ಸುಪ್ರೀಂನಿಂದ ಬಿಸಿಸಿಐ ಹೊಸ ಆಡಳಿತ ಮಂಡಳಿ ರಚನೆ, ವಿನೋದ್ ರಾಯ್ ಮುಖ್ಯಸ್ಥ

ಸುಪ್ರೀಂ ಕೋರ್ಟ್ ಸೋಮವಾರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಗೆ ಹೊಸ ಆಡಳಿತ ಮಂಡಳಿ...
ವಿನೋದ್ ರಾಯ್
ವಿನೋದ್ ರಾಯ್
ನವದೆಹಲಿ: ಸುಪ್ರೀಂ ಕೋರ್ಟ್ ಸೋಮವಾರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಗೆ ಹೊಸ ಆಡಳಿತ ಮಂಡಳಿ ರಚಿಸಿದ್ದು, ಮಾಜಿ ಸಿಎಜಿ ವಿನೋದ್ ರಾಯ್ ಅವರನ್ನು ಶ್ರೀಮಂತ ಕ್ರಿಕೆಟ್ ಸಂಸ್ಥೆಯ ಮುಖ್ಯಸ್ಥರನ್ನಾಗಿ ನೇಮಕ ಮಾಡಿದೆ.
ಸುಪ್ರೀಂ ಕೋರ್ಟ್ ಇಂದು ಬಿಸಿಸಿಐಗೆ ವಿನೋದ್ ರಾಯ್  ನೇತೃತ್ವದ ತಾತ್ಕಾಲಿಕವಾಗಿ ನಾಲ್ವರು ಸದಸ್ಯರನ್ನೊಳಗೊಂಡ ಆಡಳಿತ ಮಂಡಳಿಯನ್ನು ರಚಿಸಿದ್ದು, ಖ್ಯಾತ ಅಂಕಣಕಾರ, ಚಿಂತಕ ರಾಮಚಂದ್ರ ಗುಹಾ, ಮಾಜಿ ಕ್ರಿಕೆಟಿಗ ಡಯನಾ ಎಡುಲ್ಜಿ ಹಾಗೂ ಐಡಿಎಫ್ ಸಿ ಅಧಿಕಾರಿ ವಿಕ್ರಮ್ ಲಿಮಯೆ ಅವರು ನೂತನ ಆಡಳಿತ ಮಂಡಳಿಯಲ್ಲಿ ಸ್ಥಾನ ಪಡೆದಿದ್ದಾರೆ.
ಕ್ರಿಕೆಟ್ ಸಂಸ್ಥೆಗೆ ಹೊಸದಾಗಿ ಚುನಾವಣೆ ನಡೆಯುವವರೆಗೆ ಈ ನಾಲ್ವರು ಬಿಸಿಸಿಐನ ಆಡಳಿತ ನಡೆಸಲಿದ್ದಾರೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಇದೇ ವೇಳೆ ಬಿಸಿಸಿಐ ನೂತನ ಆಡಳಿತ ಮಂಡಳಿಗೆ ಕ್ರೀಡಾ ಸಚಿವಾಲಯದ ಕಾರ್ಯದರ್ಶಿಯನ್ನು ನೇಮಕ ಮಾಡುವಂತೆ ಕೇಂದ್ರ ಸರ್ಕಾರ ಮಾಡಿದ್ದ ಮನವಿಯನ್ನು ಕೋರ್ಟ್ ತಿರಸ್ಕರಿಸಿದೆ.
ಕಳೆದ ಜನವರಿ 24ರಂದು ಇಬ್ಬರು ಸದಸ್ಯರ ಸಮಿತಿ ಶಿಫಾರಸ್ಸು ಮಾಡಿದ್ದ 9 ಹೆಸರುಗಳನ್ನೂ ಸರ್ವೋಚ್ಛ ನ್ಯಾಯಾಲಯ ತಿರಸ್ಕರಿಸಿತ್ತು.
ಹಿರಿಯ ವಕೀಲರಾದ ಅನಿಲ್‌ ಬಿ ಧವನ್‌ ಮತ್ತು ಗೋಪಾಲ ಸುಬ್ರಮಣಿಂ ಅವರನ್ನೊಳಗೊಂಡ ದ್ವಿಸದಸ್ಯ ಸಮಿತಿ ಮುಚ್ಚಿದ ಲಕೋಟೆಯಲ್ಲಿ ೯ ಜನ ಸದಸ್ಯರ ಹೆಸರನ್ನು ಸಲ್ಲಿಸಿತ್ತು ಆದರೆ ಅವರಲ್ಲಿ ಕೆಲವರು ೭೦ ವರ್ಷ ಮೀರಿದ್ದರಿಂದ ಸುಪ್ರೀಂ ಕೋರ್ಟ್ ಈ ಪಟ್ಟಿಯನ್ನು ಒಪ್ಪಿಕೊಳ್ಳಲು ನಿರಾಕರಿಸಿತ್ತು,
ಸುಪ್ರೀಂ ಕೋರ್ಟ್ ಈ ತಿಂಗಳ ಆರಂಭದಲ್ಲಿ ಬಿಸಿಸಿಐ ಅಧ್ಯಕ್ಷ ಅನುರಾಗ್‌ ಠಾಕೂರ್‌ ಮತ್ತು ಕಾರ್ಯದರ್ಶಿ ಅಜಯ್‌ ಶಿರ್ಕೆ ಅವರನ್ನು ವಜಾ ಮಾಡಿತ್ತು. ಕೋರ್ಟ್‌ ಆದೇಶ ಪಾಲನೆ ಮಾಡದಿದ್ದುದಕ್ಕೆ ಮತ್ತು ಬಿಸಿಸಿಐ ವ್ಯವಹಾರಗಳಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳದ ಕಾರಣಕ್ಕೆ ಅವರನ್ನು ಕೋರ್ಟ್‌ ಹುದ್ದೆಯಿಂದ ವಜಾ ಮಾಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com