ಬೆಂಗಳೂರು: ವಿಶಾಖಪಟ್ಟಣಂನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಭಾರತ ಸೋಲು ಅನುಭವಿಸಿದರೂ, ಗಳಿಸಿದ್ದ ಕಡಿಮೆ ಮೊತ್ತದಲ್ಲಿ ಪ್ರವಾಸಿಗರ ಮೇಲೆ ನೀಡಿದ್ದ ಕಠಿಣ ಪೈಪೋಟಿ ಎಲ್ಲರ ಗಮನ ಸೆಳೆದಿದೆ ಎಂದು ಭಾರತ ತಂಡದ ಆಲ್ರೌಂಡರ್ ಕೃನಾಲ್ ಪಾಂಡ್ಯ ಹೇಳಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಕಳೆದ ಪಂದ್ಯದಲ್ಲಿ ಭಾರತ ತಂಡದ ಬೌಲರ್ಗಳು ಅದ್ಭುತ ಪ್ರದರ್ಶನ ತೋರಿದ್ದರು. ನಾವು ಗಳಿಸಿದ್ದ ಸಾಧಾರಣ ಮೊತ್ತಕ್ಕೆ ಪ್ರವಾಸಿಗರನ್ನು ನಿಯಂತ್ರಿಸಿದ್ದೆವು. ಆದರೆ, ಬ್ಯಾಟಿಂಗ್ ವಿಭಾಗದಿಂದ ಇನ್ನಷ್ಟು ರನ್ಗಳಿಸಬೇಕಿತ್ತು ಎಂದು ನುಡಿದರು.
ಕಳೆದ ಪಂದ್ಯದಲ್ಲಿ ವೇಗಿ ಜಸ್ಪ್ರೀತ್ ಬೂಮ್ರಾ ಜತೆಗೆ ಕೃನಾಲ್ ಪಾಂಡ್ಯ ಉತ್ತಮ ಬೌಲಿಂಗ್ ಮಾಡಿದ್ದರು. ಆದರೆ, ಕೊನೆಯ ಓವರ್ನಲ್ಲಿ ಸರಿಯಾಗಿ ನಿಭಾಯಿಸುವಲ್ಲಿ ಹಿರಿಯ ವೇಗಿ ಉಮೇಶ್ ಯಾದವ್ ಎಡವಿದ್ದರು. ಹಾಗಾಗಿ, ಭಾರತ ಪಂದ್ಯವನ್ನು ಕೈ ಚಿಲ್ಲಿಕೊಂಡಿತ್ತು.
"ಈಗಾಗಲೇ ಭಾರತ 0-1 ಹಿನ್ನಡೆಯಲ್ಲಿದ್ದು, ನಾಳಿನ ಪಂದ್ಯ ನಮ್ಮ ಪಾಲಿಗೆ ಅತ್ಯಂತ ಮಹತ್ವ ಪಡೆದಿದೆ. ಕಳೆದ ಪಂದ್ಯದಲ್ಲಿ ಸೋತಿರಬಹುದು. ಆದರೆ, ಸತತ ಪಂದ್ಯಗಳಲ್ಲಿ ನಾವು ಎಂದೂ ಸೋತಿಲ್ಲ. ನಾಳಿನ ಪಂದ್ಯದಲ್ಲಿ ತಂಡ ಉತ್ತಮ ಪ್ರದರ್ಶನ ನೀಡಲಿದೆ ಎಂಬ ವಿಶ್ವಾಸವಿದೆ" ಎಂದು ನುಡಿದರು.
ಕಳೆದ ವರ್ಷ ನವೆಂಬರ್ನಿಂದ ಕೃನಾಲ್ ಪಾಂಡ್ಯ ಭಾರತ ಚುಟುಕು ತಂಡದ ಅಂತಿಮ 11ರಲ್ಲಿ ನಿರಂತರವಾಗಿ ಆಡುತ್ತಿದ್ದಾರೆ. ಅವರು ಇಲ್ಲಿವರೆಗೂ ಆಡಿರುವ 10 ಪಂದ್ಯಗಳಲ್ಲಿ 11 ವಿಕೆಟ್ ಪಡೆದಿದ್ದು, ಸಿಡ್ನಿಯಲ್ಲಿ 36ಕ್ಕೆ 4 ವಿಕೆಟ್ ಪಡೆದಿರುವುದು ಅವರ ವೃತ್ತಿ ಜೀವನದ ಶೇಷ್ಠ ಬೌಲಿಂಗ್ ಆಗಿದೆ. ಇವರು ಆಡಿರುವ 10 ಪಂದ್ಯಗಳಲ್ಲಿ ಕೇವಲ ಐದರಲ್ಲಿ ಮಾತ್ರ ಬ್ಯಾಟಿಂಗ್ ಮಾಡಿ 70 ರನ್ ಗಳಿಸಿದ್ದಾರೆ.
" ಯಾವ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕು ಎನ್ನುವ ಕುರಿತು ಎಂದೂ ಯೋಚಿಸಿಲ್ಲ. ಪರಿಸ್ಥಿತಿಗೆ ತಕ್ಕಂತೆ ಪ್ರದರ್ಶನ ತೋರುವ ಮೂಲಕ ತಂಡಕ್ಕೆ ನೆರವಾಗುವುದರ ಕಡೆ ಹೆಚ್ಚು ಗಮನಹರಿಸುತ್ತೇನೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡಲ್ಲೂ ತಂಡಕ್ಕೆ ನೆರವಾಗುವುದು ನನ್ನ ಗುರಿ" ಎಂದು ಕೃನಾಲ್ ಪಾಂಡ್ಯ ಹೇಳಿದ್ದಾರೆ.
Advertisement