
ಮಳೆಗಾಲ ಈಗಾಗಲೇ ಆರಂಭವಾಗಿದ್ದು ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಜನರಲ್ಲಿ ಕಾಣಿಸಿಕೊಳ್ಳುತ್ತಿವೆ. ಡೆಂಗ್ಯೂ ಜ್ವರ ಈಗಾಗಲೇ ಕಾಣಿಸಿಕೊಂಡಿದೆ. ಜೊತೆಗೆ ಇಲಿ ಜ್ವರವೂ (Rat Fever) ಕಾಣಿಸಿಕೊಂಡು ಆರೋಗ್ಯದ ಬಗ್ಗೆ ನಾವು ಹೆಚ್ಚಿನ ಕಾಳಜಿ ವಹಿಸುವಂತೆ ಮಾಡಿದೆ.
ಇಲಿ ಜ್ವರ ಎಂದರೆ ಇಲಿ ಕಚ್ಚಿದರೆ ಬರುವ ಜ್ವರ ಎಂದು ಅರ್ಥವಲ್ಲ. ಇದೊಂದು ಪ್ರಾಣಿಜನ್ಯ ಬ್ಯಾಕ್ಟೀರಿಯಾ ಸೋಂಕು. ಇಲಿಯ ಎಂಜಲು, ಮೂತ್ರ, ಮಲ ಅಥವಾ ಅದರ ದೇಹದ ಯಾವುದೇ ದ್ರವ ಮಾನವರ ಚರ್ಮಕ್ಕೆ ತಾಗಿದರೆ ಈ ಸೋಂಕು ಉಂಟಾಗಬಹುದು.
ಇಲಿ ಜ್ವರದ ವೈಜ್ಞಾನಿಕ ಹೆಸರು ಲೆಪ್ಟೊಸ್ಪೈರೋಸಿಸ್. ಇದು ಲೆಪ್ಟೊಸ್ಪೈರ ಎಂಬ ಬ್ಯಾಕ್ಟೀರಿಯ ರೋಗಾಣುಗಳಿಂದ ಬರುತ್ತದೆ ಮತ್ತು ಪ್ರಾಣಿಗಳಿಂದ ಮಾನವರಿಗೆ ಹರಡುವ ರೋಗಗಳಲ್ಲಿ ಇದೂ ಒಂದು ಪ್ರಮುಖ ಕಾಯಿಲೆ. ಪ್ರಮುಖವಾಗಿ ಇಲಿ ಮತ್ತು ಹೆಗ್ಗಣಗಳಿಂದ ಈ ರೋಗಾಣುಗಳು ಹರಡುವುದರಿಂದ ಈ ಕಾಯಿಲೆಯು ಇಲಿ ಜ್ವರ ಎಂದೇ ಹೆಸರು ಪಡೆದಿದೆ.
ಈ ಕಾಯಿಲೆಯು ಮನುಷ್ಯರನ್ನಷ್ಟೇ ಅಲ್ಲ ದನ, ಎಮ್ಮೆ, ಕುರಿ, ಮೇಕೆ, ಹಂದಿ, ನಾಯಿ, ಬೆಕ್ಕು, ವನ್ಯಮೃಗಗಳು ಹೀಗೆ ಬಹುತೇಕ ಪ್ರಾಣಿಗಳಿಗೆ ತೊಂದರೆ ಕೊಡುತ್ತದೆ. ಕೆಲವರಿಗೆ ಇಲಿಗಳು ತಮ್ಮ ಉಗುರುನಿಂದ ಪರಚಿ ಹೋದರೆ ಅಥವಾ ಹಲ್ಲಿನಿಂದ ಸಣ್ಣದಾಗಿ ಕಚ್ಚಿದರೆ ಕೂಡ ಜ್ವರ ಬರಬಹುದು. ಕೇವಲ ಇಲಿಗಳು ಮಾತ್ರವಲ್ಲ, ಇಲಿಗಳನ್ನು ಹಿಡಿಯುವ ಬೆಕ್ಕುಗಳು ಮತ್ತು ನಾಯಿಗಳಿಗೆ ಈ ಸೋಂಕು ತಗುಲಿ ಅವುಗಳಿಂದಲೂ ಜನರಿಗೆ ಈ ರೋಗ ಬರಬಹುದು ಎಂಬುದನ್ನು ನಾವು ಅರಿಯಬೇಕು. ಒಂದು ಸಮಾಧಾನಕರ ವಿಷಯ ಎಂದರೆ ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದಿಲ್ಲ.
ಈ ಕಾಯಿಲೆಯು ಆರಂಭಿಕ ಹಂತದಲ್ಲಿ ಫ್ಲೂ, ಡೆಂಗಿ ಅಥವಾ ಟೈಫಾಯ್ಡ್ ಜ್ವರದ ಲಕ್ಷಣಗಳನ್ನು ತೋರಿಸುತ್ತದೆ. ತಲೆನೋವು, ಕಣ್ಣು ಕೆಂಪಾಗುವುದು, ವಾಕರಿಕೆ ಅಥವಾ ವಾಂತಿ, ಮೈಕೈ ನೋವು, ಮೈಮೇಲೆ ಗುಳ್ಳೆಗಳು (ಸೋಂಕು ಉಂಟಾದ ಎರಡು ದಿನಗಳ ನಂತರ) ಮತ್ತು ಕೀಲುನೋವು ಕಂಡುಬರುತ್ತದೆ. ವೈದ್ಯರ ಬಳಿ ಹೋಗಿ ಎರಡು ವಾರಗಳ ನಂತರವೂ ಈ ಲಕ್ಷಣಗಳು ಹಾಗೆ ಇದ್ದವು ಎಂದರೆ ಹುಷಾರಾಗಿರಬೇಕು. ವಿಸ್ತೃತ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕೆಲವೊಮ್ಮೆ ರೋಗ ನಿರ್ಣಯ ತಪ್ಪಾಗುವ ಸಾಧ್ಯತೆಯಿದೆ. ಆದ್ದರಿಂದ ಸರಿಯಾದ ಲ್ಯಾಬ್ ಟೆಸ್ಟಿನಿಂದ ಇಲಿ ಜ್ವರವನ್ನು ನಿಖರವಾಗಿ ಪತ್ತೆ ಹಚ್ಚಬಹುದು.
ಇದರ ಚಿಕಿತ್ಸೆಗೆ ಜೀವಿರೋಧಕ ಔಷಧಗಳು ಪರಿಣಾಮಕಾರಿಯಾದರೂ ಮಾನವರಲ್ಲಿ ಈ ರೋಗವನ್ನು ತಡೆಗಟ್ಟುವಂತಹ ಸೂಕ್ತ ಲಸಿಕೆ ಇನ್ನೂ ಲಭ್ಯವಿಲ್ಲ. ಆದರೂ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ತೆಗೆದುಕೊಳ್ಳುವುದರಿಂದ ಪರಿಹಾರವಾಗುತ್ತದೆ. ಇಲ್ಲದಿದ್ದರೆ ಬ್ಯಾಕ್ಟೀರಿಯಾದ ಸೋಂಕು ಕಿಡ್ನಿ, ಲಿವರ್, ಹೃದಯಕ್ಕೆ ಹರಡಿ ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು.
ಇಲಿ ಜ್ವರವನ್ನು ವೈಯಕ್ತಿಕ ನೈರ್ಮಲ್ಯ, ಪರಿಸರ ನಿರ್ವಹಣೆ ಮತ್ತು ಅಪಾಯದ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕ ತಡೆಗಟ್ಟಬಹುದು. ಮನೆಯಲ್ಲಿ/ ಅಥವಾ ಉಗ್ರಾಣಗಳಲ್ಲಿ ಆಹಾರ ಪದಾರ್ಥಗಳು, ದವಸ ಧಾನ್ಯಗಳನ್ನು ಎಲ್ಲೆಂದರಲ್ಲಿ ಎಸೆಯದೆ ಸ್ವಚ್ಛತೆ ಕಾಪಾಡಿಕೊಳ್ಳುವುದರ ಮೂಲಕ ಅಲ್ಲಿ ಇಲಿಗಳ ಓಡಾಟವನ್ನು ನಿಯಂತ್ರಿಸಬಹುದು.
ಕಾಲಿನ ಬಿರುಕುಗಳು, ಗಾಯದ ಮೂಲಕ ರೋಗಾಣುಗಳು ದೇಹ ಸೇರುವುದರಿಂದ ರೈತರು ಮತ್ತು ಹೈನುಗಾರರು ಕೊಟ್ಟಿಗೆ, ಹೊಲಗದ್ದೆಗಳಲ್ಲಿ ಕೆಲಸ ಮಾಡುವಾಗ ರಕ್ಷಣೆಗಾಗಿ ಪಾದರಕ್ಷೆಗಳನ್ನು ಬಳಸಲೇಬೇಕು. ವಿಶೇಷವಾಗಿ ಮಳೆಗಾಲದಲ್ಲಿ ಕೆಸರು ನೀರು ನಿಂತಿರುವ ಹೊಂಡಗಳಲ್ಲಿ ದನಗಳಿಗೆ ನೀರು ಕುಡಿಸುವುದು ಮತ್ತು ಮಕ್ಕಳು ಆಟವಾಡುವುದನ್ನು ತಪ್ಪಿಸುವುದು ಒಳ್ಳೆಯದು. ರೈತರು ಮತ್ತು ಕೃಷಿ ಕಾರ್ಮಿಕರು ಹೊರಗಡೆ ಕೆಲಸ ಮಾಡುವಾಗ ರಕ್ಷಣಾತ್ಮಕ ಸಾಧನಗಳನ್ನು ಬಳಸಬೇಕು ಮತ್ತು ಹೊಲಗಳಲ್ಲಿ ಅಥವಾ ಪ್ರಾಣಿಗಳೊಂದಿಗೆ ಕೆಲಸ ಮಾಡುವಾಗ ಎಚ್ಚರ ವಹಿಸಿ ಸುರಕ್ಷಿತರಾಗಿರಬೇಕು.
ಬಯಲು ಪ್ರದೇಶದಲ್ಲಿ ನೀರು ನಿಲ್ಲುವುದು ಮತ್ತು ಮಾಲಿನ್ಯವನ್ನು ತಡೆಗಟ್ಟಲು ಸರಿಯಾದ ಪ್ರವಾಹ ನಿರ್ವಹಣೆ ಮತ್ತು ಒಳಚರಂಡಿ ವ್ಯವಸ್ಥೆಯನ್ನು ರೂಪಿಸಬೇಕು.
ಪ್ರಾಣಿಗಳನ್ನು ಮುಟ್ಟಿದ ನಂತರ ಅಥವಾ ಕಲುಷಿತ ನೀರು ಅಥವಾ ಮಣ್ಣಿನೊಂದಿಗೆ ಸಂಪರ್ಕಕ್ಕೆ ಬಂದ ಕೈಗಳನ್ನು ಸಾಬೂನು ಮತ್ತು ನೀರಿನಿಂದ ಚೆನ್ನಾಗಿ ತೊಳೆದು ಸ್ವಚ್ಛ ಮಾಡಿಕೊಳ್ಳಬೇಕು. ಪ್ರಾಣಿಗಳ ಮೂತ್ರ ಮಾಡುವ ಪ್ರದೇಶಗಳಲ್ಲಿ ಬರಿಗಾಲಿನಲ್ಲಿ ನಡೆಯಬಾರದು. ಸಾಕು ಪ್ರಾಣಿಗಳಿಂದ ರೋಗ ಹರಡುವುದನ್ನು ತಪ್ಪಿಸಲು ನಾಯಿ ಮತ್ತು ಬೆಕ್ಕುಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸುವುದು ಸೂಕ್ತ. ಯಾವುದಾದರೂ ರೋಗ ಬಂದು ಸತ್ತ ಪ್ರಾಣಿಗಳ ದೇಹವನ್ನು ಆಳವಾದ ಗುಂಡಿಯಲ್ಲಿ ಸುಣ್ಣದೊಟ್ಟಿಗೆ ಹೂಳುವುದು ಒಳ್ಳೆಯದು.
ಮಳೆ ಬಂದಾಗ ನಗರಪ್ರದೇಶಗಳಲ್ಲಿಯೂ ಎಲ್ಲಿಯೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಇಲಿ ಮತ್ತು ಹೆಗ್ಗಣಗಳಂತಹ ದಂಷ್ಟ್ರಕಗಳು ಬರುವುದನ್ನು ತಪ್ಪಿಸಲು ಬಲೆಗಳು ಮತ್ತು ದಂಷ್ಟ್ರಕನಾಶಕಗಳನ್ನು ಬಳಸಬೇಕು. ವಸತಿ ಪ್ರದೇಶಗಳು, ದಿನಸಿ ಅಂಗಡಿಗಳು, ಹೋಟೆಲುಗಳು ಮತ್ತು ಉಗ್ರಾಣ, ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿಡಬೇಕು. ಹಸಿಕಸವನ್ನು ಸರಿಯಾಗಿ ವಿಲೇವಾರಿ ಮಾಡಬೇಕು. ಕುಡಿಯುವ ನೀರಿನ ಮೂಲಗಳನ್ನು ಶುದ್ಧ ಹಾಗೂ ಸ್ವಚ್ಛವಾಗಿಟ್ಟುಕೊಳ್ಳಬೇಕು.
ಇಲಿ ಜ್ವರದಿಂದ ಪಾರಾಗಲು ಆಯುರ್ವೇದದಲ್ಲಿ ಹೇಳಲಾಗಿರುವಂತೆ ಅಶ್ವಗಂಧ ಮತ್ತು ಅಮೃತಬಳ್ಳಿ ಚೂರ್ಣವನ್ನು ಅರ್ಧರ್ಧ ಚಮಚ ಬಿಸಿನೀರಿನಲ್ಲಿ ಬೆರೆಸಿ ತೆಗೆದುಕೊಳ್ಳಬೇಕು. ಮಕ್ಕಳಿಗೆ ಆದರೆ ಈ ಎರಡೂ ಚೂರ್ಣಗಳನ್ನು ಕಾಲು ಚಮಚ ಮತ್ತು ಸ್ವಲ್ಪ ಬೆಲ್ಲವನ್ನು ಬಿಸಿನೀರಿನಲ್ಲಿ ಬೆರೆಸಿ ಕುಡಿಸಬೇಕು. ಅಮೃತಬಳ್ಳಿಯನ್ನು ನೀರಿನಲ್ಲಿ ನಿಧಾನವಾಗಿ ಕುದಿಸಿ ಕಷಾಯ ಮಾಡಿಯೂ ಸೇವಿಸಬಹುದು.
Advertisement