ಮುಂಬಯಿ: ಕುಡಿದ ಮತ್ತಿನಲ್ಲಿ ಅಂಧೇರಿಯ ರೈಲು ನಿಲ್ದಾಣದ ಪ್ಲಾಟ್ಫಾರ್ಮ್ ಗೆ ಕಾರು ನುಗ್ಗಿಸಿದ ಕ್ರಿಕೆಟರ್ ಹರ್ಪ್ರೀತ್ ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿದೆ.
ಸೋಮವಾರ ಬೆಳಗ್ಗೆ ಬಾಂದ್ರಾದಿಂದ ಹೊರಟಿದ್ದ ಅವರು ಕಾರನ್ನು ಜನ ದಟ್ಟಣೆಯಿಂದ ಕೂಡಿರುವ ಅಂಧೇರಿ ರೈಲು ನಿಲ್ದಾಣದ ಒಂದನೇ ಪ್ಲಾಟ್ಫಾರ್ಮ್ನತ್ತ ಒಯ್ದಿದ್ದಾರೆ. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. . ವೇಗವಾಗಿ ಕಾರು ಬಂದಿದ್ದನ್ನು ನೋಡಿ ಜನ ಗಾಬರಿಗೊಂಡಿದ್ದಾರೆ. ಘಟನೆ ವೇಳೆ ಸ್ಥಳದಲ್ಲಿ ಗಲಾಟೆ ಕೂಡ ನಡೆದಿದೆ.
ದೈಹಿಕ ವೈಕಲ್ಯ ಹೊಂದಿರುವವರಿಗೆ ಗಾಲಿ ಕುರ್ಚಿ ಮೂಲಕ ಪ್ಲಾಟ್ಫಾರ್ಮ್ಗೆ ಸಂಪರ್ಕ ಕಲ್ಪಿಸುವ ಇಳಿಜಾರು ರಸ್ತೆಯ ಮೂಲಕ ಹರ್ಪ್ರೀತ್ ಸಿಂಗ್ ಕಾರು ಚಲಾಯಿಸಿದ್ದರು. ದಿಕ್ಕು ತಪ್ಪಿ ತಿಳಿಯದೆ ಸ್ಟೇಷನ್ ಪ್ರವೇಶಿಸಿರುವುದಾಗಿ ಅವರು ಪೊಲೀಸರಿಗೆ ತಿಳಿಸಿದ್ದು, ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಆತ ಮದ್ಯ ಸೇವಿಸಿರುವುದು ದೃಢಪಟ್ಟಿದೆ ಎಂದು ಪೊಲೀಸರು ಹೇಳಿದ್ದಾರೆ. ಹರ್ಪ್ರೀತ್ ಅಂಡರ್ 19 ಕ್ರಿಕೆಟ್ ಆಟಗಾರನಾಗಿದ್ದ.
Advertisement