
ಅಹ್ಮದಾಬಾದ್: ಕೇರಳ ಮತ್ತು ಗುಜರಾತ್ ನಡುವಿನ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯ ಅಕ್ಷರಶಃ ಪ್ರೇಕ್ಷಕರಿಗೆ ಸಿನಿಮಾ ತೋರಿಸಿದ್ದು,, ಅಂತಿಮ ಎಸೆತದಲ್ಲಿ ಕೇರಳ ಮುನ್ನಡೆ ಸಾಧಿಸಿ ಫೈನಲ್ ಗೇರಿದೆ.
ಈ ಪಂದ್ಯದಲ್ಲಿ ಕೇರಳ ತಂಡ ಆಸ್ಚ್ರೇಲಿಯಾದ ಮಾಜಿ ಆಟಗಾರ ಫಿಲಿಪ್ ಹ್ಯೂಸ್ ನಿಂದಾಗಿ ಕೇರಳ ತಂಡ ಫೈನಲ್ ಗೇರಿದೆ. ಅರೆ ಸಾಕಷ್ಟು ವರ್ಷಗಳ ಹಿಂದೆಯೇ ಸತ್ತ ಫಿಲಿಪ್ ಹ್ಯೂಸ್ ಗೂ ಕೇರಳ ಇಂದು ರಣಜಿ ಫೈನಲ್ ಗೇರಲು ಕಾರಣವೇನು ಎಂದು ಕೇಳಬಹುದು.. ಇದಕ್ಕೆ ಉತ್ತರ ಇಲ್ಲಿದೆ.
ಫಿಲಿಪ್ ಹ್ಯೂಸ್ ಸಾವು
ನವೆಂಬರ್ 25, 2014 ಕ್ರಿಕೆಟ್ ಅಂಗಳದ ಕರಾಳ ದಿನ. ಈ ದಿನದಂದು ಆಸ್ಟ್ರೇಲಿಯಾದಲ್ಲಿ ನಡೆದ ದೇಶೀಯ ಟೂರ್ನಿಯ ಪಂದ್ಯದ ವೇಳೆ ಶಾನ್ ಅಬಾಟ್ ಎಸೆದ ಚೆಂಡು ಫಿಲ್ ಹ್ಯೂಸ್ ಅವರ ತಲೆಯ ಹಿಂಭಾಗಕ್ಕೆ ತಾಗಿತ್ತು. ತಕ್ಷಣವೇ ಕುಸಿದು ಬಿದ್ದಿದ್ದ ಫಿಲಿಪ್ ಹ್ಯೂಸ್ ಕೋಮಾಕ್ಕೆ ಜಾರಿದ್ದರು. ಇದಾಗಿ 2 ದಿನಗಳ ನಂತರ ಅವರು ಆಸ್ಪತ್ರೆಯಲ್ಲಿ ನಿಧನರಾಗಿದ್ದರು.
ಹ್ಯೂಸ್ ಸಾವು ಬೆನ್ನಲ್ಲೇ ಕ್ರಿಕೆಟ್ ನಿಯಮಗಳಲ್ಲಿ ಬದಲಾವಣೆ
ಈ ನಿಧನದ ಬಳಿಕ ಕ್ರಿಕೆಟ್ನಲ್ಲಿ ಹೆಲ್ಮೆಟ್ ನಿಯಮವನ್ನು ಮತ್ತಷ್ಟು ಕಠಿಣಗೊಳಿಸಲಾಯಿತು. ಅದರಲ್ಲೂ ಚೆಂಡು ಹೆಲ್ಮೆಟ್ಗೆ ತಾಗಿದರೆ ವೈದ್ಯಕೀಯ ಪರಿಶೀಲನೆ ಅತ್ಯಗತ್ಯ ಎಂಬ ನಿಯಮವನ್ನು ಜಾರಿಗೊಳಿಸಲಾಯಿತು. ಇದರ ಜೊತೆಗೆ ಕ್ಲೋಸ್-ಇನ್ ಫೀಲ್ಡರ್ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಲಾಯಿತು. ಅಲ್ಲದೆ ಹೆಲ್ಮೆಟ್ಗೆ ಚೆಂಡು ಬಡಿದು ಕ್ಯಾಚ್, ಸ್ಟಂಪ್ಡ್ ಅಥವಾ ರನೌಟ್ ಆಗುವುದನ್ನು ಸಹ ಕಾನೂನುಬದ್ಧಗೊಳಿಸಲಾಯಿತು. ಬ್ಯಾಟರ್ ಹತ್ತಿರ ನಿಲ್ಲುವ ಫೀಲ್ಡರ್ಗಳು ಹೆಲ್ಮೆಟ್ ಬಳಸುವುದನ್ನು ಹೆಚ್ಚಿಸಲೆಂದೇ ಹಳೆಯ ನಿಯಮದಲ್ಲಿ ಬದಲಾವಣೆ ತರಲಾಯಿತು.
ಅದರಂತೆ 2023 ರಲ್ಲಿ ಸ್ಟಂಪ್ಗಳ ಬಳಿ ನಿಲ್ಲುವ ವಿಕೆಟ್ಕೀಪರ್ಗಳು ಮತ್ತು ಬ್ಯಾಟರ್ನ ಹತ್ತಿರವಿರುವ ಫೀಲ್ಡರ್ಗಳಿಗೆ (ಸ್ಲಿಪ್ಸ್ ಫೀಲ್ಡರ್ಗಳನ್ನು ಹೊರತುಪಡಿಸಿ) ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ. ಅಲ್ಲದೆ ಹೆಲ್ಮೆಟ್ಗೆ ಚೆಂಡು ತಾಗಿ ಕ್ಯಾಚ್, ಸ್ಟಂಪ್ಡ್ ಅಥವಾ ರನೌಟ್ ಆದರೆ ಅದನ್ನು ಔಟ್ ಎಂದು ಪರಿಗಣಿಸಲಾಗುವ ನಿಯಮವನ್ನು ಜಾರಿಗೊಳಿಸಲಾಗಿದೆ.
ಇದೇ ನಿಯಮದಿಂದಾಗಿ ಇಂದು ಕೇರಳ ಮುನ್ನಡೆ ಸಾಧಿಸಿ ರಣಜಿ ಟ್ರೋಫಿ ಫೈನಲ್ ಗೇರಿದೆ. ಫಿಲ್ ಹ್ಯೂಸ್ ಅವರ ನಿಧನದಿಂದಾಗಿ ಬದಲಾದ ಈ ನಿಯಮವೇ ರಣಜಿ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಕೇರಳ ತಂಡದ ಕೈ ಹಿಡಿದಿದೆ.
ಕೇರಳ vs ಗುಜರಾತ್
ಕೇರಳ vs ಗುಜರಾತ್ ರಣಜಿ ಪಂದ್ಯವು ಕೊನೆಯ ದಿನದಾಟಕ್ಕೆ ಕಾಲಿಟ್ಟಿದ್ದರಿಂದ ಗುಜರಾತ್ ತಂಡಕ್ಕೆ ಮುನ್ನಡೆ ಅತ್ಯವಶ್ಯಕವಾಗಿತ್ತು. ಏಕೆಂದರೆ ರಣಜಿ ಟೂರ್ನಿಯ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ಡ್ರಾ ಆದರೆ ಮೊದಲ ಇನಿಂಗ್ಸ್ನಲ್ಲಿ ಮುನ್ನಡೆ ಸಾಧಿಸಿದ ತಂಡಗಳನ್ನು ವಿಜಯಿ ಎಂದು ಘೋಷಿಸಲಾಗುತ್ತದೆ. ಇತ್ತ ಡ್ರಾನತ್ತ ಸಾಗಿದ್ದ ಈ ಪಂದ್ಯದಲ್ಲಿ ಮುನ್ನಡೆ ಸಾಧಿಸುವ ಮೂಲಕ ಫೈನಲ್ಗೇರಲು ಗುಜರಾತ್ ತಂಡ ಮೊದಲ ಇನಿಂಗ್ಸ್ನಲ್ಲಿ ಕೇವಲ ಮೂರು ರನ್ಗಳ ಮುನ್ನಡೆಗಳಿಸಿದ್ದರೆ ಸಾಕಿತ್ತು.
ಈ ಹಂತದಲ್ಲಿ ಗುಜರಾತ್ ಬ್ಯಾಟರ್ ಅರ್ಝಾನ್ ನಾಗಸ್ವಲ್ಲಾ ಬಾರಿಸಿದ ಚೆಂಡು ನೇರವಾಗಿ ಶಾರ್ಟ್ ಲೆಗ್ನಲ್ಲಿ ಫೀಲ್ಡಿಂಗ್ನಲ್ಲಿದ್ದ ಸಲ್ಮಾನ್ ನಿಝಾರ್ ಅವರ ಹೆಲ್ಮೆಟ್ಗೆ ಬಡಿದಿದೆ. ಹೆಲ್ಮೆಟ್ಗೆ ತಾಗಿ ಗಾಳಿಯಲ್ಲಿ ಹಾರಿದ ಚೆಂಡು ನೇರವಾಗಿ ಸ್ಲಿಪ್ನಲ್ಲಿದ್ದ ಸಚಿನ್ ಬೇಬಿ ಅವರ ಕೈ ಸೇರಿದೆ.
ಕ್ಯಾಚ್ ಹಿಡಿದರೂ ಔಟ್ ನೀಡದ ಅಂಪೈರ್
ಇನ್ನು ಅಂತಿಮ ವಿಕೆಟ್ ಸಿಕ್ಕ ಖುಷಿಯಲ್ಲಿ ಕೇರಳ ತಂಡದ ಫೀಲ್ಡರ್ಗಳು ಸಂಭ್ರಮಿಸಲಾರಂಭಿಸಿದರು. ಇದಾಗ್ಯೂ ಫೀಲ್ಡ್ ಅಂಪೈರ್ ಔಟ್ ನೀಡಿರಲಿಲ್ಲ. ಆ ಬಳಿಕ ಅಂಪೈರ್ಗಳು ನಿಯಮಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಫಿಲ್ ಹ್ಯೂಸ್ ಸಾವಿನ ಬಳಿಕ ಹೆಲ್ಮೆಟ್ ನಿಯಮದಲ್ಲಿ ಬದಲಾವಣೆ ಮಾಡಲಾಗಿರುವುದು ಕಂಡು ಬಂದಿದೆ. ಈ ನಿಯಮದಂತೆ ಫೀಲ್ಡ್ ಅಂಪೈರ್ ಔಟ್ ನೀಡಿದ್ದಾರೆ. ಅಲ್ಲಿಗೆ ಗುಜರಾತ್ ತಂಡದ ಮೊದಲ ಇನಿಂಗ್ಸ್ 455 ರನ್ಗಳಿಗೆ ಅಂತ್ಯಗೊಂಡಿತು. ಇದರೊಂದಿಗೆ ಕೇರಳ ತಂಡವು ಮೊದಲ ಇನಿಂಗ್ಸ್ನಲ್ಲಿ ಕೇವಲ 2 ರನ್ಗಳ ಮುನ್ನಡೆ ಪಡೆಯಿತು. ಅಲ್ಲದೆ ಇನ್ನಿಂಗ್ಸ್ ಮುನ್ನಡೆ ಆಧಾರದ ಮೇಲೆ ರಣಜಿ ಟ್ರೋಫಿಯ ಫೈನಲ್ ಹಂತಕ್ಕೂ ಏರಿದೆ.
Advertisement