social_icon

ಮಾನಸಿಕ ಆರೋಗ್ಯ ವರ್ಧನೆಗೆ ಏನು ಮಾಡಬೇಕು? ಈ 15 ಸೂತ್ರಗಳನ್ನು ಪಾಲಿಸಿದರೆ ಸಾಕು! (ಚಿತ್ತ ಮಂದಿರ)

ಡಾ. ಸಿ. ಆರ್. ಚಂದ್ರಶೇಖರ್, ಮನೋವೈದ್ಯ

ಯಾವುದೇ ವ್ಯಕ್ತಿಯ ಪೂರ್ಣ ಆರೋಗ್ಯಕ್ಕೆ, ಕೌಶಲ ಸಾಮರ್ಥ್ಯ ಸಾಧನೆಗಳಿಗೆ ಮನಸ್ಸೇ ತಾಯಿ. ಮನಸು ನೆಮ್ಮದಿಯಿಂದ ಇದ್ದು, ಅದರ ಆರೋಗ್ಯ ಚೆನ್ನಾಗಿದ್ದಾರೆ ಆತ/ ಆಕೆ ಚೆನ್ನಾಗಿ ಆಲೋಚಿಸಬಲ್ಲ. ಚಿಂತನ-ಮಂಥನ ಮಾಡಬಲ್ಲ.

Published: 13th August 2021 08:00 AM  |   Last Updated: 14th August 2021 01:12 PM   |  A+A-


Mental Health, (Representational image)

ಮಾನಸಿಕ ಆರೋಗ್ಯ (ಸಾಂಕೇತಿಕ ಚಿತ್ರ, ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್)

Posted By : Srinivas Rao BV
Source : Online Desk

ಯಾವುದೇ ವ್ಯಕ್ತಿಯ ಪೂರ್ಣ ಆರೋಗ್ಯಕ್ಕೆ, ಕೌಶಲ ಸಾಮರ್ಥ್ಯ ಸಾಧನೆಗಳಿಗೆ ಮನಸ್ಸೇ ತಾಯಿ.  

ಮನಸು ನೆಮ್ಮದಿಯಿಂದ ಇದ್ದು, ಅದರ ಆರೋಗ್ಯ ಚೆನ್ನಾಗಿದ್ದಾರೆ ಆತ/ ಆಕೆ ಚೆನ್ನಾಗಿ ಆಲೋಚಿಸಬಲ್ಲ. ಚಿಂತನ-ಮಂಥನ ಮಾಡಬಲ್ಲ. ವಸ್ತು, ವಿಷಯವನ್ನು ಅರ್ಥಮಾಡಿಕೊಳ್ಳಬಲ್ಲ. ಸಮಸ್ಯೆ ಸನ್ನಿವೇಶವನ್ನು ಸರಿಯಾಗಿ ವಿಶ್ಲೇಷಿಸಬಲ್ಲ. ಸೂಕ್ತ ಪರಿಹಾರ-ನಿರ್ಧಾರಗಳನ್ನು ಕೈಗೊಳ್ಳಬಲ್ಲ. ಏಕಾಗ್ರತೆಯಿಂದ ಚೆನ್ನಾಗಿ ಕೆಲಸ-ಕರ್ತವ್ಯಗಳನ್ನು ನಿರ್ವಹಿಸಬಲ್ಲ. ಸನ್ನಿವೇಶ-ಸಂದರ್ಭಕ್ಕೆ ತಕ್ಕಂತೆ ಭಾವನೆಗಳನ್ನು ಹಿತ-ಮಿತವಾಗಿ ಪ್ರಕಟಿಸಬಲ್ಲ. ತನ್ನ ಮತ್ತು ತನ್ನವರ ಬೇಕು ಬೇಡಗಳನ್ನು ಪೂರೈಸಬಲ್ಲ. ಕುಟುಂಬದವರೊಂದಿಗೆ-ಇತರರೊಂದಿಗೆ ಒಳ್ಳೆಯ ಸ್ನೇಹ ಸಂಬಂಧವನ್ನು ಇಟ್ಟುಕೊಳ್ಳಬಲ್ಲ. ಅಪಾಯ ಕಷ್ಟ ನಷ್ಟ ಸೋಲು ನಿರಾಶೆಗಳನ್ನು ಧೈರ್ಯವಾಗಿ ಎದುರಿಸಬಲ್ಲ. ಸೂಕ್ತಗುರಿಗಳನ್ನು-ಮಾರ್ಗಗಳನ್ನು ಆಯ್ಕೆ ಮಾಡಿಕೊಂಡು ಪ್ರಗತಿಯತ್ತ ನಡೆಯಬಲ್ಲ. ತನ್ನ ಕ್ಷೇಮಕ್ಕೆ ಅಷ್ಟೇ ಅಲ್ಲದೆ, ಸಮಾಜದ  ಕ್ಷೇಮಕ್ಕೂ ಗಮನ ಕೊಡಬಲ್ಲ.

ಪ್ರಕ್ಷುಬ್ಧ ಮನಸ್ಸು 

ಪ್ರಸಕ್ತ ಕಾಲದಲ್ಲಿ ಹಲವು-ಹನ್ನೊಂದು ಕಾರಣಗಳಿಂದ ಬಹುತೇಕ ಜನರ ಮನಸ್ಸು ಪ್ರಸನ್ನತೆಯನ್ನು ಕಳೆದುಕೊಂಡು ಪ್ರಕ್ಷುಬ್ಧವಾಗುತ್ತಿದೆ. ಅಸಮಾಧಾನ, ಅತೃಪ್ತಿ, ನಿರಾಶೆ-ಹತಾಶೆಗಳು ಹೆಚ್ಚುತ್ತಿವೆ. ಮನಶಾಂತಿ-ನೆಮ್ಮದಿ ಕಡಿಮೆಯಾಗುತ್ತಿದೆ. ಇದಕ್ಕೆ ಕಾರಣಗಳೆಂದರೆ:

  1. ಆರ್ಥಿಕ ಸಮಸ್ಯೆಗಳು: ವರ್ಗದವರು ತಮ್ಮ ಆದಾಯಕ್ಕಿಂತ ಹೆಚ್ಚು ಖರ್ಚು ಮಾಡುತ್ತಿದ್ದಾರೆ. ಸಾಲ ಮಾಡಿ ತುಪ್ಪ ತಿನ್ನುತ್ತಾರೆ. ಅಗತ್ಯವಿದ್ದಾಗ ಹಣವಿಲ್ಲದೆ ಪರದಾಡುತ್ತಾರೆ. ಭೋಗಭಾಗ್ಯಗಳಿಗಾಗಿ ಹಾತೊರೆಯುತ್ತಾರೆ. ಕೊಳ್ಳುಬಾಕರಾಗುತ್ತಿದ್ದಾರೆ. ಆವಾಗ ಎಷ್ಟಿದ್ದರೂ ಸಾಲದು. ಇತರರೊಡನೆ ಹೋಲಿಕೆ ಮಾಡಿಕೊಂಡು, ಹಿಂಸೆ ಪಡುತ್ತಾರೆ, ಚಿಂತೆ ಮಾಡುತ್ತಾರೆ. ಸಂತೋಷ ವಂಚಿತರಾಗುತ್ತಾರೆ.
  2. ಕೌಟುಂಬಿಕ ಸಮಸ್ಯೆಗಳು: ದೊಡ್ಡ ಕುಟುಂಬಗಳು ಹೋಗಿ ಸಣ್ಣ ಅತಿಸಣ್ಣ ಕುಟುಂಬಗಳು ಹೆಚ್ಚುತ್ತಿವೆ. ಪ್ರೀತಿ ವಿಶ್ವಾಸದ ಬದುಕು, ಸ್ವಾರ್ಥ ಅಪನಂಬಿಕೆ, ಅಹಂ ಎಲ್ಲರಲ್ಲೂ ಹೆಚ್ಚುತ್ತಿದೆ. ಪರಸ್ಪರ ಸಹಕಾರ-ಪ್ರೀತಿ ಸೌಜನ್ಯತೆ ಕಡಿಮೆಯಾಗುತ್ತಿದೆ. ಸಂಬಂಧಗಳು ಶಿಥಿಲವಾಗುತ್ತಿವೆ. ದಾಂಪತ್ಯ ವಿರಸ, ಅತ್ತೆ-ಸೊಸೆ ಜಗಳ, ತಂದೆ ತಾಯಿ ಮಕ್ಕಳ ನಡುವೆ ಘರ್ಷಣೆ ಹೆಚ್ಚುತ್ತಿದೆ. ದಾಂಪತ್ಯ ವಿಚ್ಛೇದನಗಳು ಹೆಚ್ಚುತ್ತಿವೆ. ಕುಟುಂಬದ ಪಾತ್ರಗಳ ನಿರ್ವಹಣೆ-ಜವಾಬ್ದಾರಿಗಳಲ್ಲಿ ಒಮ್ಮತವಿಲ್ಲ.
  3. ಮಕ್ಕಳ ವಿದ್ಯಾಭ್ಯಾಸ: ಪರೀಕ್ಷೆಗಳಲ್ಲಿ ಮಕ್ಕಳ ಸಾಧನೆ (ಮುಖ್ಯವಾಗಿ ಅವರು ಪಡೆಯಬೇಕಾದ ಅಂಕಗಳು, ಅವರು ಆಯ್ಕೆ ಮಾಡಿಕೊಳ್ಳಬೇಕಾದ ಕೋರ್ಸಗಳ) ಬಗ್ಗೆ ತಂದೆ-ತಾಯಿಗಳ ಮೇಲೆ, ವಿದ್ಯಾರ್ಥಿಗಳ ಮೇಲೆ ಅತಿಯಾದ ಒತ್ತಡ ಬೀಳುತ್ತಿದೆ. ಮಕ್ಕಳ ಅದರಲ್ಲೂ ಹರೆಯದವರ ಮಾತು, ವರ್ತನೆ ಅವರ ಬೇಜವಾಬ್ದಾರಿತನ ತಂದೆ-ತಾಯಿಗಳ ಪಾಲಿಗೆ ನುಂಗಲಾರದ ತುತ್ತಾಗುತ್ತಿದೆ. ಮೊಬೈಲ್ ಚಟ ಇಂಟರ್ನೆಟ್ ದುರ್ಬಳಕೆ ಹೆಚ್ಚುತ್ತಿದೆ.
  4. ಉದ್ಯೋಗ ಸಮಸ್ಯೆಗಳು: ನಿರುದ್ಯೋಗ ,ಕಡಿಮೆ ಆದಾಯ ಹೆಚ್ಚು ಕೆಲಸ, ಉದ್ಯೋಗ ಸ್ಥಳದಲ್ಲಿ ನಡೆಯುವ ಪಕ್ಷಪಾತ-ಅಕ್ರಮಗಳು, ಸಹೋದ್ಯೋಗಿಗಳ-ಮೇಲಧಿಕಾರಿಗಳ ಕಿರಿಕಿರಿ-ಬಡ್ತಿ/ ವರ್ಗಾವಣೆಯ ತೊಂದರೆಗಳು, ವೃತ್ತಿ-ತೃಪ್ತಿ ಇಲ್ಲದಿರುವುದು.
  5. ಕೀಳರಿಮೆ-ಒಂಟಿತನಗಳು: ಇತರರೊಡನೆ ಹೋಲಿಸಿಕೊಳ್ಳುವುದು, ತಮ್ಮ ದೌರ್ಬಲ್ಯ, ನ್ಯೂನತೆಗಳ ಬಗ್ಗೆ ಅತಿಯಾದ ಚಿಂತೆ, ಒಂಟಿತನದ ಭಾವನೆಗಳು ಮಾತಾಡಲು-ಅನುಭವ ಹಂಚಿಕೊಳ್ಳಲು ಜನರಿಲ್ಲದಿರುವುದು ಮನಸ್ಸಿಗೆ ಬಹಳ ಹಿಂಸೆಯನ್ನುಂಟು ಮಾಡುತ್ತದೆ.
  6. ದುಷ್ಚಟ ದುರಭ್ಯಾಸಗಳು: ಆರೋಗ್ಯಕ್ಕೆ ಮಾರಕ ಎಂದು ಗೊತ್ತಿದ್ದರೂ ಧೂಮಪಾನ, ಮದ್ಯಪಾನ, ಮಾದಕ ವಸ್ತುಗಳ ಸೇವನೆ, ವಿವಾಹೇತರ ಲೈಂಗಿಕ ಸಂಬಂಧಗಳು, ಬೆಟ್ಟಿಂಗ್-ಜೂಜಾಟದಂತಹ ದುಷ್ಚಟ ಒಬ್ಬರಲ್ಲಿದ್ದರೆ ಸಾಕು, ಅದರ ದುಷ್ಪರಿಣಾಮ ಮನೆಯವರ ಮೇಲೆ ಆಗುವುದು. ಇಡೀ ಕುಟುಂಬ ಸಂಕಷ್ಟಕ್ಕೆ ಒಳಗಾಗುತ್ತದೆ. ಹಣದ ಅಪವ್ಯಯವಾಗುತ್ತದೆ.
  7. ಜೀವನಶೈಲಿ ಒತ್ತಡ ಸಂಬಂಧಿ ರೋಗಗಳು ಮತ್ತು ಅವುಗಳ ಚಿಕಿತ್ಸೆ: ಶೇ.50ರಿಂದ 60ರಷ್ಟು ಜನ ಡಯಾಬಿಟಿಸ್, ಬಿಪಿ ಕಾಯಿಲೆ, ಥೈರಾಯಿಡ್ ಸಮಸ್ಯೆ, ಮೂಳೆ ಕೀಲುಗಳ ಬೇನೆ, ಅಸಿಡಿಟಿ, ಅಲ್ಸರ್, ಕ್ಯಾನ್ಸರ್, ಖಿನ್ನತೆ-ಆತಂಕದಂತಹ ಕಾಯಿಲೆಗಳಿಗೆ ಒಳಗಾಗಿದ್ದಾರೆ. 70% ವೈದ್ಯಸೇವೆಗಳು ಖಾಸಗಿ ಕ್ಷೇತ್ರದ ವಶದಲ್ಲಿರುವುದರಿಂದ ಚಿಕಿತ್ಸೆ ದುಬಾರಿಯಾಗುತ್ತಿದೆ. ಸೂಕ್ತ ಸಮಯಕ್ಕೆ, ಸೂಕ್ತ ಚಿಕಿತ್ಸೆ ದೊರೆಯುವ ಖಾತ್ರಿ ಇಲ್ಲವಾಗಿದೆ. ಕೋವಿಡ್ ಸೋಂಕು ಜನರ ಬದುಕನ್ನು ಅಸ್ತವ್ಯಸ್ತಗೊಳಿಸಿದೆ. ನಮ್ಮ ಆರೋಗ್ಯ ವ್ಯವಸ್ಥೆ ಕುಸಿಯುತ್ತಿದೆ.


ಮಾನಸಿಕ ಆರೋಗ್ಯ ವರ್ಧನೆಗೆ 15 ಸೂತ್ರಗಳು

  1. ಹಿತ-ಮಿತ-ಶಿಸ್ತಿನ ಆಹಾರ ಸೇವನೆ: ಬೆಳಗಿನ ಉಪಹಾರ ಮಧ್ಯಾಹ್ನ ರಾತ್ರಿಯ ಊಟದ ಸಮಯವನ್ನು ನಿಗದಿ ಮಾಡಿಕೊಳ್ಳಿ. ಹಣ್ಣು /ತರಕಾರಿ/ ಬೇಳೆ ಕಾಳುಗಳು/ ರಾಗಿ/ ಗೋಧಿ ಪದಾರ್ಥಗಳನ್ನು ಹೆಚ್ಚು ಸೇವಿಸಿ ಮಾಂಸಾಹಾರಿಗಳು ಮೀನು ಮೊಟ್ಟೆ ಕೋಳಿಮಾಂಸ ಸೇವಿಸಲಿ, ಕೆಂಪು ಮಾಂಸ ಕಡಿಮೆ ತಿನ್ನಲಿ ಜಂಕ್-ಫುಡ್ಸ್ ಬೇಡ. ಹೊರಗಡೆ ಆಹಾರ ಸೇವನೆ ತಗ್ಗಿಸಿ. ಮನೆ ಊಟಕ್ಕೆ ಬಲವಿರಲಿ. ಬಾಯಿರುಚಿಗಿಂತ, ಪೌಷ್ಟಿಕಾಂಶಗಳಿಗೆ ಗಮನಕೊಡಿ.
  2. ನಿದ್ರೆ: ಬೇಗ ಮಲಗಿ ಬೇಗ ಏಳಿ. ಆರೇಳು ಗಂಟೆಗಳ ಭಂಗವಿಲ್ಲದ ನಿದ್ರೆಮಾಡಿ. ಮಲಗುವ ಸ್ಥಳ ಸ್ವಚ್ಛ ವಾಗಿರಲಿ ಒಳ್ಳೆಯ ಗಾಳ್ಳಿ ಸಂಚಾರ ವಿರಲಿ.
  3. ಮೈಥುನ: ಒಬ್ಬ ಸಂಗಾತಿಯೊಂದಿಗೆ ಮಾತ್ರ ಲೈಂಗಿಕ ಸಂಬಂಧ ವಿರಲಿ. ವಿವಾಹೇತರ ಸಂಬಂಧ ಬೇಡ. ಅಸಹಜ ಲೈಂಗಿಕ ಕ್ರಿಯೆಯೂ ಬೇಡ. ಲೈಂಗಿಕ ಸಂಯಮ ಸ್ತ್ರೀ ಪುರುಷರಿಬ್ಬರಿಗೂ ಬೇಕು.
  4. ಷರತಿಲ್ಲದ ಪ್ರೀತಿ-ಸ್ನೇಹ-ವಿಶ್ವಾಸ: ಮನೆಯವರೊಡನೆ, ನೆರೆಹೊರೆ, ಬಂಧು-ಮಿತ್ರರು, ಸಹಪಾಠಿ- ಸಹೋದ್ಯೋಗಿಗಳೊಡನೆ ಪ್ರೀತಿ-ಸ್ನೇಹ ವಿಶ್ವಾಸದಿಂದಿರಿ. ಜೊತೆಯಾಗಿ ಮಾಡಿ ಸಂತೋಷಿಸುವ ಚಟುವಟಿಕೆಗಳನ್ನು ಹಮ್ಮಿಕೊಳ್ಳಿ. ಹಬ್ಬ-ಹರಿದಿನಗಳನ್ನು ಒಟ್ಟಾಗಿ ಆಚರಿಸಿ. ಇತರರ ಒಳ್ಳೆಯ ನಡೆ-ನುಡಿಗಳನ್ನು ಮೆಚ್ಚಿ ಶ್ಲಾಘಿಸಿ. ಅನಗತ್ಯವಾಗಿ, ಬಹಿರಂಗವಾಗಿ ಟೀಕಿಸಬೇಡಿ. ನಿಮ್ಮ ಅನುಭವ-ಅನಿಸಿಕೆ ಭಾವನೆಗಳನ್ನು ಆತ್ಮೀಯರಲ್ಲಿ ಹಂಚಿಕೊಳ್ಳಿ.
  5. ಆಸೆ ಆಕಾಂಕ್ಷೆಗಳಿಗೆ ಕಡಿವಾಣ ಹಾಕಿ: ನಿಮ್ಮ ಇತಿ ಮಿತಿಯಲ್ಲಿ ಆಸೆಗಳಿರಲಿ. ಲಭ್ಯವಿರುವುದರಲ್ಲಿ ತೃಪ್ತಿ ಇರಲಿ ಸರಳ ಜೀವನದಿಂದ ನೆಮ್ಮದಿ. ಅತಿಯಾದ ಭೋಗ-ಭಾಗ್ಯ ಆಡಂಬರ-ಪ್ರತಿಷ್ಠೆಗಳು ಸುಖಕ್ಕಿಂತ ದುಃಖವನ್ನು ತರುತ್ತವೆ.
  6. ಉದ್ಯೋಗ ತೃಪ್ತಿ ಇರಲಿ: ಆಯ್ದುಕೊಂಡ ಉದ್ಯೋಗವನ್ನು ಪ್ರೀತಿಯಿಂದ ಮಾಡಿ. ಉದ್ಯೋಗ ಸ್ಥಳದಲ್ಲಿ ಎಲ್ಲರೊಡನೆ ಹೊಂದಿಕೊಳ್ಳಿ. ಕಿರಿಕಿರಿ ಮಾಡುವವರಿಂದ ದೂರವಿರಿ. ಯಾವುದೇ ಉದ್ಯೋಗ ನಾವು ಸಮಾಜಕ್ಕೆ ಮಾಡುವ ಸೇವೆ ಎಂದು ಭಾವಿಸಿ.
  7. ವಾಸ್ತವಿಕ ಪ್ರಜ್ಞೆ ಇರಲಿ: ನಿಮ್ಮ ಬಲಾಬಲಗಳ ಅರಿವಿರಲಿ. ಕಲ್ಪನಾ ಲೋಕದಲ್ಲಿಯೇ ವಿಹರಿಸಬೇಡಿ, ಸಂಪನ್ಮೂಲಗಳ ಇತಿಮಿತಿಯ ಅರಿವಿರಲಿ.
  8. ಸ್ವಾಭಿಮಾನ-ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಿ: ಯಾವುದೇ ನೆಪ ಕಾರಣವನ್ನು ಒಡ್ಡಿ ಕೀಳರಿಮೆ ಬೇಡ. ಆದಷ್ಟೂ ಸ್ವಾವಲಂಬಿಯಾಗಿರಿ. ಪರಾವಲಂಬನೆ ಸ್ವಾಭಿಮಾನವನ್ನು ತಗ್ಗಿಸುತ್ತದೆ.
  9. ನಿತ್ಯಜೀವನದಲ್ಲಿ ಶಿಸ್ತು-ಅಚ್ಚುಕಟ್ಟುತನವನ್ನು ರೂಢಿಸಿಕೊಳ್ಳಿ: ಪ್ರತಿಯೊಂದು ಕೆಲಸ, ಚಟುವಟಿಕೆಯನ್ನು ಯೋಜನೆ ಮಾಡಿ. ಪ್ರತಿ ವಸ್ತುವನ್ನು ಆಯಾ ಸ್ಥಳದಲ್ಲಿಡಿ. ಎಲ್ಲೆಂದರೆ ಅಲ್ಲಿ ಎಸೆಯಬೇಡಿ. ಓರಣ ಮತ್ತು ಸ್ವಚ್ಛತೆ ಮನಸ್ಸಿಗೆ ಮುದ ಕೊಡುತ್ತದೆ. ಸಮಯದ ಸದ್ಬಳಕೆಯಾಗುತ್ತದೆ.
  10. ನಿತ್ಯ ಆರೋಗ್ಯಕರ ಹವ್ಯಾಸ-ಮನರಂಜನೆಗೆ: ಒಂದು ಗಂಟೆ ಮೀಸಲಿಡಿ. ಸಾಹಿತ್ಯ ಲಲಿತ ಕಲೆಗಳು, ಸೃಜನಶೀಲ ಚಟುವಟಿಕೆಗಳು ಮನಸ್ಸಿಗೆ ಸಂತೋಷವನ್ನು ಕೊಡುತ್ತವೆ.
  11. ನಿತ್ಯ ವ್ಯಾಯಾಮ-ವಾಕಿಂಗ್-ಜಾಗಿಂಗ್-ಹೊರಾಂಗಣ ಕ್ರೀಡೆ, ಸೈಕ್ಲಿಂಗ್, ಈಜು ಇತ್ಯಾದಿ ಶರೀರಕ್ಕೆ ಚಲನೆ ನೀಡುವ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ.
  12. ನಕಾರಾತ್ಮಕ ಘಟನೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ: ಸೋಲು, ಕಷ್ಟ, ನಷ್ಟಗಳು, ಅಗಲಿಕೆ, ಸಾವು, ಅವಮಾನ, ಅಪಘಾತ, ಕೊರತೆ, ಅನಾರೋಗ್ಯಗಳುಂಟಾದಾಗ ಭಯಬೇಡ, ದುಃಖವು ಬೇಡ. ಬಂದು ಹೋಗುವ ಈ ಘಟನೆ ಅನುಭವಗಳಿಂದ ಪಾಠ ಕಲಿಯಿರಿ. ಚಿಂತೆ ಬೇಡ. ಜನಬಲ ಮತ್ತು ಆತ್ಮಬಲವನ್ನು ಹೆಚ್ಚಿಸಿಕೊಳ್ಳಿ.
  13. ಹಣಕಾಸಿನ ನಿರ್ವಹಣೆ: ಅನಗತ್ಯ ಖರ್ಚುಗಳನ್ನು ಮಾಡಬೇಡಿ. ಆದಾಯ ಖರ್ಚನ್ನು ಬ್ಯಾಲೆನ್ಸ್ ಮಾಡಿ. ಅನಿವಾರ್ಯವಾದಾಗ ಮಾತ್ರಸಾಲ ಮಾಡಿ. ಅದನ್ನು ತೀರಿಸುವ ವಿಧಾನವನ್ನು ಯೋಚಿಸಿ.
  14. ಅನಿವಾರ್ಯವಾದಾಗ ಮಾತ್ರ ಸ್ಪರ್ಧೆ ಮಾಡಿ: ಅನಗತ್ಯ ಸ್ಪರ್ಧೆ ಬೇಡ, ಎಲ್ಲರಿಗಿಂತ ಮೇಲು, ಎಲ್ಲರಿಗಿಂತ ಮುಂದಿರುವ ಅಗತ್ಯವಿಲ್ಲ. ಎಲ್ಲರ ಪ್ರಗತಿಗಾಗಿ ಶ್ರಮಿಸಿ.
  15. ದೇವರು-ಧರ್ಮದಲ್ಲಿ ನಂಬಿಕೆ ಇದ್ದರೆ, ನಿಮ್ಮ ಧಾರ್ಮಿಕ ಆಚರಣೆಗಳು ಸರಳವಾಗಿರಲಿ ಸತ್ಯ ಪ್ರಾಮಾಣಿಕತೆ ಸೇವೆಯಲ್ಲಿ ದೇವರನ್ನು ಕಾಣಿ.

ಡಾ. ಸಿ.ಆರ್. ಚಂದ್ರಶೇಖರ್, ಮನೋವೈದ್ಯ

drcrchandrashekhar@gmail.com


Stay up to date on all the latest ಅಂಕಣಗಳು news
Poll
New parliament building

ಹೊಸ ಸಂಸತ್ ಕಟ್ಟಡದ ಉದ್ಘಾಟನೆಯನ್ನು ಬಹಿಷ್ಕರಿಸುವ ಹಲವಾರು ವಿರೋಧ ಪಕ್ಷಗಳ ನಿರ್ಧಾರವು ಸಮರ್ಥನೀಯವೇ?


Result
ಹೌದು
ಇಲ್ಲ

Comments(1)

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

  • Mallikarjun

    Yes really good think
    1 year ago reply
flipboard facebook twitter whatsapp