
ಐಪಿಎಲ್ 2025ರ 18ನೇ ಆವೃತ್ತಿಯಲ್ಲಿ ಎರಡು ತಂಡಗಳಲ್ಲಿ ಬದಲಾವಣೆ ಮಾಡಲಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಮೊಣಕೈ ಗಾಯದಿಂದಾಗಿ ಪಂದ್ಯಾವಳಿಯಿಂದ ಹೊರಬಿದ್ದಿದ್ದು, ಅವರ ಬದಲಾಗಿ ಆಯುಷ್ ಮ್ಹಾತ್ರೆ ಬದಲಿ ಆಟಗಾರನಾಗಿ ತಂಡಕ್ಕೆ ಸೇರಿಕೊಂಡಿದ್ದಾರೆ.
ಮತ್ತೊಂದೆಡೆ ಗಾಯಗೊಂಡಿರುವ ಆಡಂ ಜಂಪಾ ಅವರು ಕೂಡ ಟೂರ್ನಿಯಂದ ಹೊರಬಿದ್ದಿದ್ದು, ಅವರ ಬದಲಿಗೆ ಸನ್ರೈಸರ್ಸ್ ಹೈದರಾಬಾದ್ (SRH) ತಂಡಕ್ಕೆ ರವಿಚಂದ್ರನ್ ಸ್ಮರಣ್ ಸೇರಿಕೊಂಡಿದ್ದಾರೆ ಎಂದು ಐಪಿಎಲ್ ಮಾಧ್ಯಮ ಸಲಹಾ ಸಂಸ್ಥೆ ಸೋಮವಾರ ತಿಳಿಸಿದೆ.
ಕರ್ನಾಟಕದ 21 ವರ್ಷದ ಎಡಗೈ ಬ್ಯಾಟ್ಸ್ಮನ್ ಸ್ಮರಣ್ SRH ತಂಡಕ್ಕೆ ತಮ್ಮ ಮೂಲ ಬೆಲೆ 30 ಲಕ್ಷಕ್ಕೆ ಸೇರ್ಪಡೆಗೊಂಡರೆ, ಮುಂಬೈ ತಂಡದ ಬ್ಯಾಟರ್ ಮ್ಹಾತ್ರೆ ಅವರನ್ನು CSK ಕೂಡ ಮೂಲ ಬೆಲೆಗೆ ಖರೀದಿಸಿದೆ.
ದೇಶೀಯ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಸ್ಮರಣ್ ರವಿಚಂದ್ರನ್ SRH ತಂಡ ಸೇರಿಕೊಂಡಿರುವುದಕ್ಕೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಸ್ಮರಣ್ ಏಳು ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, ಪಂಜಾಬ್ ವಿರುದ್ಧ ದ್ವಿಶತಕ ಸೇರಿದಂತೆ 64.50 ಸರಾಸರಿಯಲ್ಲಿ 500ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. 2024ರಲ್ಲಿ ತಮ್ಮ ಚೊಚ್ಚಲ ಪಂದ್ಯ ಆಡಿದ ಅವರು ನಂತರ 10 ಲಿಸ್ಟ್ ಎ ಪಂದ್ಯಗಳನ್ನು ಆಡಿದ್ದಾರೆ. 72.16 ಸರಾಸರಿಯಲ್ಲಿ 433 ರನ್ ಗಳಿಸಿದ್ದಾರೆ. ಎರಡು ಶತಕಗಳನ್ನು ಗಳಿಸಿದ್ದಾರೆ. ಆರು ಟಿ20 ಪಂದ್ಯಗಳನ್ನು ಆಡಿದ್ದು, 170 ಸ್ಟ್ರೈಕ್ ರೇಟ್ನಲ್ಲಿ 170 ರನ್ ಗಳಿಸಿದ್ದಾರೆ.
SRH ತಂಡವು ಆಡಿರುವ 6 ಪಂದ್ಯಗಳಲ್ಲಿ ಕೇವಲ ಎರಡರಲ್ಲಿ ಜಯ ಸಾಧಿಸಿದೆ. ಈ ಮೂಲಕ ನಾಲ್ಕು ಅಂಕಗಳೊಂದಿಗೆ ಐಪಿಎಲ್ ಪಾಯಿಂಟ್ಸ್ ಟೇಬಲ್ನಲ್ಲಿ 9ನೇ ಸ್ಥಾನದಲ್ಲಿದೆ. ಇತ್ತ CSK ಕೂಡ ಆಡಿರುವ 7 ಪಂದ್ಯಗಳಲ್ಲಿ 2 ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಕೊನೆಯ ಸ್ಥಾನದಲ್ಲಿದೆ.
Advertisement