ಧರ್ಮಶಾಲಾ: ಮಳೆಯಲ್ಲಿ ಕೊಚ್ಚಿ ಹೋದ ದಕ್ಷಿಣ ಆಫ್ರಿಕಾ- ಭಾರತ ಮೊದಲ ಏಕದಿನ ಪಂದ್ಯ
ಧರ್ಮಶಾಲಾ: ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಇಂದು ನಡೆಯಬೇಕಿದ್ ದಕ್ಷಿಣ ಆಫ್ರಿಕಾ- ಭಾರತ ನಡುವಣ ಮೊದಲ ಏಕದಿನ ಪಂದ್ಯ ತೀವ್ರ ಮಳೆಯಿಂದಾಗಿ ಸ್ಥಗಿತಗೊಂಡಿದೆ. ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯವೂ ಮಳೆಯಿಂದಾಗಿ ರದ್ದುಗೊಂಡಿತ್ತು.
ಈ ಭಾಗದಲ್ಲಿ ಗುರುವಾರ ಮತ್ತು ಶುಕ್ರವಾರ ವ್ಯಾಪಕ ಮಳೆಯಾಗಲಿದೆ ಎಂಬ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ ನಂತರ ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯದ ಬಗ್ಗೆ ಅನುಮಾನ ಉಂಟಾಗಿತ್ತು. ಆಯೋಜಕರು ಹಾಗೂ ಅಭಿಮಾನಿಗಳು ಮಳೆ ಬಾರದಂತೆ ದೇವಾಲಯಗಳಲ್ಲಿ ವಿಶೇಷ ಪ್ರಾರ್ಥನೆ ಕೂಡಾ ಸಲ್ಲಿಸಿದ್ದರು.
ಬುಧವಾರ ಉಭಯ ತಂಡಗಳು ತಾಲೀಮು ನಡೆಸುವ ವೇಳೆ ಕೂಡಾ ಬಾರಿ ಮಳೆ ಬಿದ್ದಿದ್ದರಿಂದ ಆಟದ ಮೈದಾನವನ್ನು ಸಂಪೂರ್ಣವಾಗಿ ಮುಚ್ಚಲಾಗಿತ್ತು. ನಿನ್ನೆ ರಾತ್ರಿಯಿಂದಲೂ ಮಳೆಯಾದ್ದರಿಂದ ಟಾಸ್ ಕೂಡಾ ವಿಳಂಬವಾಯಿತು. ಮೈದಾನದಲ್ಲಿ ಬಿದ್ದ ನೀರನ್ನು ತೆರವುಗೊಳಿಸುವಲ್ಲಿ ಸಿಬ್ಬಂದಿ ವಿಫಲವಾದ್ದರಿಂದ ಮೈದಾನದಲ್ಲಿದ್ದ ಆಂಫೈರ್ ಗಳು ಪಂದ್ಯವನ್ನು ರದ್ದುಪಡಿಸಿದರು.
ಕೊರೋನಾ ವೈರಸ್ ಭೀತಿ, ಹವಾಮಾನ ವೈಫರೀತ್ಯದ ನಡುವೆಯೂ ಭರ್ಜರಿಯಾಗಿ ಟಿಕೆಟ್ ಗಳು ಬಿಕರಿಯಾಗಿದ್ದವು. ಆದರೆ, ಪಂದ್ಯ ನಡೆಯದೆ ಅಭಿಮಾನಿಗಳು ಭಾರಿ ನಿರಾಸೆ ಅನುಭವಿಸಿದರು.
ಮಾರ್ಚ್ 15 ರಂದು ಲಖನೌನಲ್ಲಿ ಏರಡನೇ ಹಾಗೂ ಮಾರ್ಚ್ 18 ರಂದು ಕೊಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಅಂತಿಮ ಪಂದ್ಯ ನಡೆಯಲಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ