ಕೊಲ್ಕತ್ತಾ: ನಾನು ಅತಿಯಾಗಿ ಇಷ್ಟಪಡುವ, ಗೌರವಿಸುವ ಸಚಿನ್ ತೆಂಡೂಲ್ಕರ್ ಅವರ ಮುಂದೆ ಭಾರತವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಿದ್ದೇ ನನ್ನ ವೃತ್ತಿಜೀವನದ ಅತ್ಯಂತ ಸ್ಮರಣೀಯ ಕ್ಷಣವಾಗಿತ್ತು ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ಶನಿವಾರ ಕೊಲ್ಕತ್ತಾದ ಈಡೆನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಟಿ 20 ವಿಶ್ವಕಪ್ ಪಂದ್ಯದಲ್ಲಿ ಸಾಂಪ್ರದಾಯಿಕ ವೈರಿ ಪಾಕಿಸ್ತಾನವನ್ನು ಟೀಂ ಇಂಡಿಯಾ ಪರಾಭವಗೊಳಿಸಿತ್ತು. ಪ್ರಸ್ತುತ ಪಂದ್ಯದಲ್ಲಿ 37 ಎಸೆತಗಳಲ್ಲಿ 55 ರನ್ ಗಳಿಸಿದ ಕೊಹ್ಲಿ ಭಾರತದ ಗೆಲುವಿನ ರೂವಾರಿಯಾಗಿದ್ದರು. ಪಾಕ್ ವಿರುದ್ಧ ಬಾರಿಸಿದ ಅರ್ಧ ಶತಕವನ್ನು ಕ್ರಿಕೆಟ್ ದೇವರಿಗೆ ಸಮರ್ಪಿಸಿ, ಕ್ರಿಕೆಟ್ ಗ್ರೌಂಡ್ನಲ್ಲಿ ನಿಂತು ಶಿರಬಾಗಿ ನಮಿಸಿದ್ದರು. ಅತ್ತ ಸ್ಟೇಡಿಯಂನಲ್ಲಿದ್ದ ಸಚಿನ್, ವಿರಾಟ್ಗೆ ಥಮ್ಸ್ ಅಪ್ ತೋರಿಸಿ ಸಂಭ್ರಮಿಸಿದ್ದರು. ಈಡೆನ್ನಲ್ಲಿ ಅಂಥಾ ಒಂದು ಅದ್ಭುತ ಕ್ಷಣಕ್ಕೆ ಕ್ರಿಕೆಟ್ ಪ್ರೇಮಿಗಳು ಸಾಕ್ಷಿಯಾದರು.