ಬೆಂಗಳೂರು: ದೀಪಾವಳಿ ಸಂಭ್ರಮ ದೇಶದಾದ್ಯಂತ ಮನೆಮಾಡಿದ್ದು, ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿಂದು ನೆದರ್ಲೆಂಡ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದಿರುವ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಎಂ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದ್ದು, ಅಭಿಮಾನಿಗಳಿಂದ ಕ್ರೀಡಾಂಗಣ ತುಂಬಿ ತುಳುಕುತ್ತಿದೆ. ಲೀಗ್ ಹಂತದ ಅಂತಿಮ ಕದನಕ್ಕೆ ಉಭಯ ತಂಡಗಳು ಸಜ್ಜಾಗಿದ್ದು, ಸೆಮಿಸ್ ಸ್ಥಾನವನ್ನು ಭದ್ರಪಡಿಸಿಕೊಂಡಿರುವ ಟೀಮ್ ಇಂಡಿಯಾಗೆ ಈ ಪಂದ್ಯವು ನಿರ್ಣಾಯಕವಲ್ಲದಿದ್ದರೂ, ಈ ಆವೃತ್ತಿಯಲ್ಲಿ ಸೋಲಿಲ್ಲದ ಸರದಾರನ ಪಟ್ಟವನ್ನು ಉಳಿಸಿಕೊಳ್ಳುವ ತವಕದಲ್ಲಿದೆ.
ಆಡಿರುವ ಎಲ್ಲಾ ಎಂಟು ಪಂದ್ಯಗಳಲ್ಲಿ ಗೆಲುವು ಪಡೆದಿರುವ ಭಾರತ ತಂಡ ಈಗಾಗಲೇ ಅಧಿಕೃತವಾಗಿ ಏಕದಿನ ವಿಶ್ವಕಪ್ ಸೆಮಿಫೈನಲ್ಸ್ಗೆ ಅರ್ಹತೆ ಪಡೆದಿದೆ. ಇದೀಗ ತನ್ನ ಕೊನೆಯ ಲೀಗ್ ಪಂದ್ಯದಲ್ಲಿಯೂ ಗೆದ್ದು ಸೆಮಿಫೈನಲ್ ಪಂದ್ಯಕ್ಕೆ ಹೆಚ್ಚಿನ ಆತ್ಮವಿಶ್ವಾಸದಿಂದ ಆಡಲು ಎದುರು ನೋಡುತ್ತಿದೆ.
ನೆದರ್ಲೆಂಡ್ ತಂಡ ಆಡಿರುವ 8 ಪಂದ್ಯಗಳ ಪೈಕಿ ಕೇವಲ ಎರಡರಲ್ಲಿ ಗೆದ್ದಿದ್ದು, ಇನ್ನುಳಿದ 6ರಲ್ಲಿ ಸೋಲು ಕಂಡಿದೆ. ಆ ಮೂಲಕ ಸೆಮಿಫೈನಲ್ನಿಂದ ಹೊರಬಿದ್ದಿದೆ. ಪಾಯಿಂಟ್ಸ್ ಟೇಬಲ್ನಲ್ಲಿ ಕೊನೆಯ ಸ್ಥಾನದಲ್ಲಿರುವ ನೆದರ್ಲೆಂಡ್ಸ್ ಇದೀಗ ಭಾರತದ ವಿರುದ್ಧ ಗೆದ್ದು ಗೌರವದೊಂದಿಗೆ ವಿಶ್ವಕಪ್ನಿಂದ ಹೊರನಡೆಯಲು ನಿರೀಕ್ಷೆಯಲ್ಲಿದೆ.
ಟೀಂ ಇಂಡಿಯಾ ಆಡುವ 11ರ ಬಳಗ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಕಲದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.
ನೆದರ್ಲೆಂಡ್: ವೆಸ್ಲೀ ಬರೆಸ್ಸಿ, ಮ್ಯಾಕ್ಸ್ ಒಡೌಡ್, ಕಾಲಿನ್ ಅಕೆರ್ಮನ್, ಸೈಬ್ರಾಂಡ್, ಸ್ಕಾಟ್ ಎಡ್ವರ್ಡ್ಸ್ (ನಾಯಕ, ವಿಕೆಟ್ ಕೀಪರ್), ಬಾಸ್ ಡಿ ಲೀಡೆ, ತೇಜಾ ನಿಡಮನೂರು, ಲಾಗನ್ ವ್ಯಾನ್ ಬೀಕ್, ರೋಲಫ್ ವ್ಯಾನ್ ಡೆರ್ ಮರ್ವೆ, ಆರ್ಯನ್ ದತ್, ಪಾಲ್ ವ್ಯಾನ್ಮೀಕರನ್
ಭಾರತ ತಂಡ ನವೆಂಬರ್ 15ರಂದು ನಡೆಯಲಿರುವ ಸೆಮಿಫೈನಲ್ನಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಮುಂಬೈನ ವಾಂಖೆಡೆಯಲ್ಲಿ ಈ ಪಂದ್ಯ ನಡೆಯಲಿದೆ.
Advertisement