ನಿನ್ನೆ ಕೊಲಂಬೋದಲ್ಲಿ ನಡೆದ ನಿಡಹಾಸ್ ತ್ರಿಕೋನ ಟಿ20 ಸರಣಿಯ ಪೈನಲ್ ಪಂದ್ಯದ ಗೆಲುವಿನ ಬಳಿಕ ನಡೆದ ಸುದ್ದಿಗೋಷ್ಛಿಯಲ್ಲಿ ಮಾತನಾಡಿದ ನಾಯಕ ರೋಹಿತ್ ಶರ್ಮಾ, ಬಾಂಗ್ಲಾದೇಶದ ವಿರುದ್ಧದ ಪೈನಲ್ ಪಂದ್ಯದಲ್ಲಿ ನನಗನ್ನಿಸಿದ್ದು, 18 ಓವರ್ ತುಂಬಾ ನಿರ್ಣಾಯಕವಾಗಿರುತ್ತದೆ. ಹೀಗಾಗಿ ಆ ಓವರ್ ವೇಳೆಗೆ ಕ್ರೀಸ್ ನಲ್ಲಿ ಓರ್ವ ಅನುಭವಿ ಬ್ಯಾಟ್ಸಮನ್ ಇರಬೇಕಾಗುತ್ತದೆ. ಇದೇ ಕಾರಣಕ್ಕೆ 13ನೇ ಓವರ್ ನಲ್ಲಿ ನಾನು ಔಟ್ ಆದ ಬಳಿಕ ಕೂಡಲೇ ಕಾರ್ತಿಕ್ ರನ್ನು ಕಳುಹಿಸದೇ ವಿಜಯ್ ಶಂಕರ್ ರನ್ನು ಕಣಕ್ಕಿಳಿಸಿದೆ. ನಾನು ಡಗೌಟ್ ಗೆ ಬಂದಾಗ ಕಾರ್ತಿಕ್ ಕೊಂಚ ಅಸಮಾಧಾನದಿಂದ ಇದ್ದ. ಆತನ ಮುಖಭಾವನೆ ನನಗೆ ಅರ್ಥವಾಯಿತು. ಆಗ ನಾನು ಆತನನ್ನು ಉದ್ದೇಶಿಸಿ ಅಂತಿಮ ಹಂತದಲ್ಲಿ ಅನುಭವಿ ಆಟಗಾರ ಕ್ರೀಸ್ ನಲ್ಲಿರುವುದು ಉತ್ತಮ. ನಿನ್ನಲ್ಲಿನ ಬ್ಯಾಟಿಂಗ್ ಕೌಶಲ್ಯದಿಂದಾಗಿ ತಂಡಕ್ಕೆ ನೆರವಾಗಲಿದ್ದು, ನೀನು ಪಂದ್ಯವನ್ನು ಪೂರ್ಣಗೊಳಿಸಬೇಕು. ಇದೇ ಕಾರಣಕ್ಕೆ ವಿಜಯ್ ಶಂಕರ್ ನನ್ನು ನಿನಗಿಂತ ಮೊದಲು ಕಳುಹಿಸಿದೆ ಎಂದು ಹೇಳಿದೆ.