಗಿ ಕಾಣುತ್ತದೆ. ಬೆಲೆಯೇರಿಕೆ ಇರಬಹದು ಬಡ್ಡಿ ದರ ಏರಿಕೆಯಿರಬಹದು ಅದು ಬೆಳೆಯುತ್ತಿರುವ ಸಮಾಜದ ಲಕ್ಷಣ. ಸದ್ಯಕ್ಕೆ ಭಾರತದ ಷೇರುಮಾರುಕಟ್ಟೆ ಹೊಸ ಹುರುಪಿನೊಂದಿಗೆ ಮುನ್ನೆಡೆಯುತ್ತಿದೆ.  ಇದೀಗ ಆಗುತ್ತಿರುವ ಬೆಳವಣಿಗೆ ಇದು ಎಷ್ಟು ದಿನ? ಎನ್ನುವ ಸಂಶಯವನ್ನ ಸೃಷ್ಟಿಮಾಡಿದೆ. 
ಕೊನೆ ಮಾತು: ವಿತ್ತ ಜಗತ್ತು ಇನ್ನೊಂದು ಮಹಾ ಕುಸಿತಕ್ಕೆ ಅಣಿಯಾಗುತ್ತಿದೆಯೇ? ಎನ್ನುವ ಸಂಶಯವನ್ನ ಮೂಡಿಸುತ್ತಿದೆ. ಇದಕ್ಕೆ ಕಾರಣ ಸ್ಪಷ್ಟ. ಭಾರತದ ಆರ್ಥಿಕತೆ ಇದ್ದುದರಲ್ಲೇ ಪರವಾಗಿಲ್ಲ ಅನ್ನುವಂತಿದೆ. ಹೀಗಿದ್ದೂ ನಮ್ಮಲ್ಲಿನ ಕಥೆಯನ್ನ ನೋಡಿದರೆ ಮುಂದೇನು?ಎನ್ನುವ ಪ್ರಶ್ನೆ ಉದ್ಬವಾಗುತ್ತದೆ. ಇನ್ನು ಚೀನಾ, ಬ್ರೆಜಿಲ್, ರಷ್ಯಾ, ಯೂರೋಪ್ ದೇಶಗಳ ಆರ್ಥಿಕತೆಯನ್ನ ನೋಡುತ್ತಿದ್ದರೆ ಇಲ್ಲೇ ಎಲ್ಲೂ ಹತ್ತಿರದಲ್ಲಿ ಇನ್ನೊಂದು ಆರ್ಥಿಕ ಕುಸಿತದ ಕರಿ ನೆರಳಿನ ಸುಳಿದಾಟ ಕಾಣುತ್ತಿದೆ.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com