ಮನುಷ್ಯನ ಮೆದುಳು ತಾನು ಪಡೆದುಕೊಂಡದ್ದನ್ನ ಕಳೆದುಕೊಳ್ಳದಂತೆ ರಕ್ಷಿಸಿಕೊಳ್ಳಲು ಸದಾ ತಯಾರಾಗಿರುತ್ತದೆ. ಅದು ಮನುಷ್ಯನ ಸಹಜ ಗುಣವಾಗಿದೆ. ಹೀಗಿದ್ದೂ ಮನುಷ್ಯನಿಗೆ ತಾನು ಗಳಿಸಿದ್ದು ಕಳೆದುಕೊಳ್ಳುವ ಭಯ ಸದಾ ಇದ್ದೆ ಇರುತ್ತದೆ. ಪ್ರೀತಿ ಪಾತ್ರರ, ಬಂಧು ಬಳಗವನ್ನ ಕಳೆದುಕೊಳ್ಳುವ ಭಯ, ಆರೋಗ್ಯ ನಾಶದ ಭಯ ಹೀಗೆ ಹಲವು ಹತ್ತು ಭಯಗಳಿವೆ. ಅವುಗಳಲ್ಲಿ ಪ್ರಮುಖ ಸ್ಥಾನದಲ್ಲಿ ನಿಲ್ಲುವುದು ತಾನು ಗಳಿಸಿದ ಸಂಪತ್ತಿನ ನಾಶದ್ದು. ಇದೊಂದು ಗೀಳು ಪ್ರವೃತ್ತಿ. ಈ ಭಯ ಹೆಚ್ಚಾದರೆ ಅದನ್ನ ಅಸುನೇತ್ರಾ ಅತುಷ್ಟಿ ಎನ್ನಲಾಗುತ್ತದೆ. ಇಂತಹ ಭಯಕ್ಕೆ ಇಂಗ್ಲಿಷ್ನಲ್ಲಿ ‘chrometophobia' (ಕ್ರೋಮೆಟೋಫೋಬಿಯಾ) ಎನ್ನುತ್ತಾರೆ.
ಜಗತ್ತು ಇಂದು ಹಿಂದೆಂದೂ ಕಾಣದ ಅಸ್ಥಿರತೆಯನ್ನ ಕಾಣುತ್ತಿದೆ. ಹಣವಿಲ್ಲದವರ ಗೋಳು ಒಂದೆಡೆಯಾದರೆ, ಉಳ್ಳವರ ತೊಳಲಾಟಗಳು ಕೂಡ ಹೆಚ್ಚಾಗಿವೆ. ಒಂದೇ ಸಮನೆ ಏರುತ್ತಿರುವ ಹಣದುಬ್ಬರ ಹಣವನ್ನ ಕರಗಿಸುತ್ತಿದೆ. ನಿನ್ನೆಯ ಬೆಲೆ ಇಂದಿಗಿಲ್ಲ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಕಷ್ಟಪಟ್ಟು ಗಳಿಸಿದ ಹಣವನ್ನ ಕರಗಿ ಹೋಗದಂತೆ ಉಳಿಸಿಕೊಳ್ಳುವ ದರ್ದು, ಭಯಕ್ಕೆ ಇಂದು ಸಮಾಜ ತುತ್ತಾಗಿದೆ. ಇದು ವ್ಯಸನದ ಮಟ್ಟಕ್ಕೆ ಹೋಗಬಾರದು. ಈ ಭಯದಲ್ಲಿ ಕೂಡ ಹಲವು ವಿಧ.
ಜೀವನದಲ್ಲಿ ಒಂದಷ್ಟು ಪ್ರತಿಶತ ಭಯ ಒಳ್ಳೆಯದು ಏಕೆಂದರೆ ಅದು ಹೂಡಿಕೆದಾರರನ್ನ, ಶ್ರೀಮಂತನನ್ನ ಎಚ್ಚರದ ಸ್ಥಿತಿಯಲ್ಲಿಡುತ್ತದೆ. ವಿವೇಚನೆಯಿಲ್ಲದೆ, ಭಯವಿಲ್ಲದೆ ಕಂಡಕಂಡಲೆಲ್ಲ ಹೂಡಿಕೆ ಮಾಡುವುದರಿಂದ ಅಪಾಯ ಹೆಚ್ಚಾಗುತ್ತದೆ. ಆದರೆ ಯಾವುದೂ ಅತಿಯಾಗಬಾರದು. ಅತಿಯಾದ ಭಯ ಜೀವನದಲ್ಲಿನ ಸುಖವನ್ನ ಕಸಿದು ಬಿಡುತ್ತದೆ. ಇವತ್ತಿನ ದಿನದಲ್ಲಿ ಈ ಎಲ್ಲಾ ಭಯಗಳು ಕೇವಲ ಶ್ರೀಮಂತರು ಅಥವಾ ಅತಿ ಶ್ರೀಮಂತರಿಗೆ ಮಾತ್ರ ಅನ್ವಯವಾಗುವುದಿಲ್ಲ. ಅದು ಮಧ್ಯಮ ಮತ್ತು ಮೇಲ್ಮಧ್ಯಮವರ್ಗಕ್ಕೂ ಲಾಗೂ ಹಾಗುತ್ತದೆ. ಮೇಲಿನ ಭಯಗಳ ಜೊತೆಗೆ ಅವರ ಪಾಲಿಗೆ ಇನ್ನೊಂದಷ್ಟು ಹೊಸ ಭಯಗಳು ಕೂಡ ಸೇರ್ಪಡೆಯಾಗಿದೆ.
ಅವುಗಳಲ್ಲಿ ಪ್ರಮುಖವಾಗಿ:
ಕೊನೆಯ ಹಂತದ ಸೆಲ್ಫ್ ಡೌಟ್ ಭಯ ಅಥವಾ ಸಂದೇಹ ಸೃಷ್ಟಿಯಾಗುವವರೆಗೆ ಸಮಸ್ಯೆಯನ್ನ ಬೆಳೆಯಲು ಎಂದಿಗೂ ಬಿಡಬಾರದು. ಒಬ್ಬ ವ್ಯಕ್ತಿ ಈ ಹಂತವನ್ನ ತಲುಪುವುದಕ್ಕೆ ಮುಂಚೆ ಹಲವು ಹಲವು ಗುಣಲಕ್ಷಣಗಳು ಅವನಲ್ಲಿ ಕಾಣ ಸಿಗುತ್ತವೆ. ವ್ಯಕ್ತಿ ತನ್ನಲಾದ ಬದಲಾವಣೆಯನ್ನ ಆತನೇ ಗಮನಿಸಿಕೊಂಡು ಬದಲಾಯಿಸಿಕೊಳ್ಳಬಹುದು, ಅಥವಾ ಆತನ ಸಮೀಪವರ್ತಿಗಳು ಇದನ್ನ ಗುರುತಿಸಿ ಬದಲಾವಣೆ ಮಾಡಿಕೊಳ್ಳಲು ಸಹಾಯ ಮಾಡಬಹುದು. ಅಂತಹ ಒಂದಷ್ಟು ಗುಣಲಕ್ಷಣಗಳನ್ನ ಪಟ್ಟಿ ಮಾಡುವ ಪ್ರಯತ್ನ ಕೆಳಗಿನ ಸಾಲುಗಳಲ್ಲಿವೆ.
ಮೇಲಿನ ಅಂಶಗಳನ್ನ ಗಮನಿಸಿ ನೋಡಿ ಸಾಮಾನ್ಯ ಸಮಯದಲ್ಲಿ, ಇದ್ಯಾವುದೂ ಅಸಹಜ ಎನ್ನಿಸುವುದಿಲ್ಲ. ಆದರೆ ಇದು ಗೀಳು ಪ್ರವೃತ್ತಿಯಾಗಿ ಸದಾ ಅದನ್ನೇ ಧ್ಯಾನಿಸಲು ಶುರು ಮಾಡಿದರೆ ಆಗ ಖಂಡಿತ ಇದರಲ್ಲಿ ಅಸಹಜತೆಯಿದೆ ಎನ್ನುವುದನ್ನ ನಾವು ಮನಗಾಣಬೇಕು. ಎಷ್ಟೇ ಹಣವಿದ್ದರೂ ಕೂಡ ಇಂತಹ ಮನಸ್ಥಿತಿಯಲ್ಲಿ ಅದನ್ನ ಆಸ್ವಾದಿಸಲು ಆಗುವುದಿಲ್ಲ.
ಜಗತ್ವಿಖ್ಯಾತ ವಿಜ್ಞಾನಿ ಮೇರಿ ಕ್ಯೂರಿ ಅವರು ಈ ಜಗತ್ತಿನಲ್ಲಿ ಯಾವುದರ ಬಗ್ಗೆಯೂ ಭಯ ಪಡಬೇಕಾದ ಅವಶ್ಯಕೆತೆಯಿಲ್ಲ. ನಾವು ವಿಷಯದ ಬಗ್ಗೆ ಹೆಚ್ಚು ತಿಳಿದುಕೊಳ್ಳುವ /ಅರ್ಥ ಮಾಡಿಕೊಳ್ಳುವ ಅವಶ್ಯಕತೆ ಹೆಚ್ಚಾಗಿದೆ ಅಷ್ಟೇ, ಹೀಗೆ ವಿಷಯ ಜ್ಞಾನ ಹೆಚ್ಚಿಸಿಕೊಳ್ಳಲು ಇದು ಸರಿಯಾದ ಸಮಯ' ಎನ್ನುತ್ತಾರೆ. ಭಯ ಎನ್ನುವುದು ವಸ್ತು ಅಥವಾ ವಿಷಯದ ಬಗೆಗಿನ ಇರುವ ಮಾಹಿತಿ ಕೊರತೆ ಎನ್ನುವುದು ಬಹಳ ಸತ್ಯವಾದ ಮಾತು. ನಾವು ಯಾವಾಗ ಹೆಚ್ಚು ತಿಳಿದುಕೊಳ್ಳುತ್ತ ಹೋಗುತ್ತೇವೆ, ಕಲಿಯುತ್ತಾ ಹೋಗುತ್ತೇವೆ ಆಗ ಭಯ ಕಡಿಮೆಯಾಗುತ್ತಾ ಹೋಗುತ್ತದೆ.
ನೆನಪಿರಲಿ: ಭಯದಲ್ಲಿ ಹಲವು ವಿಧ, ಅವುಗಳಲ್ಲಿ ಹಣ/ಸಂಪತ್ತು ಕಳೆದುಕೊಳ್ಳುವ ಭಯವೂ ಪ್ರಮುಖವಾದದ್ದು. ಹಣ ಕೆಳೆದು ಹೋದರೆ? ಅಥವಾ ಗಳಿಸಿದ ಸಂಪತ್ತು ನಾಶವಾದರೆ ಹೇಗೆ ಎನ್ನುವ ಒಂದು ಸಣ್ಣ ಮಟ್ಟದ ಎಚ್ಚರಿಕೆ ಅತ್ಯಗತ್ಯ, ಅದು ತಪ್ಪಲ್ಲ. ಆದರೆ ಅದು ಭಯವಾಗಬಾರದು, ಗೀಳಾಗಬಾರದು. ಗಳಿಸಿದ ಸಂಪತ್ತನ್ನ ಅನುಭವಿಸಲು ಅಡ್ಡಿಯಾಗಬಾರದು.
-ರಂಗಸ್ವಾಮಿ ಮೂಕನಹಳ್ಳಿ
muraram@yahoo.com
Advertisement