
ಕೊಲಂಬೋ: ಶ್ರೀಲಂಕಾದಲ್ಲಿ ನಡೆಯುತ್ತಿರುವ ಮಹಿಳೆಯರ ತ್ರಿಕೋನ ಏಕದಿನ ಸರಣಿಯಲ್ಲಿ ಭಾರತ ತಂಡ ಶುಭಾರಂಭ ಮಾಡಿದ್ದು ಶ್ರೀಲಂಕಾ ವಿರುದ್ಧ 9 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.
ಶ್ರೀಲಂಕಾ ರಾಜಧಾನಿ ಕೊಲಂಬೋದಾ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಇಂದಿನ ಪಂದ್ಯದಲ್ಲಿ ಶ್ರೀಲಂಕಾ ನೀಡಿದ್ದ 148ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಭಾರತ ಕೇವಲ 29.4 ಓವರ್ ನಲ್ಲೇ ಕೇವಲ 1 ವಿಕೆಟ್ ಕಳೆದುಕೊಂಡು 149 ರನ್ ಗಳಿಸಿ ಜಯಭೇರಿ ಭಾರಿಸಿತು.
ಮಳೆಯಿಂದಾಗಿ ತಲಾ 39 ಓವರ್ ಗಳಿಗೇ ಸೀಮಿತವಾಗಿದ್ದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ವನಿತೆಯರ ತಂಡ 147 ರನ್ ಗಳಿಗೆ ಆಲೌಟ್ ಆಯಿತು. ಶ್ರೀಲಂಕಾ ಪರ ಹಸಿನಿ ಪೆರೇರಾ ಅತ್ಯಧಿಕ 30 ರನ್ ಬಾರಿಸಿದರೆ, ಕವಿಶಾ ದಿಲ್ಹಾರಿ 25 ರನ್ ಹಾಗೂ ವಿಕೆಟ್ ಕೀಪರ್ ಅನುಷ್ಕಾ ಸಂಜೀವಿನಿ 22 ರನ್ಗಳ ಕಾಣಿಕೆ ನೀಡಿದರು.
ಇನ್ನು ಟೀಂ ಇಂಡಿಯಾ ಪರ ಬೌಲಿಂಗ್ನಲ್ಲಿ ಮಿಂಚಿದ ಸ್ನೇಹ ರಾಣಾ ಅತ್ಯಧಿಕ 3 ವಿಕೆಟ್ ಪಡೆದರೆ, ನಲ್ಲಪುರರೆಡ್ಡಿ ಚರಣಿ ಹಾಗೂ ದೀಪ್ತಿ ಶರ್ಮಾ ತಲಾ 2 ವಿಕೆಟ್ ಪಡೆದರು. ಅರುಂಧತಿ ರೆಡ್ಡಿ ಕೂಡ 1 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ಭಾರತ ಭರ್ಜರಿ ಬ್ಯಾಟಿಂಗ್
ಇನ್ನು ಈ ಸವಾಲಿನ ಗುರಿಯನ್ನು ಬೆನ್ನು ಹತ್ತಿದ ಭಾರತ ತಂಡ ಕೇವಲ 1 ವಿಕೆಟ್ ಕಳೆದುಕೊಂಡು 29.4 ಓವರ್ಗಳಲ್ಲಿ ಗೆಲುವಿನ ನಗೆಬೀರಿತು. ಆರಂಭಿಕ ಆಟಗಾರ್ತಿಯರಾದ ಪ್ರತೀಕಾ ರಾವಲ್ ಹಾಗೂ ಸ್ಮೃತಿ ಮಂಧಾನ ಮೊದಲ ವಿಕೆಟ್ಗೆ 54 ರನ್ಗಳ ಜೊತೆಯಾಟ ನೀಡಿದರು. ಈ ವೇಳೆ ಉಪನಾಯಕಿ ಮಂಧಾನ 46 ಎಸೆತಗಳಲ್ಲಿ 6 ಬೌಂಡರಿ ಸಹಿತ 43 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಆ ಬಳಿಕ ಜೊತೆಯಾದ ಪ್ರತೀಕಾ ಹಾಗೂ ಹರ್ಲೀನ್ ಡಿಯೋಲ್ ಅಜೇಯರಾಗಿ ಉಳಿದು ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಭಾರತದ ಪರ ಅರ್ಧಶತಕ ಸಿಡಿಸಿ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ ಪ್ರತೀಕ ರಾವಲ್ ಪಂದ್ಯಶ್ರೇಷ್ಟ ಪ್ರಶಸ್ತಿ ಸ್ವೀಕರಿಸಿದರು.
ಅಂದಹಾಗೆ ಈ ತ್ರಿಕೋನ ಏಕದಿನ ಸರಣಿಯಲ್ಲಿ ಭಾರತ ಮತ್ತು ಶ್ರೀಲಂಕಾ ಅಲ್ಲದೇ ದಕ್ಷಿಣ ಆಫ್ರಿಕಾ ತಂಡ ಕೂಡ ಸೇರಿದೆ. ಏಪ್ರಿಲ್ 27 ಅಂದರೆ ಇಂದಿನಿಂದ ಪ್ರಾರಂಭವಾಗಿರುವ ಈ ತ್ರಿಕೋನ ಸರಣಿ 15 ದಿನಗಳ ಕಾಲ ನಡೆಯಲಿದ್ದು, ಒಟ್ಟು 7 ಪಂದ್ಯಗಳು ನಡೆಯಲಿವೆ. ಇಂದಿನ ಪಂದ್ಯ ಗೆದ್ದಿರುವ ಭಾರತ ತನ್ನ ಮುಂದಿನ ಪಂದ್ಯವನ್ನು ಏಪ್ರಿಲ್ 29 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ.
Advertisement