

ಫೆಬ್ರವರಿ 14ರಂದು ಪ್ರಧಾನಿ ನರೇಂದ್ರ ಮೋದಿಯವರ ವಿಮಾನ ಅಸ್ಸಾಮಿನ ಮೊರಾನ್ ಪ್ರದೇಶದಲ್ಲಿರುವ ವಿಶೇಷ ಹೆದ್ದಾರಿಯೊಂದರ ಮೇಲೆ ಇಳಿಯಿತು. ಹಾಗೆಂದು ಇದೊಂದು ಮಾಮೂಲಿ ಹೆದ್ದಾರಿಯಲ್ಲ. ಈ ಹೆದ್ದಾರಿಯನ್ನು ವಿಶೇಷವಾಗಿ ಯುದ್ಧ ವಿಮಾನಗಳು ಮತ್ತು ಮಿಲಿಟರಿ ವಿಮಾನಗಳನ್ನು ಇಳಿಸುವ ಸಲುವಾಗಿಯೇ ನಿರ್ಮಿಸಲಾಗಿದೆ. ಇದು ಒಂದು ರೀತಿ ಅಸಹಜವಾಗಿ ಕಾಣುತ್ತದಲ್ಲವೇ? ಈ ಹೆದ್ದಾರಿಯಲ್ಲಿ ನಿಜಕ್ಕೂ ನಡೆದ ಕಾರ್ಯಾಚರಣೆ ಏನು? ನಮ್ಮ ದೇಶದ ಭದ್ರತೆಗೆ ಮತ್ತು ನಮ್ಮಂತಹ ಜನಸಾಮಾನ್ಯರಿಗೆ ಈ ರಸ್ತೆ ಏಕೆ ಅತ್ಯಂತ ಮುಖ್ಯ ಎನ್ನುವುದನ್ನು ಗಮನಿಸೋಣ.
ಪ್ರಧಾನಿ ನರೇಂದ್ರ ಮೋದಿಯವರು ಸಿ-130ಜೆ ಸೂಪರ್ ಹರ್ಕ್ಯುಲಸ್ ಎನ್ನುವ ವಿಶೇಷ ಮಿಲಿಟರಿ ವಿಮಾನದಲ್ಲಿ ಅಸ್ಸಾಂಗೆ ಆಗಮಿಸಿದ್ದರು. ಆದರೆ, ಒಂದು ವಿಮಾನ ನಿಲ್ದಾಣದಲ್ಲಿ ಇಳಿಯುವ ಬದಲು, ಮೋದಿಯವರಿದ್ದ ವಿಮಾನ ಮೊರಾನ್ ಬಳಿಯ ರಾಷ್ಟ್ರೀಯ ಹೆದ್ದಾರಿ 37ರ 4.2 ಕಿಲೋಮೀಟರ್ ಉದ್ದನೆಯ ರಸ್ತೆಯಲ್ಲಿ ಇಳಿಯಿತು. ಈ ಹೆದ್ದಾರಿ ಚೀನಾದ ಜೊತೆಗಿನ ಗಡಿಗೆ ಬಹಳ ಸನಿಹದಲ್ಲಿದ್ದು, ಭಾರತ ಮತ್ತು ಚೀನಾಗಳ ನಡುವಿನ ಗಡಿ ರೇಖೆಯಂತಿರುವ ಲೈನ್ ಆಫ್ ಆ್ಯಕ್ಚುವಲ್ ಕಂಟ್ರೋಲ್ನಿಂದ ಕೆಲವು ನೂರು ಕಿಲೋಮೀಟರ್ಗಳಷ್ಟು ಮಾತ್ರವೇ ದೂರದಲ್ಲಿದೆ.
ಹಾಗೆಂದು ಇದು ಯಾವುದೋ ಮಾಮೂಲಿ ಹೆದ್ದಾರಿಯಲ್ಲ. ನಮ್ಮ ಹೆದ್ದಾರಿಗಳನ್ನು ನಿರ್ಮಿಸುವ ಜವಾಬ್ದಾರಿ ಹೊಂದಿರುವ ನ್ಯಾಷನಲ್ ಹೈವೇಸ್ ಆ್ಯಂಡ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಕಾರ್ಪೋರೇಷನ್ ಲಿಮಿಟೆಡ್ ಭಾರತೀಯ ವಾಯು ಸೇನೆಯೊಡನೆ ಕಾರ್ಯಾಚರಿಸಿ, ಈ ಸರಳವಾದ ರಸ್ತೆಯನ್ನು ಎಮರ್ಜೆನ್ಸಿ ಲ್ಯಾಂಡಿಂಗ್ ಫೆಸಿಲಿಟಿ ಅಥವಾ ಇಎಲ್ಎಫ್ ಎನ್ನುವ ವಿಶೇಷ ರಸ್ತೆಯನ್ನಾಗಿಸಿತು. ಇದು ಈಶಾನ್ಯ ಭಾರತದಲ್ಲಿರುವ ಇಂತಹ ಮೊದಲ ವ್ಯವಸ್ಥೆಯಾಗಿದೆ. ಈ ಅಧಿಕೃತ ಲ್ಯಾಂಡಿಂಗ್ ಪ್ರಕ್ರಿಯೆಗೂ ಮುನ್ನ, ರಫೇಲ್, ಸುಖೋಯಿ, ಮತ್ತು ತೇಜಸ್ನಂತಹ ಯುದ್ಧ ವಿಮಾನಗಳು ಈಗಾಗಲೇ ಈ ಹೆದ್ದಾರಿಯಲ್ಲಿ ಲ್ಯಾಂಡಿಂಗ್ ನಡೆಸುವ ಅಭ್ಯಾಸ ಕೈಗೊಂಡು, ಎಲ್ಲವೂ ಸುಗಮವಾಗಿ ಕಾರ್ಯಾಚರಿಸುವುದನ್ನು ಖಾತ್ರಿಪಡಿಸಿದ್ದವು.
ಈ ಕಾಮಗಾರಿಯನ್ನು ವಿಶೇಷ ಇಂಜಿನಿಯರಿಂಗ್ ತಂತ್ರಜ್ಞಾನವನ್ನು ಬಳಸಿ ನಡೆಸಲಾಗಿದೆ. ಈ ರಸ್ತೆಯ ಮೇಲ್ಮೈಯನ್ನು ಅತ್ಯಂತ ಶಕ್ತಿಶಾಲಿಯಾಗಿ ನಿರ್ಮಿಸಲಾಗಿದ್ದು, ಇದು ಅತ್ಯಂತ ಭಾರದ ಮಿಲಿಟರಿ ವಿಮಾನಗಳ ತೂಕವನ್ನೂ ತಾಳಬಲ್ಲದು. ಈ ಸಂಪೂರ್ಣ ಕಾಮಗಾರಿಗೆ 100 ಕೋಟಿ ರೂಪಾಯಿ ವೆಚ್ಚವಾಗಿದ್ದು, ಇದು ನಿಜಕ್ಕೂ ದೊಡ್ಡ ಹೂಡಿಕೆಯೇ ಹೌದು. ಈ ರನ್ವೇ 40 ಟನ್ ತೂಕದ ತನಕದ ಯುದ್ಧ ವಿಮಾನಗಳು ಮತ್ತು 74 ಟನ್ಗಳಷ್ಟು ತೂಕದ ಸಾಗಾಣಿಕಾ ವಿಮಾನಗಳನ್ನು ಬೆಂಬಲಿಸಬಲ್ಲದು. ಸರಳವಾಗಿ ಹೇಳುವುದಾದರೆ, ಬಹುತೇಕ ಕಾರ್ಗಳು ತಲಾ 1.5 ಟನ್ ಆಸುಪಾಸಿನ ತೂಕ ಹೊಂದಿರುತ್ತವೆ. ಇದಕ್ಕೆ ಹೋಲಿಸಿದರೆ, ಈ ಮಿಲಿಟರಿ ವಿಮಾನಗಳು ಎಷ್ಟು ತೂಕ ಇರಬಹುದು ಎನ್ನುವುದು ನಿಮಗೇ ಅರಿವಾಗುತ್ತದೆ.
ಅತ್ಯಂತ ಮುಖ್ಯವಾದ ವಿಚಾರವೆಂದರೆ, ಈ ತುರ್ತು ರನ್ವೇಯನ್ನು ಕ್ಷಿಪ್ರವಾಗಿ ನಾಗರಿಕ ಮತ್ತು ಮಿಲಿಟರಿ ಬಳಕೆಗಳೆರಡಕ್ಕೂ ಉಪಯೋಗಿಸಬಹುದು. ಶಾಂತಿಯ ಸಮಯದಲ್ಲಿ, ಇದೊಂದು ಸಾಮಾನ್ಯ ಹೆದ್ದಾರಿಯಾಗಿ ಬಳಕೆಯಾಗಲಿದ್ದು, ನಾಗರಿಕರು ಮತ್ತು ವಾಹನಗಳು ಸಂಚರಿಸಬಹುದು. ಆದರೆ, ತುರ್ತು ಸಂದರ್ಭಗಳು ಎದುರಾದಾಗ, ಕೆಲವೇ ಗಂಟೆಗಳ ಒಳಗಾಗಿ ಇದನ್ನು ಒಂದು ಮಿಲಿಟರಿ ರನ್ವೇ ಆಗಿ ಪರಿವರ್ತಿಸಬಹುದು.
ನಾವು ಪ್ರಾಯೋಗಿಕವಾಗಿ ಆಲೋಚಿಸೋಣ. ತುರ್ತು ಸಂದರ್ಭ ಎದುರಾದಾಗ, ನಮ್ಮ ಪ್ರಮುಖ ವಿಮಾನ ನಿಲ್ದಾಣಗಳು ಹಾನಿಗೊಳಗಾಗುವುದು, ಅಥವಾ ಅತಿಯಾಗಿ ದಟ್ಟಣೆ ಎದುರಿಸುವುದನ್ನು ಊಹಿಸಿಕೊಳ್ಳಿ. ಆಗ ನಮಗೆ ಹೆಚ್ಚುವರಿ ಆಯ್ಕೆಗಳ ಅಗತ್ಯವಿರುತ್ತದೆ. ಈ ರಾಷ್ಟ್ರೀಯ ಹೆದ್ದಾರಿಯೇ ರನ್ವೇ ನಮಗೆ ಅಂತಹದ್ದೇ ಆಯ್ಕೆಯನ್ನು ಒದಗಿಸುತ್ತದೆ. ಚೀನಾ ಇಲ್ಲಿಂದ ಕೇವಲ 300 ಕಿಲೋಮೀಟರ್ ದೂರದಲ್ಲಿ ಮತ್ತು ಮಯನ್ಮಾರ್ ಕೇವಲ 200 ಕಿಲೋಮೀಟರ್ ದೂರದಲ್ಲಿ ಇರುವುದರಿಂದ, ಈ ರಸ್ತೆಯ ತಾಣ ಕಾರ್ಯತಂತ್ರದ ದೃಷ್ಟಿಯಿಂದ ಬಹಳ ಮಹತ್ವದ್ದಾಗಿದೆ. ಅಂದರೆ, ನಮ್ಮ ಮಿಲಿಟರಿ ಕ್ಷಿಪ್ರವಾಗಿ ಯುದ್ಧ ವಿಮಾನಗಳು ಮತ್ತು ಸಾಗಾಣಿಕಾ ವಿಮಾನಗಳನ್ನು ಅವಶ್ಯಕತೆ ಎದುರಾದಾಗ ಗಡಿ ಪ್ರದೇಶಗಳಿಗೆ ಕಳುಹಿಸಬಹುದು.
1962ರಲ್ಲಿ ಚೀನಾ ವಿರುದ್ಧದ ಯುದ್ಧದ ಸಂದರ್ಭದಲ್ಲಿ, ಅಸ್ಸಾಂ ಪ್ರದೇಶದ ರಸ್ತೆಗಳು ಕೆಟ್ಟ ಸ್ಥಿತಿಯಲ್ಲಿದ್ದು, ವಾಯು ಬೆಂಬಲ ತೀರಾ ಸೀಮಿತವಾಗಿದ್ದರಿಂದ ಭಾರತ ಸಾಕಷ್ಟು ಗಂಭೀರ ಸಮಸ್ಯೆಗಳನ್ನು ಎದುರಿಸುವಂತಾಯಿತು. ಇಂತಹ ಇತಿಹಾಸಗಳು ಮತ್ತೆ ಮರುಕಳಿಸಬಾರದು. ಈ ತುರ್ತು ರನ್ವೇ ಇಂತಹ ಸಮಸ್ಯೆಗಳನ್ನೇ ನಿವಾರಿಸುತ್ತಿದೆ. ಒಂದು ವೇಳೆ ಯುದ್ಧ ಏನಾದರೂ ತಲೆದೋರಿದರೆ, ನಮ್ಮ ಯುದ್ಧ ವಿಮಾನಗಳು ಕೇವಲ ಮುಖ್ಯ ವಾಯುನೆಲೆಯ ಮೇಲೆ ಮಾತ್ರವೇ ಅವಲಂಬಿತವಾಗಿರದೆ, ಹಲವಾರು ತಾಣಗಳಿಂದ ಕಾರ್ಯಾಚರಿಸಬಹುದು. ಯಾವ ಶತ್ರುವಿಗೂ ಏಕಕಾಲದಲ್ಲಿ ನಮ್ಮ ಎಲ್ಲ ವಾಯು ನೆಲೆಗಳನ್ನು ನಾಶಪಡಿಸಲು ಸಾಧ್ಯವಿಲ್ಲದ್ದರಿಂದ, ಇದು ನಮ್ಮ ವಾಯು ಸೇನೆಯನ್ನು ಸುರಕ್ಷಿತವಾಗಿಡಲಿದೆ.
ಈ ತುರ್ತು ವ್ಯವಸ್ಥೆ ಕೇವಲ ಯುದ್ಧ ಪರಿಸ್ಥಿತಿಗಳಿಗೆ ಮಾತ್ರವೇ ಸೀಮಿತವಾಗಿಲ್ಲ. ಪ್ರವಾಹ, ಭೂಕಂಪದಂತಹ ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ, ವೈದ್ಯಕೀಯ ಪೂರೈಕೆ ನಡೆಸಲು, ಪರಿಹಾರ ಸಾಮಗ್ರಿಗಳನ್ನು ಒದಗಿಸಲು, ಮತ್ತು ಪರಿಹಾರ ತಂಡಗಳು ತಕ್ಷಣವೇ ತಲುಪಲು ಇದು ಪೂರಕವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಈಶಾನ್ಯ ಭಾರತದಲ್ಲಿ ಸಾಕಷ್ಟು ಪ್ರವಾಹ ಪರಿಸ್ಥಿತಿಗಳು ಉಂಟಾಗಿರುವುದನ್ನು ನಾವು ಗಮನಿಸಿದ್ದೇವೆ. ಈ ವ್ಯವಸ್ಥೆಯನ್ನು ಬಳಸಿಕೊಂಡು, ಪರಿಹಾರ ಮತ್ತು ನೆರವು ಎಷ್ಟು ಕ್ಷಿಪ್ರವಾಗಿ ತಲುಪಬಹುದು ಎನ್ನುವುದನ್ನು ಒಮ್ಮೆ ಊಹಿಸಿಕೊಳ್ಳಿ. ಅಪಾಯಕರ ಸ್ಥಳದಿಂದ ಜನರನ್ನು ಸ್ಥಳಾಂತರಿಸುವುದು ಇದರಿಂದಾಗಿ ಇನ್ನಷ್ಟು ಸುಲಭ ಮತ್ತು ವೇಗವಾಗಲಿದೆ. ಇಂತಹ ಮೂಲಭೂತ ವ್ಯವಸ್ಥೆಗಳಿಂದ ಜನಸಾಮಾನ್ಯರಿಗೆ ನೇರವಾಗಿಯೇ ಪ್ರಯೋಜನ ಲಭಿಸಲಿದೆ.
ಈ ರಸ್ತೆ ಕೇವಲ ಮಿಲಿಟರಿ ಮತ್ತು ಸರ್ಕಾರಕ್ಕೆ ಸಂಬಂಧಿಸಿದ ವ್ಯವಸ್ಥೆ ಎಂದು ನೀವು ಆಲೋಚಿಸಬಹುದು. ಆದರೆ, ಇದು ನಮ್ಮೆಲ್ಲರ ಸುರಕ್ಷತೆ ಮತ್ತು ಭದ್ರತೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಈ ಬೆಳವಣಿಗೆ, ಭಾರತ ತನ್ನ ಮುಂದಿನ ಸವಾಲುಗಳಿಗೆ ಸಿದ್ಧತೆ ನಡೆಸುತ್ತಾ, ದೂರದೃಷ್ಟಿಯಿಂದ ಆಲೋಚಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಇಂತಹ ಯೋಜನೆಗಳ ನಿರ್ಮಾಣ ಮತ್ತು ನಿರ್ವಹಣೆಗಾಗಿ ಸಾಕಷ್ಟು ಹೊಸ ಉದ್ಯೋಗಗಳೂ ಸೃಷ್ಟಿಯಾಗುತ್ತವೆ. ಮೂಲಭೂತ ಸೌಕರ್ಯ ಅಭಿವೃದ್ಧಿ ಈ ಪ್ರದೇಶದ ಸಂಪರ್ಕಕ್ಕೆ ನೆರವಾಗುತ್ತಿದ್ದು, ಉತ್ತಮ ರಸ್ತೆಗಳು, ಉತ್ತಮ ಸಾಗಾಣಿಕೆ, ಮತ್ತು ಎಲ್ಲರಿಗೂ ಉತ್ತಮ ಸಂಪರ್ಕ ಲಭಿಸುತ್ತದೆ.
2020ರ ಗಲ್ವಾನ್ ಕಣಿವೆಯ ಚಕಮಕಿಯ ಬಳಿಕ, ಭಾರತ ಮತ್ತು ಚೀನಾಗಳ ನಡುವಿನ ಉದ್ವಿಗ್ನತೆ ಬಹಳ ತೀಕ್ಷ್ಣವಾಗಿ ಮುಂದುವರಿದಿದೆ. ಚೀನಾ ನಮ್ಮ ಗಡಿಯ ಬಳಿ ಬಹಳಷ್ಟು ವಾಯು ನೆಲೆಗಳನ್ನು ಸ್ಥಾಪಿಸಿದೆ. ಆದ್ದರಿಂದ ಭಾರತವೂ ತನ್ನ ರಕ್ಷಣಾ ಸಾಮರ್ಥ್ಯವನ್ನು ವೃದ್ಧಿಸುವ ಅನಿವಾರ್ಯತೆ ಹೊಂದಿದೆ. ಇಂತಹ ಸಾಕಷ್ಟು ವ್ಯವಸ್ಥೆಗಳನ್ನು ಈಗಾಗಲೇ ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಇತರ ಪ್ರದೇಶಗಳಲ್ಲಿ ನಿರ್ಮಿಸಲಾಗಿದೆ.
ಅಸ್ಸಾಮಿನ ಈ ಹೈವೇ ರನ್ವೇ ಸದಾ ಸಿದ್ಧವಾಗಿರುವ ಮತ್ತು ಬಲವಾಗಿರುವ ಭಾರತದ ಬದ್ಧತೆಯನ್ನು ಪ್ರತಿನಿಧಿಸುತ್ತಿದೆ. ಇದು ಒಂದು ಚಕಮಕಿಯನ್ನು ಆರಂಭಿಸುವುದಕ್ಕೆ ಇರುವ ವ್ಯವಸ್ಥೆಯಲ್ಲ. ಬದಲಿಗೆ, ನಮ್ಮ ದೇಶವನ್ನು ಮತ್ತು ನಮ್ಮ ಜನರನ್ನು ರಕ್ಷಿಸಲು ಮಾಡಿಕೊಂಡಿರುವ ವ್ಯವಸ್ಥೆಯಾಗಿದೆ. ನಮ್ಮ ಹೆದ್ದಾರಿಗಳ ಮೇಲೆ ಯುದ್ಧ ವಿಮಾನಗಳು ಲ್ಯಾಂಡಿಂಗ್ ನಡೆಸುವಾಗ, ಅದು ನಮ್ಮ ದೇಶ ನಿರಂತರವಾಗಿ ತನ್ನ ಸುರಕ್ಷತೆ ಮತ್ತು ಅಭಿವೃದ್ಧಿಗಾಗಿ ಕಾರ್ಯಾಚರಿಸುವುದನ್ನು ತೋರುತ್ತದೆ. ಇದು ಆಧುನಿಕ ಭಾರತದವಾಗಿದ್ದು, ಈಗಾಗಲೇ ಇರುವ ಮೂಲಭೂತ ಸೌಕರ್ಯಗಳನ್ನು ಸ್ಮಾರ್ಟ್ ಆಗಿ, ಹಲವು ಉದ್ದೇಶಗಳಿಗಾಗಿ ಬಳಸಿಕೊಳ್ಳುತ್ತಿದೆ. ಅಸ್ಸಾಮಿನ ಸ್ಥಳೀಯ ಜನರು "ನಾವು ಎಂದಿಗೂ ನಮ್ಮ ಹೆದ್ದಾರಿಗಳಲ್ಲಿ ಯುದ್ಧ ವಿಮಾನಗಳು ಲ್ಯಾಂಡಿಂಗ್ ನಡೆಸಬಹುದು ಎನ್ನುವುದನ್ನು ಕಲ್ಪಿಸಿಯೇ ಇರಲಿಲ್ಲ. ಈಗ ನಮಗೆ ಈ ಸಾಧನೆ ಅಪಾರ ಹೆಮ್ಮೆ ತಂದಿದೆ" ಎನ್ನುತ್ತಿದ್ದಾರೆ. ಇದು ನಮ್ಮ ದೇಶ ಭವಿಷ್ಯಕ್ಕೆ ಸಿದ್ಧವಾಗಿದೆ ಎನ್ನುವ ಭರವಸೆಯಿಂದ ಬರುವ ಹೆಮ್ಮೆಯಾಗಿದೆ.
(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)
Advertisement