
ನವದೆಹಲಿ: IPL ಟ್ರೋಫಿ ಗೆದ್ದ RCB ತಂಡದ ಸಂಭ್ರಮಾಚರಣೆ ವೇಳೆ ಸಂಭವಿಸಿದ ಕಾಲ್ತುಳಿತ ದುರಂತಕ್ಕೆ ಸಂಭಿಸಿದಂತೆ ಭಾರತ ಕ್ರಿಕೆಟ್ ತಂಡದ ಪ್ರಧಾನ ಕೋಟ್ ಗೌತಮ್ ಗಂಭೀರ್ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ನಿನ್ನೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಆರ್ ಸಿಬಿ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಸಂಭವಿಸಿದ್ದ ಕಾಲ್ತುಳಿತ ಪ್ರಕರಣದಲ್ಲಿ 11 ಮಂದಿ ಸಾವಿಗೀಡಾಗಿದ್ದರು. ಈ ಘಟನೆ ಇಡೀ ಕ್ರಿಕೆಟ್ ಜಗತ್ತನ್ನು ಆಘಾತಕ್ಕೀಡು ಮಾಡಿದ್ದು, ಇದೇ ವಿಚಾರವಾಗಿ ಮೊದಲ ಬಾರಿಗೆ ಟೀಂ ಇಂಡಿಯಾ ಪ್ರಧಾನ ಕೋಚ್ ಗೌತಮ್ ಗಂಭೀರ್ ಪ್ರತಿಕ್ರಿಯೆ ನೀಡಿದ್ದಾರೆ.
'ಗೆಲುವು, ಸಂಭ್ರಮಾಚರಣೆಗಿಂತ ಜೀವನ ಮುಖ್ಯ'ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿರುವುದು ನಿಜಕ್ಕೂ ಆಘಾತಕಾರಿ. ಗೆಲುವಿನ ಸಂಭ್ರಮಾಚರಣೆಯ ರೋಡ್ ಶೋಗಳು ಬೇಕು ಎಂದು ನಾನು ಕೇಳಿರಲಿಲ್ಲ ಮತ್ತು ಅದರಲ್ಲಿ ನನಗೆ ನಂಬಿಕೆಯೂ ಇಲ್ಲ. ನಾನು ಆಡುವಾಗ, 2007ರ ಟಿ20 ವಿಶ್ವಕಪ್ ಗೆದ್ದ ನಂತರವೂ ರೋಡ್ ಶೋಗಳನ್ನು ನಡೆಸಬಾರದು ಎಂದು ನಾನು ಅದೇ ಹೇಳಿಕೆ ನೀಡಿದ್ದೆ. ಜನರ ಜೀವ ಹೆಚ್ಚು ಮುಖ್ಯವಾದದ್ದು' ಎಂದು ಹೇಳಿದರು.
ಭವಿಷ್ಯದಲ್ಲಿ ಈ ರೀತಿ ಸಂಭವಿಸಬಾರದು
ನಾನು ಅದನ್ನು ಮುಂದುವರಿಸುತ್ತೇನೆ. ಭವಿಷ್ಯದಲ್ಲಿ ನಾವು ಈ ರೀತಿಯ ರೋಡ್ ಶೋಗಳನ್ನು ನಡೆಸದಿರುವ ಬಗ್ಗೆ ಸ್ವಲ್ಪ ಜಾಗೃತರಾಗಿರಬಹುದು ಮತ್ತು ಬಹುಶಃ ಅದನ್ನು ಮುಚ್ಚಿದ ಬಾಗಿಲಿನ ವಾತಾವರಣದಲ್ಲಿ ನಡೆಸಬಹುದು. ಏನು ನಡೆದಿದೆಯೋ ಅದು ತುಂಬಾ ದುರಂತ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಹೃದಯ ಮಿಡಿಯುತ್ತದೆ.
ಭವಿಷ್ಯದಲ್ಲಿ ಈ ರೀತಿಯದ್ದೇನೂ ಆಗಬಾರದು ಎಂದು ನಾನು ಭಾವಿಸುತ್ತೇನೆ, ಏಕೆಂದರೆ ನಾವೆಲ್ಲರೂ ಜವಾಬ್ದಾರಿಯುತ ನಾಗರಿಕರು ಎಂದು ನಾನು ಭಾವಿಸುತ್ತೇನೆ. ಇದನ್ನೆಲ್ಲ ನಾವು ನೋಡಿಕೊಳ್ಳಬೇಕು. ನಾವು ರೋಡ್ ಶೋ ನಡೆಸಲು ಸಿದ್ಧರಿಲ್ಲದಿದ್ದರೆ, ಹಾಗೆ ಮಾಡಬಾರದಿತ್ತು. ನೀವು 11 ಜನರನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ ಎಂದು ಗೌತಮ್ ಗಂಭೀರ್ ಹೇಳಿದ್ದರು.
ನಿರ್ವಹಣೆ ಸಾಧ್ಯವಾಗದಿದ್ದರೆ, ಸ್ಥಗಿತಗೊಳಿಸಿ
ಇದೇ ವೇಳೆ ರೋಡ್ ಶೋಗಳಂತಹ ಕಾರ್ಯಕ್ರಮಗಳ ನಿರ್ವಹಣೆ ಕುರಿತು ಕಿಡಿಕಾರಿದ ಗಂಭೀರ್, 'ಅಂತಹ ದೊಡ್ಡ ಕಾರ್ಯಕ್ರಮವನ್ನು ನಿರ್ವಹಿಸಲು ಸಿದ್ಧವಾಗಿಲ್ಲದಿದ್ದರೆ, ಇಂತಹ ವಿಜಯೋತ್ಸವಗಳನ್ನು ಸ್ಥಗಿತಗೊಳಿಸುವುದು ಉತ್ತಮ ಆಯ್ಕೆಯಾಗಿದೆ. ನಾನು ಯಾರನ್ನು ಹೊಣೆಗಾರರನ್ನಾಗಿ ಮಾಡುತ್ತೇನೆ ಎಂಬುದು ಮುಖ್ಯವಲ್ಲ.
ಗೆಲುವು ಮುಖ್ಯ, ಆಚರಣೆಗಳು ಮುಖ್ಯ, ಆದರೆ ಜನರ ಜೀವನ ಹೆಚ್ಚು ಮುಖ್ಯ. ಆದ್ದರಿಂದ, ನೀವು ಆ ರೀತಿಯ ಜನಸಂದಣಿಯನ್ನು ನಿಭಾಯಿಸಲು ಸಿದ್ಧರಿಲ್ಲದಿದ್ದರೆ ಅಥವಾ ಸೂಕ್ತವಾಗಿಲ್ಲದಿದ್ದರೆ, ನೀವು ಈ ರೋಡ್ ಶೋಗಳನ್ನು ರದ್ದುಗೊಳಿಸಬಹುದು ಎಂದು ಗಂಭೀರ್ ಹೇಳಿದ್ದಾರೆ.
Advertisement