ಬೋರ್ಡ್ ಪರೀಕ್ಷೆ ಕೈಬಿಟ್ಟಿದ್ದೆ ರವಿ ಬಿಷ್ಣೋಯಿ ಕ್ರಿಕೆಟ್ ಭವಿಷ್ಯಕ್ಕೆ ಟರ್ನಿಂಗ್ ಪಾಯಿಂಟ್
ನವದೆಹಲಿ: ಭಾರತ 19 ವಯೋಮಿತಿ ತಂಡದ ನಾಯಕ ಪ್ರಿಯಮ್ ಗರ್ಗ್ ಹಾಗೂ ಆರಂಭಿಕ ಬ್ಯಾಟ್ಸ್ಮನ್ ಯಶಸ್ವಿ ಜೈಸ್ವಾಲ್ ಅವರು ನಡೆದು ಬಂದ ಕಠಿಣ ಹಾದಿಯನ್ನು ಈಗಾಗಲೇ ನಾವು ತಿಳಿದುಕೊಂಡಿದ್ದೇವೆ. ಅದೇ ರೀತಿ ಕಿರಿಯರ ವಿಶ್ವಕಪ್ನಲ್ಲಿ ಎದುರಾಳಿ ಬ್ಯಾಟ್ಸ್ಮನ್ಗಳಿಗೆ ಸಿಂಹ ಸ್ವಪ್ನರಾಗಿದ್ದ ರವಿ ಬಿಷ್ಣೋಯಿ ಹಾದಿ ಕೂಡ ಅತ್ಯಂತ ಕಠಿಣವಾಗಿತ್ತು.
2018 ಮಾರ್ಚ್ ತಿಂಗಳಲ್ಲಿ ಜೈಪುರದಲ್ಲಿ ರಾಜಸ್ಥಾನ ರಾಯಲ್ಸ್ ನ ಕೆಲ ವಿಶ್ವ ಬ್ಯಾಟ್ಸ್ಮನ್ ಗಳ ನೆಟ್ ಅಭ್ಯಾಸದಲ್ಲಿ ರವಿ ಬಿಷ್ಣೋಯಿ ಬೌಲಿಂಗ್ ಮಾಡುತ್ತಿದ್ದಾಗ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವಂತೆ ತಂದೆಯಿಂದ ಕಟ್ಟುನಿಟ್ಟಿನ ಸಂದೇಶ ಬರುತ್ತದೆ. ಇದು ರವಿ ಬಿಷ್ಣೋಯಿ ಅವರಿಗೆ ನಿರ್ಣಾಯಕ ಕ್ಷಣವಾಗಿರುತ್ತದೆ.ಇದೀಗ ಸಿಕ್ಕಿರುವುದನ್ನು ಉಳಿಸಿಕೊಳ್ಳುತ್ತೀಯಾ ಅಥವಾ ಬಿಡುತ್ತೀಯಾ ಎಂಬ ಅವರ ಇಬ್ಬರ ಕೋಚ್ ಗಳ ಸಲಹೆ ಮೇರೆಗೆ ತಂದೆಯ ಸಲಹೆಯನ್ನು ತಿರಸ್ಕರಿಸಿ ಬೋರ್ಡ್ ಪರೀಕ್ಷೆಯನ್ನು ಕೈಬಿಡುತ್ತಾರೆ. ಇದು ಅವರ ಕ್ರಿಕೆಟ್ ಭವಿಷ್ಯದ ಟರ್ನಿಂಗ್ ಪಾಯಿಂಟ್ ಆಗುತ್ತದೆ.
ಯುವ ಬಲಗೈ ಲೆಗ್ ಸ್ಪಿನ್ನರ್ ತಮ್ಮ ಗೂಗ್ಲಿ ಎಸೆತಗಳ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ಗಮನ ಸೆಳೆದರು. ಜಪಾನ್ ಹಾಗೂ ನ್ಯೂಜಿಲೆಂಡ್ ವಿರುದ್ಧದ ಪಂದ್ಯಗಳಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಅಲ್ಲದೇ, ಭಾನುವಾರ ಮುಕ್ತಾಯವಾದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಅತ್ಯುದ್ಬುತ ಬೌಲಿಂಗ್ ಮಾಡಿ ಒಟ್ಟು 17 ವಿಕೆಟ್ ಕಬಳಿಸಿದ್ದರು
ಭಾರತ ನೀಡಿದ್ದ 178 ರನ್ ಗುರಿ ಹಿಂಬಾಲಿಸಿದ್ದ ಬಾಂಗ್ಲಾದೇಶ ಉತ್ತಮ ಆರಂಭದೊಂದಿಗೆ ಮುನ್ನುಗ್ಗುತ್ತಿತ್ತು. ಈ ವೇಳೆ ಚೆಂಡು ಕೈಗೆತ್ತಿಕೊಂಡ ರವಿ ಬಿಷ್ಣೋಯಿ, ಅಗ್ರ ಕ್ರಮಾಂಕದ ನಾಲ್ವರು ಬ್ಯಾಟ್ಸ್ಮನ್ಗಳನ್ನು ಕೇವಲ 15 ರನ್ಗಳ ಅಂತರದಲ್ಲಿ ಉರುಳಿಸಿ ಪಂದ್ಯಕ್ಕೆ ದಿಕ್ಕನ್ನೇ ಬದಲಿಸಿದ್ದರು. ಆದರೆ, ಅಂತಿಮವಾಗಿ ಕಠಿಣ ಹೋರಾಟದ ನಡೆವೆಯೂ ಭಾರತಕ್ಕೆ ಐದನೇ ವಿಶ್ವಕಪ್ ಗೆಲ್ಲುವ ಅದೃಷ್ಠ ಒಲಿಯಲಿಲ್ಲ.