ರೋಹಿತ್‌ಗೆ ಟೀಂ ಇಂಡಿಯಾ ನಾಯಕತ್ವ ನೀಡದಿದ್ದರೆ ಅದು ನಾಚಿಕೆಗೇಡಿನ ಸಂಗತಿ: ಗೌತಮ್‌ ಗಂಭೀರ್‌

ಸೀಮಿತ ಓವರ್‌ಗಳ ಅಥವಾ ಟಿ20 ಭಾರತ ತಂಡದ ನಾಯಕತ್ವವನ್ನು ರೋಹಿತ್ ಶರ್ಮಾ ಅವರಿಗೆ ನೀಡದೇ ಇದ್ದಲ್ಲಿ ಅದಕ್ಕಿಂತ ನಾಚಿಕೆಗೇಡಿನ ಸಂಗತಿ ಇನ್ನೊಂದಿಲ್ಲ ಎಂದು ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ಗೌತಮ್‌ ಗಂಭೀರ್‌ ಹೇಳಿದ್ದಾರೆ.
ರೋಹಿತ್ ಶರ್ಮಾ
ರೋಹಿತ್ ಶರ್ಮಾ

ನವದೆಹಲಿ: ಸೀಮಿತ ಓವರ್‌ಗಳ ಅಥವಾ ಟಿ20 ಭಾರತ ತಂಡದ ನಾಯಕತ್ವವನ್ನು ರೋಹಿತ್ ಶರ್ಮಾ ಅವರಿಗೆ ನೀಡದೇ ಇದ್ದಲ್ಲಿ ಅದಕ್ಕಿಂತ ನಾಚಿಕೆಗೇಡಿನ ಸಂಗತಿ ಇನ್ನೊಂದಿಲ್ಲ ಎಂದು ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ಗೌತಮ್‌ ಗಂಭೀರ್‌ ಹೇಳಿದ್ದಾರೆ.

ಮುಂಬೈ ಇಂಡಿಯನ್ಸ್ ಐದನೇ ಬಾರಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟ್ರೋಫಿ ಮುಡಿಗೇರಿಸಿಕೊಂಡ ಬೆನ್ನಲ್ಲೆ ಗೌತಮ್‌ ಗಂಭೀರ್‌ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಮಂಗಳವಾರ ರಾತ್ರಿ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನೀಡಿದ್ದ 157 ರನ್‌ಗಳ ಗುರಿಯನ್ನು ಬೆನ್ನತ್ತಿದ್ದ ಮುಂಬೈ ಇಂಡಿಯನ್ಸ್ ಪರ ನಾಯಕ ರೋಹಿತ್‌ ಶರ್ಮಾ 68 ರನ್‌ಗಳನ್ನು ಗಳಿಸಿದ್ದರು. ಆ ಮೂಲಕ ಮುಂಬೈ ಐದು ವಿಕೆಟ್‌ಗಳ ಜಯ ಸಾಧಿಸಿತ್ತು. ಆ ಮೂಲಕ ಐಪಿಎಲ್‌ ಟ್ರೋಫಿಯನ್ನು ಉಳಿಸಿಕೊಂಡ ಎರಡನೇ ತಂಡ ಎಂಬ ಕೀರ್ತಿಗೆ ರೋಹಿತ್ ಪಡೆ ಭಾಜನವಾಯಿತು. 

"ಸೀಮಿತ ಓವರ್‌ಗಳ ರಾಷ್ಟ್ರೀಯ ತಂಡಕ್ಕೆ ರೋಹಿತ್‌ ಶರ್ಮಾ ನಾಯಕನಾಗದೇ ಇದ್ದಲ್ಲಿ, ಇದು ಭಾರತಕ್ಕೆ ತುಂಬಾ ನಷ್ಟ ಉಂಟಾಗಲಿದೆ ಹಾಗೂ ಇದರಿಂದ ರೋಹಿತ್‌ ಶರ್ಮಾಗೆ ಯಾವುದೇ ನಷ್ಟವಿಲ್ಲ. ಅವರು ತಂಡವನ್ನು ಅದ್ಭುತವಾಗಿ ಮುನ್ನಡೆಸಿದ್ದಾರೆ. ರೋಹಿತ್‌ ನಾಯಕತ್ವದ ಬಗ್ಗೆ ನನಗೆ ತೃಪ್ತಿ ಇದೆ. ಆದರೆ, ಅತ್ಯುತ್ತಮ ನಾಯಕ ಅಥವಾ ಕೆಟ್ಟ ನಾಯಕ ಎಂಬುದನ್ನು ತೀರ್ಮಾನ ಮಾಡುವ ಅಂಶಗಳಾವುವು? ರೋಹಿತ್‌ ಶರ್ಮಾ ನಾಯಕತ್ವದ ತಂಡ ಐದು ಬಾರಿ ಐಪಿಎಲ್‌ ಟ್ರೋಫಿ ಮುಡಿಗೇರಿಸಿಕೊಂಡಿದೆ," ಎಂದು ಗಂಭೀರ್‌ ಹೇಳೀರುವುದನ್ನು ಇಎಸ್‌ಪಿಎನ್‌ ಕ್ರಿಕ್‌ಇನ್ಫೋವರದಿ ಮಾಡಿದೆ.

"ಎಂಎಸ್‌ ಧೋನಿ ಭಾರತದ ಅತ್ಯಂತ ಯಶಸ್ವಿ ನಾಯಕ ಎಂದು ಹೇಳುತ್ತಲೇ ಇರುತ್ತೇವೆ. ಏಕೆಂದರೆ, ಅವರು ಎರಡು ವಿಶ್ವಕಪ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್ ಗೆ ಮೂರು ಬಾರಿ ಐಪಿಎಲ್‌ ಟ್ರೋಫಿ ತಂದುಕೊಟ್ಟಿದ್ದಾರೆ. ಅದೇ ರೀತಿ ರೋಹಿತ್‌ ಶರ್ಮಾ ತನ್ನ ನಾಯಕತ್ವದಲ್ಲಿ ಐದು ಐಪಿಎಲ್‌ ಟ್ರೋಫಿಗಳನ್ನು ಗೆದ್ದಿದ್ದಾರೆ. ಆ ಮೂಲಕ ಫ್ರಾಂಚೈಸಿ ಲೀಗ್‌ನ ಅತ್ಯಂತ ಯಶಸ್ವಿ ನಾಯಕರಾಗಿದ್ದಾರೆ. ಹಾಗಾಗಿ, ಸೀಮಿತ ಓವರ್‌ಗಳ ಅಥವಾ ಟಿ20 ಭಾರತ ತಂಡದ ನಾಯಕತ್ವವನ್ನು ರೋಹಿತ್‌ ಶರ್ಮಾಗೆ ನೀಡದೇ ಇದ್ದಲ್ಲಿ ಅದು ನಾಚಿಕೆಗೇಡಿನ ಸಂಗತಿ," ಎಂದು ಗಂಭೀರ್‌ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com