
ಬೆಂಗಳೂರು: ನಗರದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆಯಲಿರುವ ಆರ್ ಸಿಬಿ ಹಾಗೂ ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯದ ಬಗ್ಗೆ ಅನಿಲ್ ಕುಂಬ್ಳೆ ಮಾತನಾಡಿದ್ದು, ದೇವದತ್ ಪಡಿಕ್ಕಲ್ ಮತ್ತು ಸುಯಾಶ್ ಶರ್ಮಾ ಅವರಂತಹ ಆಟಗಾರರ ಸ್ಥಿರ ಪ್ರದರ್ಶನ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಬಗ್ಗೆ ಚರ್ಚಿಸಿದ್ದಾರೆ.
ರಾಜಸ್ಥಾನ ರಾಯಲ್ಸ್ ತನ್ನ ಹಿಡಿತದಲ್ಲಿದ್ದ ಪಂದ್ಯಗಳಲ್ಲಿ ಯಾಕೆ ಸೋತರು ಎಂಬ ಬಗ್ಗೆ ಲೆಕ್ಕಾಚಾರ ಮಾಡಬೇಕಾದ ಅಗತ್ಯವಿದೆ. ಬೇರೆ ಯಾವುದೇ ತಂಡವನ್ನು ಸೋಲಿಸುವಷ್ಟು ಅವರು ಬಲಿಷ್ಠರಾಗಿದ್ದರೂ ಅಂತಿಮ ಓವರ್ ಗಳು ಅವರಿಗೆ ನೋವುಂಟು ಮಾಡುತ್ತಿವೆ. ಸಂಜು ಸ್ಯಾಮ್ಸನ್ ಅಂತಹ ದೊಡ್ಡ ಆಟಗಾರರ ಅನುಪಸ್ಥಿತಿ ದೊಡ್ಡ ನಷ್ಟವಾಗಿದೆ. ಆದರೆ, ಫಾರ್ಮ್ ನಲ್ಲಿರುವ ಆಟಗಾರರನ್ನು ಗುರುತಿಸಿ ಅವರು ಹೆಚ್ಚಿನ ಹೊತ್ತು ಆಡಲು ಅವಕಾಶ ನೀಡಬೇಕಾಗಿದೆ ಎಂದು ಕುಂಬ್ಳೆ ಹೇಳಿದ್ದಾರೆ.
ಎರಡೂ ತಂಡಗಳಿಗೆ ಪವರ್ಪ್ಲೇ ನಿರ್ಣಾಯಕವಾಗಿದೆ. ಆರ್ ಸಿಬಿಯ ಅಗ್ರ ಕ್ರಮಾಂಕದ ಬ್ಯಾಟರ್ ಗಳು ಹೆಚ್ಚಿನ ಹೊತ್ತು ನಿಲ್ಲದಂತೆ ರಾಜಸ್ಥಾನ ರಾಯಲ್ಸ್ ಮಾಡಬೇಕಾಗಿದೆ. ರಾಹುಲ್ ದ್ರಾವಿಡ್ ಅವರಿಗೆ ಪಿಚ್ ಬಗ್ಗೆ ಚೆನ್ನಾಗಿ ಗೊತ್ತಿದೆ.ಸೂಕ್ತ ಕಾರ್ಯತಂತ್ರ ರೂಪಿಸಬಲ್ಲವರು. ಹೊಂದಾಣಿಕೆಯಿಂದ ಆಟ ಆಡಬೇಕಾಗಿದೆ. ಫಾರ್ಮ್ನಲ್ಲಿರುವ ಆಟಗಾರರನ್ನು ಗುರುತಿಸಿ ಅವರಿಗೆ ಹೆಚ್ಚು ಸಮಯ ಆಡುವ ಅವಕಾಶವನ್ನು ನೀಡಬೇಕು ಎಂದು ಹೇಳಿದ್ದಾರೆ.
ಆರ್ ಸಿಬಿಯ ಹಿರಿಯ ಆಟಗಾರರಿಂದ ಧೀರ್ಘಹೊತ್ತಿನ ಪಾರ್ಟನರ್ ಶಿಪ್ ಅಗತ್ಯವಿದೆ. ಬೆಂಗಳೂರಿನಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿಯೂ ಆರ್ ಸಿಬಿ ಮೊದಲು ಬ್ಯಾಟಿಂಗ್ ಮಾಡಿ ಸಂಕಷ್ಟಕ್ಕೆ ಸಿಲುಕಿತ್ತು. ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್ ಹೆಚ್ಚಿನ ಹೊತ್ತು ಬ್ಯಾಟಿಂಗ್ ಮಾಡಿ, ಫಿಲ್ ಸಾಲ್ಟ್ ಮತ್ತು ರಜತ್ ಪಾಟೀದಾರ್ ಅವರು ಮುಕ್ತವಾಗಿ ಆಡಲು ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದಾರೆ.
"ಇದು ಪಿಚ್ ಬಗ್ಗೆ ಅಲ್ಲ ಆದರೆ ಸರಿಯಾದ ಬ್ಯಾಟಿಂಗ್ ವಿಧಾನ ಅರಿತುಕೊಳ್ಳಬೇಕಾಗಿದೆ. RCB ಮೊದಲು ಬ್ಯಾಟ್ ಮಾಡಿದರೆ ಮತ್ತು ಪಿಚ್ ಒಂದೇ ಆಗಿದ್ದರೆ, ವಿರಾಟ್ ಹೊಂದಾಣಿಕೆ ಮಾಡಿಕೊಂಡು ರನ್ ಗಳಿಸುತ್ತಾರೆ ಎಂದು ನನಗೆ ವಿಶ್ವಾಸವಿದೆ ಎಂದು ಹೇಳಿರುವ ಕುಂಬ್ಳೆ, ವಿಶೇಷವಾಗಿ ಸುಯಾಶ್ ಶರ್ಮಾ ಅವರ ಸ್ಥಿರ ಪ್ರದರ್ಶನವನ್ನು ಕೊಂಡಾಡಿದ್ದಾರೆ.
ಅವರೊಬ್ಬ ಅದ್ಬುತ ಬೌಲರ್ ಆಗಿದ್ದಾರೆ. ಕಳೆದ ವರ್ಷಕ್ಕಿಂತ ಈ ಬಾರಿ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಸುಯಶ್ ಶರ್ಮಾ ಮತ್ತು ಇತರ ಯುವ ಸ್ಪಿನ್ನರ್ಗಳಾದ ದಿಗ್ವೇಶ್ ಸಿಂಗ್ ರಾಠಿ ಮತ್ತು ವಿಘ್ನೇಶ್ ಪುತ್ತೂರು ಕೂಡಾ ಉತ್ತಮ ಪ್ರದರ್ಶನ ನೀಡುತ್ತಿರುವುದಾಗಿ ಹೇಳಿದರು.
ಇಂದು ರಾತ್ರಿ 7.30ಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ರಾಜಸ್ಥಾನ್ ರಾಯಲ್ಸ್ ಪಂದ್ಯವನ್ನು ಜಿಯೋಹಾಟ್ಸ್ಟಾರ್ ಮತ್ತು ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ನಲ್ಲಿ ವೀಕ್ಷಿಸಬಹುದು.
Advertisement