ನವದೆಹಲಿ: ನಾಳೆ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ವಿರುದ್ಧದ ಮೊದಲ ಟಿ-20 ಪಂದ್ಯ ನಡೆಯುತ್ತಿದ್ದು, ಟೀಂ ಇಂಡಿಯಾ ಪರ ಆಡಬೇಕೆಂಬುದು ನನ್ನ ಕನಸಾಗಿತ್ತು ಎಂದು ಚೊಚ್ಚಲ ಪಂದ್ಯವನ್ನಾಡುತ್ತಿರುವ ಕ್ರಿಕೆಟ್ ಆಟಗಾರ ಶಿವಂ ದುಬೆ ಹೇಳಿದ್ದಾರೆ.
ಟೀಂ ಇಂಡಿಯಾದ ಭಾಗವಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಶಿವಂ ದುಬೆ, ದೇಶಕ್ಕಾಗಿ ಆಡುತ್ತಿರುವುದು ಹೆಮ್ಮೆ ಮೂಡಿಸಿದೆ. ಕಠಿಣ ಶ್ರಮದಿಂದ ಮುಂದುವರೆಯುವುದಾಗಿ ತಿಳಿಸಿದ್ದಾರೆ.
ಭಾರತ ಎ ಟೀಮ್ ನಲ್ಲಿ ಪರಿಣಾಮಕಾರಿಯಾದ ಪ್ರದರ್ಶನ ನೀಡಿದ್ದ ಶಿವಂ ದುಬೆ ಸೂಕ್ತ ಆಲ್ ರೌಂಡರ್ ಎಂದು ಕಳೆದ ವಾರ ತಂಡ ಪ್ರಕಟಿಸಿದ ಮುಖ್ಯ ಆಯ್ಕೆದಾರ ಎಂ ಎಸ್ ಕೆ ಪ್ರಸಾದ್ ಹೇಳಿದ್ದರು.
ದೇಶಿಯ ಪಂದ್ಯದಲ್ಲಿ ಐದು ಎಸೆತಗಳಲ್ಲಿ ಐದು ಸಿಕ್ಸರ್ ಸಿಡಿಸಿದ್ದ ಶಿವಂ ದುಬೆ 2018ರ ಐಪಿಎಲ್ ನಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ಪ್ರಾಂಚೈಸಿಗೆ ಭಾರಿ ಮೊತ್ತಕ್ಕೆ ಖರೀದಿಯಾಗಿದ್ದರು.
Advertisement