ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರು ಹಿರಿಯರ ತಂಡದೊಂದಿಗೆ ವಿದೇಶ ಪ್ರವಾಸಕ್ಕೆ ತೆರಳುವುದಿಲ್ಲ ಎಂದು ಬಿಸಿಸಿಐ ಆಡಳಿತಗಾರರ ಸಮಿತಿ(ಸಿಒಎ) ಮುಖ್ಯಸ್ಥ ವಿನೋದ್ ರೈ ಅವರು ಶನಿವಾರ ಹೇಳಿದ್ದಾರೆ.
ರಾಹುಲ್ ದ್ರಾವಿಡ್ ಅವರು ಅಂಡರ್-19 ತಂಡದ ಪ್ರಧಾನ ಕೋಚ್ ಆಗಿರುವುದರಿಂದ ಕಿರಿಯರ ತಂಡದೊಂದಿಗಿರಲಿದ್ದಾರೆ ಎಂದು ರೈ ತಿಳಿಸಿದ್ದಾರೆ. ಅಲ್ಲದೆ ಟೀಂ ಇಂಡಿಯಾ ಬೌಲಿಂಗ್ ಸಲಹೆಗಾರರಾಗಿದ್ದ ಜಹೀರ್ ಖಾನ್ ಅವರ ಒಪ್ಪಂದ ವಿವಾದ ಪರಿಹರಿಸುವ ಯತ್ನ ನಡೆಯುತ್ತಿದೆ ಎಂದು ಹೇಳಿದ್ದಾರೆ.
ರಾಹುಲ್ ದ್ರಾವಿಡ್ ಅವರು ಅಂಡರ್-19 ತಂಡಕ್ಕೆ ಎರಡು ವರ್ಷಗಳ ಪೂರ್ಣಾವಧಿ ಒಪ್ಪಂದ ಮಾಡಿಕೊಂಡಿದ್ದು, ಹಿರಿಯ ತಂಡದ ವಿದೇಶ ಪ್ರವಾಸಕ್ಕೆ ಅವರು ಲಭ್ಯವಿರುವುದಿಲ್ಲ ಎಂದು ರೈ ಸ್ಪಷ್ಟಪಡಿಸಿದ್ದಾರೆ.
ಬಿಸಿಸಿಐ ಈ ನಿರ್ಧಾರದಿಂದಾಗಿ ರಾಹುಲ್ ದ್ರಾವಿಡ್ ಅವರು ಟೀಂ ಇಂಡಿಯಾದ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹೊರಗುಳಿಯಲಿದ್ದಾರೆ.