ಮೀರ್ ಪುರ: ಮೀರ್ ಪುರದಲ್ಲಿ ಭಾನುವಾರ ನಡೆದ ಏಷ್ಯಾಕಪ್ ಟಿ20 ಫೈನಲ್ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶದ ವಿರುದ್ಧ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿ, 2016ನೇ ಸಾಲಿನ ಏಷ್ಯಾಕಪ್ ಚಾಂಪಿಯನ್ ಟ್ರೋಫಿ ಯನ್ನು ಎತ್ತಿ ಹಿಡಿದಿದೆ.
ಮಳೆಯಿಂದಾಗಿ 15 ಓವರ್ ಗಳಿಗೆ ಸಮೀತವಾದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡ ನಿಗದಿತ 15 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 120 ರನ್ ಪೇರಿಸಿ ಭಾರತಕ್ಕೆ ಗೆಲ್ಲಲು 121 ರನ್ ಗಳ ಸವಾಲು ನೀಡಿತು. ಈ ಸವಾಲನ್ನು ಬೆನ್ನು ಹತ್ತಿದ ಭಾರತ ತಂಡ ಕೇವಲ 5 ರನ್ ಗಳಿಸುವಷ್ಟರಲ್ಲಿ ಆರಂಭಿಕ ಆಟಗಾರ ರೋಹಿತ್ ಶರ್ಮಾ ಅವರ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ಆ ಬಳಿಕ ಶಿಖರ್ ಧವನ್ ಜೊತೆಗೂಡಿದ ವಿರಾಟ್ ಕೊಹ್ಲಿ ಭಾರತವನ್ನು ಗೆಲುವಿನತ್ತ ಕೊಂಡೊಯ್ದರು. ಭರ್ಜರಿಯಾಗಿ ಬ್ಯಾಟ್ ಮಾಡಿದ ಈ ಜೋಡಿ ಭರ್ಜರಿ 94 ರನ್ ಗಳ ಜೊತೆಯಾಟ ಆಡಿತು. ಅಲ್ಲದೆ ಇದರ ನಡುವೆಯೇ ಶಿಖರ್ ಧವನ್ ಆಕರ್ಷಕ ಅರ್ಧ ಶತಕ ಸಿಡಿಸಿದರು. ಆ ಮೂಲಕ ಕಳಪೆ ಫಾರ್ಮ್ ನಿಂದ ಬಳಲುತ್ತಿದ್ದ ಧವನ್ ಭರ್ಜರಿ ಫಾರ್ಮ್ ಕಂಡುಕೊಂಡರು. ಒಟ್ಟು 44 ಎಸೆತ ಎದುರಿಸಿದ ಧವನ್ 60 ರನ್ ಗಳಿಸಿ ಇನ್ನೇನು ಭಾರತ ಗೆದ್ದೇ ಬಿಟ್ಟಿತು ಎನ್ನುವ ಹಂತದಲ್ಲಿ ಟಸ್ಕಿನ್ ಅಹ್ಮದ್ ಅವರಿಗೆ ವಿಕೆಟ್ ಒಪ್ಪಿಸಿದರು.
ಬಳಿಕ ಬಂದ ನಾಯಕ ಮಹೇಂದ್ರ ಸಿಂಗ್ ಧೋನಿ ಬಿರುಸಿನ ಆಟಕ್ಕೆ ಮುಂದಾಗಿ ಗೆಲುವಿನ ಔಪಚಾರಿಕತೆಯನ್ನು ಪೂರ್ಣಗೊಳಿಸಿದರು. ಪಂದ್ಯದ ಪ್ರಮುಖ ಅಂಶವೆಂದರೆ ಕಳೆದ ಹತ್ತಾರು ಪಂದ್ಯಗಳಲ್ಲಿ ನಾಪತ್ತೆಯಾಗಿದ್ದ ಧೋನಿ ಶೈಲಿ ಸಿಕ್ಸರ್ ಇಂದು ಬಾಂಗ್ಲಾದೇಶದ ಎದುರು ಮತ್ತೆ ಕಾಣಿಸಿಕೊಂಡಿತು. ತಮ್ಮ ಹಳೆಯ ಶೈಲಿಗೆ ಮರಳಿದವರಂತೆ ಕಂಡ ಧೋನಿ ಭರ್ಜರಿ 2 ಸಿಕ್ಸರ್ ಸಿಡಿಸಿದರು. ಪಂದ್ಯದ ಕೊನೆಯ ರನ್ ಗಳನ್ನು ತಮ್ಮ ಹಳೆಯ ಶೈಲಿಯಂತೆ ಸಿಕ್ಸರ್ ಸಿಡಿಸುವ ಮೂಲಕ ಗಳಿಸಿದ್ದು, ಭಾರತೀಯ ಪ್ರೇಕ್ಷಕರಲ್ಲಿ ಹರ್ಷೋಧ್ಘಾರಕ್ಕೆ ಕಾರಣವಾಯಿತು. ಇನ್ನು ಬಾಂಗ್ಲಾದೇಶಕ್ಕೆ ತವರಿನ ಅಭಿಮಾನಿಗಳ ಅಭೂತಪೂರ್ವ ಬೆಂಬಲವಿತ್ತಾದರೂ ಧವನ್ ಮತ್ತು ಕೊಹ್ಲಿ ಜೋಡಿ ರನ್ ಗಳಿಸುತ್ತಿದ್ದಂತೆಯೇ ಆ ಹರ್ಷೋಧ್ಘಾರ ಕಡಿಮೆಯಾಗುತ್ತಾ ಸಾಗಿತು. ಇನ್ನು ಧವನ್ ಬಳಿಕ ಬಂದ ಧೋನಿ 14ನೇ ಓವರ್ ನಲ್ಲಿ ಸಿಕ್ಸರ್ ಎತ್ತುತ್ತಿದ್ದಂತೆಯೇ ಬಾಂಗ್ಲಾ ಅಭಿಮಾನಿಗಳಲ್ಲಿ ನೀರವ ಮೌನ ಮನೆ ಮಾಡಿತ್ತು.
ಬಾಂಗ್ಲಾದೇಶ ಪರ ಟಸ್ಕಿನ್ ಅಹ್ಮದ್ ಹಾಗೂ ಅಲ್ ಅಮೀನ್ ಹುಸೇನ್ ತಲಾ ಒಂದು ವಿಕೆಟ್ ಪಡೆದರು.
ಇದಕ್ಕೂ ಮೊದಲು ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಬಾಂಗ್ಲಾದೇಶ ನಿಗದಿತ 15 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 120 ರನ್ ಗಳಿಸಿತು. ಆರಂಭಿಕರಾದ ತಮೀಮ್ ಇಕ್ಬಾಲ್ (13) ಮತ್ತು ಸೌಮ್ಯ ಸರ್ಕಾರ್ (14) ಅವರ ವಿಕೆಟ್ ಕೊಂಚ ಬೇಗನೆ ಉರುಳುವುದರೊಂದಿಗೆ ಬಾಂಗ್ಲಾ ಆರಂಭಿಕ ಆಘಾತ ಎದುರಿಸಿತಾದರೂ, ಸಬ್ಬೀರ್ ರೆಹಮಾನ್ (32 ರನ್), ಶಕೀಬ್ ಅಲ್ ಹಸನ್ (21 ರನ್) ಮತ್ತು ಮಹಮದುಲ್ಲಾ (33 ರನ್) ಅವರ ಸಮಯೋಚಿತ ಆಟದ ನೆರವಿನಿಂದ ನಿಗದಿತ 15 ಓವರ್ ಗಳಲ್ಲಿ 120 ರನ್ ಗಳ ಸಾವಾಲಿನ ಮೊತ್ತ ಪೇರಿಸಿತು. ಭಾರತೀಯ ಬೌಲರ್ ಗಳ ಎದುರು ಆರಂಭದಲ್ಲಿ ಕೊಂಚ ತಿಣುಕಾಡಿದ ಬಾಂಗ್ಲಾ ಬ್ಯಾಟ್ಸಮನ್ ಗಳು ಬಳಿಕ ಚೇತರಿಸಿಕೊಂಡು ಕ್ರಮೇಣ ರನ್ ಗತಿ ಏರಿಸಿದರು. ಉಳಿದಂತೆ ತಮೀಮ್ ಇಕ್ಬಾಲ್ 13, ಸೌಮ್ಯ ಸರ್ಕಾರ್ 14 ಮತ್ತು ಮಷ್ಫಿಕರ್ ರೆಹಮಾನ್ 4 ರನ್ ಸೇರಿಸಿದರು. ಇನ್ನು ನಾಯಕ ಮುಷ್ರಫೆ ಮೋರ್ತಾಜಾ ಶೂನ್ಯಕ್ಕೆ ಔಟ್ ಆಗುವ ಮೂಲಕ ಬಾಂಗ್ಲಾ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದರು.
ಶಿಸ್ತಿನ ಬೌಲಿಂಗ್ ಪ್ರದರ್ಶಿಸಿದ ಭಾರತೀಯ ಬೌಲರ್ ಗಳು, ತಮ್ಮ ಸಂಘಟಿತ ಆಟದೊಂದಿಗೆ ಬಾಂಗ್ಲಾ ಬೃಹತ್ ಮೊತ್ತ ಪೇರಿಸದಂತೆ ನೋಡಿಕೊಂಡರು. ಭಾರತದ ಪರ ಆಶೀಶ್ ನೆಹ್ರಾ, ಆರ್ ಅಶ್ವಿನ್, ಬುಮ್ರಾಹ್ ಮತ್ತು ರವೀಂದ್ರ ಜಡೇಜಾ ತಲಾ 1 ವಿಕೆಟ್ ಪಡೆದರು.
Advertisement