
ನಾವಿಂದು ಉನ್ಮಾದದ ದಿನಗಳಲ್ಲಿದ್ದೇವೆ. ಸೋಶಿಯಲ್ ಮೀಡಿಯಾ ಇರಬಹುದು ಅಥವಾ ಮುಖ್ಯವಾಹಿನಿ ಮೀಡಿಯಾ, ಎಲ್ಲೆಡೆ ಒಂದೇ ಮಾತು. ಪಾಪಿ ಪಾಕಿಸ್ತಾನಕ್ಕೆ ಸರಿಯಾದ ಬುದ್ದಿ ಕಲಿಸಬೇಕು. ಅವರ ಮೇಲೆ ಯುದ್ಧಮಾಡಿ ಅವರು ಇನ್ನೊಮ್ಮೆ ಭಾರತದ ಕಡೆಗೆ ಕಣ್ಣೆತ್ತಿ ಕೂಡ ನೋಡದಂತೆ ಅವರನ್ನು ಹೊಸಕಿ ಹಾಕಬೇಕು ಎನ್ನುವುದು ಆ ಮಾತು. ಭಾರತೀಯನಾಗಿ ನನಗೂ ಮತ್ತೆಲ್ಲರಿಗೂ ಈ ಭಾವನೆ ಬರುವುದು ಸಹಜ. ಈ ಭಾವನೆ ಈ ಕ್ಷಣದಲ್ಲಿ ಬಾರದೆ ಹೋದರೆ ಅದು ಅಸಹಜ.
ಪಾಕಿಸ್ತಾನಕ್ಕೆ ಬುದ್ಧಿ ಕಲಿಸಬೇಕು, ತಕ್ಕ ಶಾಸ್ತಿ ಮಾಡಬೇಕು ಎನ್ನುವುದರ ಬಗ್ಗೆ ಯಾವ ಭಾರತೀಯನಿಗೂ ತಕರಾರು ಇರಬಾರದು. ತಕರಾರು ಇದ್ದಲ್ಲಿ ಅವರು ಭಾರತದಲ್ಲಿ ಇರಬಾರದು. ಆದರೆ ಯುದ್ಧ? ಯುದ್ಧ ನಿಜಕ್ಕೂ ಬೇಕೇ? ಯುದ್ಧ ಸಮಸ್ಯೆಗೆ ಪರಿಹಾರವೇ? ಎನ್ನುವ ಪ್ರಶ್ನೆಗಳು ನಮ್ಮ ಮುಂದೆ ಬರುತ್ತವೆ. ಗಮನಿಸಿ ಇರಾನ್ ಮತ್ತು ಇರಾಕ್ ನಡುವಿನ ಯುದ್ಧ ಎಂಟು ವರ್ಷಗಳ ಕಾಲ ನಡೆಯಿತು.
ಇಸ್ರೇಲ್ ಮತ್ತು ಗಾಜಾ ನಡುವಿನ ಯುದ್ಧ ಮುಗಿಯುವಂತೆ ಕಾಣುತ್ತಿಲ್ಲ. ರಷ್ಯಾ ಮತ್ತು ಯುಕ್ರೈನ್ ನಡುವಿನ ಯುದ್ಧ ದಿನ ಒಪ್ಪತ್ತಿನಲ್ಲಿ ಮುಗಿದು ಹೋಗುತ್ತದೆ ಎಂದು ಕೊಂಡಿದ್ದೆವು. ಅದಕ್ಕೂ ಮೂರು ವರ್ಷವಾಯ್ತು. ಇದರ ಕಿಡಿ ಶುರುವಾಗಿ ದಶಕವಾಯ್ತು. ಹೀಗೆ ನಾವು ಯಾವುದೇ ದೇಶದ ನಡುವಿನ ಯುದ್ಧವನ್ನು ನೋಡಿಕೊಂಡು ಬಂದರೂ ಅವೆಲ್ಲವೂ ವರ್ಷಾನುಗಟ್ಟಲೆ ಎಳೆದಾಡಿವೆ. ಅಲ್ಲಿನ ಜನರ ಬದುಕು ದಾರುಣ ಸ್ಥಿತಿ ತಲುಪಿದೆ. ಹೀಗೆ ಯುದ್ಧವಾಗಿ ಸತ್ತ ಹೆಣಗಳನ್ನು ಕಂಡರೆ ಖುಷಿಯಾಗುವುದು ಕೇವಲ ರಣಹದ್ದುಗಳಿಗೆ ಮಾತ್ರ. ಈ ಜಗತ್ತನ್ನು ನಿಯಂತ್ರಿಸುತ್ತಿರುವ ಹತ್ತರಿಂದ ಹನ್ನೆರೆಡು ಅತ್ಯಂತ ಪ್ರಭಾವಶಾಲಿ ಮನೆತನೆಗಳು ಇದರಿಂದ ಲಾಭ ಪಡೆಯುತ್ತವೆ ಅಷ್ಟೇ.
ಉಳಿದಂತೆ ರೋಷಾವೇಷದಲ್ಲಿ ಮೆದುಳಿನ ಕೆಲಸವನ್ನು ಹೃದಯಕ್ಕೆ ಕೊಟ್ಟರೆ, ಕೋಟ್ಯಂತರ ಭಾರತೀಯರ ಬದುಕು ಬೀದಿಗೆ ಬರುತ್ತದೆ. ಸ್ವಾಭಿಮಾನದ ಮುಂದೆ ಹಣ, ಆಸ್ತಿ ಪಾಸ್ತಿ ಕಳೆದುಕೊಳ್ಳುವುದು ಇದೆಲ್ಲಾ ಯಾವ ಮಹಾ ಲೆಕ್ಕ ಎನ್ನುವ ಯುದ್ಧಕ್ಕೆ ಮುಂಚಿನ ಮಾತುಗಳು, ಜೋಷ್ ಕೊನೆಯವರೆಗೂ ಉಳಿಯುವುದಿಲ್ಲ. ಮಾರ್ಚ್ ತಿಂಗಳಲ್ಲಿ ಯೂರೋಪಿನ ಪ್ರವಾಸದ ಸಮಯದಲ್ಲಿ ನೂರಾರು ಉಕ್ರೇನಿಯನ್ನರನ್ನು ಕಂಡಿದ್ದೇನೆ. ಅಲ್ಲಿ ಬದುಕಲಾರದೆ ಯೂರೋಪಿನ ಉದ್ದಗಲಕ್ಕೂ ಹರಡಿಕೊಂಡಿರುವ ಅವರನ್ನು ಎರಡನೇ ದರ್ಜೆ ಪ್ರಜೆಗಳಿಗಿಂತ ಕೀಳಾಗಿ ನೋಡಲಾಗುತ್ತಿದೆ. ಇಲ್ಲಿ ಯುದ್ಧವಾದರೆ ನಾವು ಹೋಗುವುದಾದರೂ ಎಲ್ಲಿಗೆ? ಯುದ್ಧ ಕೊನೆಯ ಅಸ್ತ್ರವಾಗಬೇಕೇ ಹೊರತು ಅದೇ ಪ್ರಥಮ ಆಯ್ಕೆಯಾಗಬಾರದು ಎನ್ನುವುದಕ್ಕೆ ಒಂದಷ್ಟು ಕಾರಣಗಳನ್ನು ನೋಡೋಣ.
ಆರ್ಥಿಕವಾಗಿ ಯುದ್ಧದಲ್ಲಿ ಭಾಗಿಯಾದ ಎರಡೂ ದೇಶಗಳೂ ಕುಸಿತ ಕಾಣುತ್ತವೆ: ಭಾರತದ ಮುಂದೆ ಭವ್ಯ ಭವಿಷ್ಯವಿದೆ. ಪಾಕಿಸ್ತಾನ ಎನ್ನುವುದು ಒಂದು ಫೇಲ್ಡ್ ನೇಶನ್. ಅದರ ಚಿತಾವಣೆಗೆ ನಾವು ಬಲಿಯಾಗಿ ಯುದ್ಧ ಶುರು ಮಾಡಿದರೆ ಅವರಿಗಿಂತ ಹೆಚ್ಚಿನ ನಷ್ಟ ನಮಗೆ ಉಂಟಾಗುತ್ತದೆ. ಜಾಗತಿಕವಾಗಿ ಟೆರರಿಸಂ ಕಾರಣದಿಂದ ಸರಿಸುಮಾರು 18 ಟ್ರಿಲಿಯನ್ ಡಾಲರ್ ನಷ್ಟವಾಗಿದೆ ಅದೂ ಕೇವಲ 2023 ರ ಒಂದು ವರ್ಷದಲ್ಲಿ, ಅಂದರೆ ಗಮನಿಸಿ ಹತ್ತಿರ ಹತ್ತಿರ ಜಾಗತಿಕ ಜಿಡಿಪಿಯ 13 ಪ್ರತಿಶತ ಮೌಲ್ಯದ ಹಣ ಈ ಟೆರರಿಸಂ ನಿಂದ ನಷ್ಟವಾಗುತ್ತಿದೆ. ಹೀಗಾಗಿ ಈ ಟೆರರಿಸಂ ಎನ್ನುವುದು ಕೇವಲ ಒಂದು ದೇಶದ ಸಮಸ್ಯೆಯಾಗಿ ಉಳಿದಿಲ್ಲ. ಎಲ್ಲಾ ದೇಶಗಳೂ ಒಂದಾಗಿ ಈ ರೀತಿಯ ಮೂಲಭೂತವಾದದ ವಿರುದ್ಧ ಹೋರಾಡಬೇಕಾಗ ಅವಶ್ಯಕತೆ ಇಂದು ಹೆಚ್ಚಾಗಿದೆ. ನೇರವಾಗಿ ನಾವು ಪಾಕಿಸ್ತಾನದ ಜೊತೆಗೆ ಯುದ್ದಕ್ಕೆ ಇಳಿದರೆ , ರೋಷಾವೇಷದಲ್ಲಿ ಹೇಳಿದಂತೆ ಒಂದೆರೆಡು ದಿನ ಅಥವಾ ವಾರದಲ್ಲಿ ಯುದ್ಧ ಮುಗಿಯುವುದಿಲ್ಲ. ಒಂದು ದಿನದ ಯುದ್ಧದ ಖರ್ಚು ಬಿಲಿಯನ್ ಡಾಲರುಗಳಲ್ಲಿ ಆಗುತ್ತದೆ. ಯುದ್ಧದ ಭೀಕರತೆ ಎಷ್ಟು ಎನ್ನುವುದರ ಮೇಲೆ ಎಷ್ಟು ಖರ್ಚಾಗುತ್ತದೆ ಎಂದು ಹೇಳಬಹುದು. ರಷ್ಯಾ ದೇಶಕ್ಕೆ ಉಕ್ರೈನ್ ಮೇಲಿನ ತೀವ್ರ ಯುದ್ಧದ ಸಮಯದಲ್ಲಿ ದಿನಕ್ಕೆ 20 ಬಿಲಿಯನ್ ಡಾಲರ್ ಖರ್ಚಾಗುತ್ತಿತ್ತು ಎನ್ನುವ ಅಂಕಿಅಂಶ ಬೆಚ್ಚಿಬೀಳುಸುತ್ತದೆ. ಇಷ್ಟು ದೊಡ್ಡ ಮೊತ್ತವನ್ನು ಗಳಿಸುವ ಕಷ್ಟ ಗೊತ್ತಿರುವವರು ಯುದ್ಧ ಬೇಕು ಎನ್ನುವುದಿಲ್ಲ.
ನಮ್ಮ ಲಕ್ಷಾಂತರ ಸೈನಿಕರ ಜೊತೆಗೆ ಜನ ಸಾಮಾನ್ಯರು ಕೂಡ ಸಾಯಬಹುದು: ಯುದ್ಧ ಎಂದ ಮೇಲೆ ಸೈನಿಕರು ಸಾಯುವುದನ್ನು ಖಂಡಿತ ತಪ್ಪಿಸುವುದು ಸಾಧ್ಯವಿಲ್ಲದ ಮಾತು. ಅದರ ಜೊತೆಗೆ ಜನ ಸಾಮಾನ್ಯಾರು ಕೂಡ ಸಾಯುವ ಸಾಧ್ಯತೆಯನ್ನು ಅಲ್ಲಗೆಳೆಯಲು ಬರುವುದಿಲ್ಲ. ಒಬ್ಬ ನುರಿತ ಸೈನಿಕ ಸತ್ತರೆ ಮತ್ತೆ ಅದೇ ಮಟ್ಟದ ಸೈನಿಕನನ್ನು ಸೇನೆ ಪಡೆದುಕೊಳ್ಳಲು ಹತ್ತಾರು ವರ್ಷ, ಲಕ್ಷಾಂತರ ರೂಪಾಯಿ ವ್ಯಯಿಸಬೇಕಾಗುತ್ತದೆ. ಇದರ ಜೊತೆಗೆ ಆ ಸೈನಿಕನ ಮನೆಯವರಿಗೆ ಆದ ವೈಯಕ್ತಿಕ ನಷ್ಟವನ್ನು ತುಂಬಿಕೊಡುವುದಾದರೂ ಹೇಗೆ? ಸತ್ತವರ ಕಥೆ ಒಂದಾದರೆ, ಯುದ್ಧದಲ್ಲಿ ಕೈ ಕಾಲು ಕಳೆದುಕೊಂಡು ಅಥವಾ ಗಾಯಾಳುವಾಗಿ ಉಳಿದವರ ಕಥೆಯನ್ನು ಏನೆಂದು ಹೇಳುವುದು. ಯುದ್ಧ ಪ್ರಾರಂಭಿಸಲು ಕ್ಷಣ ಸಾಕು. ಅದರಿಂದ ಆಗುವ ಘನಘೋರ ಪರಿಣಾಮಗಳನ್ನು ತಡೆಯುವುದು ಹೇಗೆ?
ಯುದ್ಧದ ನೇರ ಪರಿಣಾಮದ ಜೊತೆಗೆ ಹತ್ತಾರು ಉಪಪರಿಣಾಮಗಳು ಉಂಟಾಗುತ್ತವೆ: ಯುದ್ಧದ ಸಮಯದಲ್ಲಿ ನಮ್ಮ ಉತ್ಪತ್ತಿ ಮೊದಲಿನಂತಿರಲು ಸಾಧ್ಯವಿಲ್ಲ. ಸಪ್ಪ್ಲೈ ಚೈನ್ ಕುಸಿತ ಸಹಜವಾಗೇ ಉಂಟಾಗುತ್ತದೆ. ಇದರಿಂದ ನಾವು ಬಯಸಿದ ಉತ್ಪನ್ನಗಳ ತಯಾರಿಕೆಯಲ್ಲಿ ಕುಸಿತ ಉಂಟಾಗುತ್ತದೆ. ಸಮಾಜದಲ್ಲಿ ಬೇಡಿಕೆ ಹೆಚ್ಚಾಗುತ್ತದೆ. ಆದರೆ ಪೂರೈಕೆ ಕಡಿಮೆಯಾಗುತ್ತದೆ. ಹೀಗಾಗಿ ಬೆಲೆಗಳು ಏರಿಕೆಯಾಗಲು ಶುರುವಾಗುತ್ತದೆ. ಕೆಲಸ ಮತ್ತು ಗಳಿಕೆಯಲ್ಲಿ ಕುಸಿತವಾಗುತ್ತದೆ. ಗಮನಿಸಿ ಆದಾಯ ಕಡಿಮೆಯಾಗುತ್ತದೆ ಅದೇ ಸಮಯದಲ್ಲಿ ಖರ್ಚು ದುಪ್ಪಟಾಗುತ್ತದೆ. ಹೀಗಾಗಿ ಸಮಾಜದಲ್ಲಿ ಸಮತೋಲನ ಕೆಡುತ್ತದೆ. ಇದು ನಿಧಾನವಾಗಿ ಆಂತರಿಕ ಯುದ್ಧ, ಏರುಪೇರುಗಳಿಗೂ ಕಾರಣವಾಗುತ್ತದೆ.
ಸಮಾಜದಲ್ಲಿನ ಸಿರಿವಂತರು , ಬುದ್ದಿವಂತರು ಬೇರೆ ಕಡೆಗೆ ವಲಸೆ ಹೋಗುತ್ತಾರೆ: ಯುದ್ಧ ಬಹಳಷ್ಟು ಸಮಯ ಮುಂದುವರಿದರೆ, ಸಮಾಜದಲ್ಲಿನ ಸ್ಥಿತಿವಂತರು ಮತ್ತು ಬುದ್ದಿವಂತರು ಬೇರೆ ಕಡೆಗೆ ಕೆಲಸ ಮತ್ತು ಬದುಕು ಹುಡುಕಿಕೊಂಡು ಹೋಗುತ್ತಾರೆ. ಇದರಿಂದ ಸಮಾಜಕ್ಕೆ ತುಂಬಲಾಗದ ನಷ್ಟ ಉಂಟಾಗುತ್ತದೆ. ಗಮನಿಸಿ ಒಬ್ಬ ಉತ್ತಮ ವೈದ್ಯ, ವಿಜ್ಞಾನಿ ಅಥವಾ ಶಿಕ್ಷಕನನ್ನು ತಯಾರಿಸಲು ಕೆಲವೊಮ್ಮೆ 50 ರಿಂದ 100 ವರ್ಷ ತಗಲುತ್ತದೆ. ಹೀಗಿದ್ದೂ ಅದೇ ಗುಣಮಟ್ಟದ ಪ್ರೊಫೆಷನಲ್ ತಯಾರು ಮಾಡಲು ಸಾಧ್ಯವಾಗುತ್ತದೆ ಎಂದು ನಿಖರವಾಗಿ ಹೇಳಲಾಗುವುದಿಲ್ಲ. ಮತ್ತೆ ಯುದ್ಧಕ್ಕೆ ಮುಂಚಿನ ಸಮಾಜ ಕಟ್ಟಲು ಸಾವಿರಾರು ಕೋಟಿ ಹಣ ಖರ್ಚಾಗುತ್ತದೆ.
ದೀರ್ಘಾವಧಿ ಪರಿಣಾಮಗಳು: ಯುದ್ಧದ ಪರಿಣಾಮ ಒಂದು ದಿನ, ತಿಂಗಳು ಮತ್ತು ವರ್ಷಕ್ಕೆ ಸೀಮಿತವಲ್ಲ. ಯುದ್ಧದ ಭೀಕರತೆ ಮೇಲೆ ಅದು ಕೆಲವೊಮ್ಮೆ ಒಂದೆರೆಡು ತಲೆಮಾರುಗಳನ್ನು ಕೂಡ ಕಾಡುತ್ತದೆ. ಇದರ ಜೊತೆಗೆ ರಿಕವರಿ ಗೆ ತಗಲುವ ಸಮಯವನ್ನು ನಾವು ಇಷ್ಟೇ ಎಂದು ಖಂಡಿತ ಹೇಳಾಗುವುದಿಲ್ಲ. ಎರಡನೇ ಮಹಾಯುದ್ಧದ ಸಮಯದಲ್ಲಿ ಅಣುಬಾಂಬಿಗೆ ತುತ್ತಾದ ಜಪಾನ್ ಮತ್ತೆ ಹಿರೋಷಿಮಾದಲ್ಲಿ ಬದುಕು ಕಟ್ಟಿಕೊಳ್ಳಲು ಎರಡೂವರೆಯಿಂದ ಮೂರು ದಶಕ ಬೇಕಾಯ್ತು. ಅದೂ ಕೂಡ ಜಪಾನಿಗರು ಎಲ್ಲವನ್ನೂ ಮರೆತು ಪೂರ್ಣಪ್ರಮಾಣವಾಗಿ ದೇಶ ಕಟ್ಟಲು ಒಂದಾಗಿ ನಿಂತದ್ದಕ್ಕೆ, ಇಲ್ಲವಾದಲ್ಲಿ ರಿಕವರಿಗೆ ೫೦ ವರ್ಷ ಬೇಕಾಗುತ್ತಿತ್ತು.
ಪಾಕಿಸ್ತಾನ ಅಣು ದಾಳಿ ಮಾಡುತ್ತಾ?
ಪಾಕಿಸ್ತಾನ ತನ್ನ ಬಳಿಯೂ ಅಣು ಬಾಂಬ್ ಇದೆ. ಭಾರತವೇನಾದರೂ ಯುದ್ಧಕ್ಕೆ ಬಂದರೆ ನಾವು ದನ್ನು ಪ್ರಯೋಗಿಸಲು ಹಿಜರಿಯುವುದಿಲ್ಲ ಎನ್ನುವ ಮಾತನ್ನು ಆಡುತ್ತಿದೆ. ಆಗೊಮ್ಮೆ ಪೂರ್ಣ ಪ್ರಮಾಣದ ಯುದ್ಧವೇನಾದರೂ ಆದರೆ ಅದು ಖಂಡಿತ ಮೂರನೇ ಮಹಾಯುದ್ಧಕ್ಕೆ ತಿರುಗುತ್ತದೆ. ಅಮೇರಿಕಾ, ರಷ್ಯಾ, ಇಸ್ರೇಲ್ ನಂತಹ ದೇಶಗಳು, ಯೂರೋಪಿಯನ್ ಒಕ್ಕೊಟ ಭಾರತ ಪರವಾಗಿ ನಿಲ್ಲುತ್ತವೆ. ಅತ್ತ ಚೀನಾ , ಒಳಗೊಂಡಂತೆ ಟರ್ಕಿ ಇನ್ನಿತರ ಮುಸ್ಲಿಂ ದೇಶಗಳು ಪಾಕಿಸ್ತಾನದ ಜೊತೆಗೆ ನಿಲ್ಲುತ್ತವೆ. ಸೌದಿ ಮತ್ತು ಕೊಲ್ಲಿ ದೇಶಗಳು ಎತ್ತ ಬೇಕಾದರೂ ವಾಲಬಹುದು. ಇವತ್ತಿನ ದಿನದಲ್ಲಿ ಸೌದಿ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಭಾರತದ ಪರವಾಗಿ ನಿಲ್ಲುವ ಸಾಧ್ಯತೆ ಹೆಚ್ಚು. ಉಳಿದಂತೆ ಪಾಕಿಸ್ತಾನಕ್ಕೆ ಅಣು ಬಾಂಬು ಹಾಕುವ ಧೈರ್ಯ ಮತ್ತು ಚೈತನ್ಯ ಎರಡೂ ಇಲ್ಲ.
ಕೊನೆಮಾತು: ಯುದ್ಧ ಎನ್ನುವುದು ನಮ್ಮ ಕೊನೆಯ ಅಸ್ತ್ರವಾಗಬೇಕು. ಇದದರ್ಥ ಯುದ್ಧ ಮಾಡಬಾರದು ಎಂದಲ್ಲ. ಪಾಕಿಸ್ತಾನವನ್ನು ನೇರ ಯುದ್ಧವಿಲ್ಲದೆ ಛಿದ್ರಗೊಳಿಸವ ಶಕ್ತಿ ಭಾರತಕ್ಕಿದೆ. ಅದನ್ನು ಉಪಯೋಗಿಸುವುದು ಉತ್ತಮ ಮಾರ್ಗ. ಉಳಿದಂತೆ ಯುದ್ಧಕ್ಕೆ ಪರ್ಯಾಯವಿಲ್ಲ ಎಂದಾದರೆ ಯುದ್ಧವೇ ಸರಿ. ಆದರೆ ಯುದ್ಧವಾದರೆ ಏನಾಗಬಹುದು ಎನ್ನುವುದಕ್ಕೆ ಕೆಲವು ಉದಾಹರಣೆಗಳನ್ನು ಮೇಲಿನ ಸಾಲಿನಲ್ಲಿ ಹೇಳುವ ಪ್ರಯತ್ನ ಮಾಡಿದ್ದೇನೆ. ಯುದ್ಧ ಎಂದರೆ ನೋವು, ಸಾವು, ಸಾವಿರಾರು ಕೋಟಿ ಹಣದ ನಷ್ಟ, ಎರಡರಿಂದ ಮೂರು ದಶಕ ಸಮಯ ನಷ್ಟ. ಇಷ್ಟೆಲ್ಲಾ ಅದ ಮೇಲೂ ಫಲಿತಾಂಶ ನಾವು ಬಯಸಿದ್ದೆ ಸಿಗುತ್ತದೆ ಎನ್ನುವಂತಿಲ್ಲ. ಇಡೀ ಜಗತ್ತು ಸಂಕಷ್ಟಕ್ಕೆ ಸಿಲುಕುತ್ತದೆ. ಹೀಗಾಗಿ ಪಾಕಿಸ್ತಾನಕ್ಕೆ ಅದರದೇ ಭಾಷೆಯಲ್ಲಿ ಉತ್ತರಿಸಬೇಕು. ಗೆದ್ದಲು ಇಡೀ ಮರವನ್ನೇ ನಿಶಕ್ತ ಮಾಡುವಂತೆ ನೇರ ಯುದ್ಧದ ಬದಲಿಗೆ ಅವರನ್ನು ನಿಧಾನವಾಗಿ ಮಟ್ಟಹಾಕಬೇಕು. ಆ ಶಕ್ತಿ, ಯುಕ್ತಿ ಎರಡೂ ಇಂದಿನ ಕೇಂದ್ರ ಸರಕಾರದ ಬಳಿ ಇದೆ. ನಾವು ಜನ ಸಾಮಾನ್ಯರು ಮತ್ತು ಮಾಧ್ಯಮಗಳು ಯುದ್ಧ ಮಂತ್ರ ಪಠಿಸುವುದು ನಿಲ್ಲಿಸುವುದು ನಾವು ನಮಗೆ ಮಾಡಿಕೊಳ್ಳುವ ಮಹದುಪಕಾರ.
Advertisement