
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB)ನ ಐಪಿಎಲ್ 2025 ಪ್ರಶಸ್ತಿ ಗೆದ್ದ ಹಿನ್ನೆಲೆಯಲ್ಲಿ ನಡೆದ ಸಂಭ್ರಮಾಚರಣೆ ವೇಳೆ ಜೂನ್ 4 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದ ಕುರಿತು ಭಾರತದ ಮಾಜಿ ಬ್ಯಾಟ್ಸ್ಮನ್ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಪ್ರತಿಕ್ರಿಯಿಸಿದ್ದಾರೆ. ಜೂನ್ 3ರಂದು ಅಹಮದಾಬಾದ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಆರು ರನ್ಗಳಿಂದ ಸೋಲಿಸುವ ಮೂಲಕ ಆರ್ಸಿಬಿ 18 ವರ್ಷಗಳ ಬಳಿಕ ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಅಭಿಮಾನಿಗಳೊಂದಿಗೆ ಈ ಕ್ಷಣವನ್ನು ಆಚರಿಸಲು, ಫ್ರಾಂಚೈಸಿ ಆಯೋಜಿಸಿದ್ದ ಸಂಭ್ರಮಾಚರಣೆ ವೇಳೆ ಕಾಲ್ತುಳಿತ ಸಂಭವಿಸಿ 11 ಜನರು ಸಾವಿಗೀಡಾಗಿದ್ದರು.
ಬೆಂಗಳೂರಿನವರಾಗಿರುವ ದ್ರಾವಿಡ್, ಎನ್ಡಿಟಿವಿ ಜೊತೆ ಮಾತನಾಡಿ ಈ ದುರದೃಷ್ಟಕರ ಘಟನೆಯ ಬಗ್ಗೆ ಸಂತಾಪ ಸೂಚಿಸಿದ್ದಾರೆ. ಬೆಂಗಳೂರಿನಲ್ಲಿ ಇಂತಹ ದುರಂತ ನಡೆದಿರುವುದು ಹೃದಯವಿದ್ರಾವಕವಾಗಿದೆ ಎಂದಿದ್ದಾರೆ.
'ತುಂಬಾ ನಿರಾಶಾದಾಯಕ. ಇದು ತುಂಬಾ ದುಃಖಕರ. ಬೆಂಗಳೂರು ಕ್ರೀಡೆಗಳ ಬಗ್ಗೆ ಉತ್ಸಾಹ ಹೊಂದಿರುವ ನಗರ. ನಾನು ಕೂಡ ಇಲ್ಲಿಂದಲೇ ಬಂದಿದ್ದೇನೆ. ಇಲ್ಲಿನ ಜನರು ಕ್ರಿಕೆಟ್ ಮಾತ್ರವಲ್ಲ, ಎಲ್ಲ ಕ್ರೀಡೆಗಳನ್ನು ಪ್ರೀತಿಸುತ್ತಾರೆ. ಅವರು ಎಲ್ಲ ಕ್ರೀಡೆಗಳನ್ನು ಮತ್ತು ಎಲ್ಲ ಕ್ರೀಡಾ ತಂಡಗಳನ್ನು ಅನುಸರಿಸುತ್ತಾರೆ. ಅದು ಫುಟ್ಬಾಲ್ ತಂಡವಾಗಿರಬಹುದು ಅಥವಾ ಕಬಡ್ಡಿ ತಂಡವಾಗಿರಬಹುದು. ಇಂತಹ ದುರದೃಷ್ಟಕರ ಘಟನೆ ನಡೆದಿರುವುದು ನಿಜಕ್ಕೂ ಹೃದಯವಿದ್ರಾವಕವಾಗಿದೆ. ದುರದೃಷ್ಟವಶಾತ್ ಪ್ರಾಣ ಕಳೆದುಕೊಂಡ ಮತ್ತು ಗಾಯಗೊಂಡ ಎಲ್ಲರಿಗೂ ನಮ್ಮ ಸಂತಾಪಗಳು' ಎಂದು ಹೇಳಿದರು.bcci
ದ್ರಾವಿಡ್ ಸದ್ಯ ರಾಜಸ್ಥಾನ ರಾಯಲ್ಸ್ (RR) ತಂಡದ ತರಬೇತುದಾರರಾಗಿದ್ದಾರೆ. ಕಾಲ್ತುಳಿತ ಘಟನೆ ಇದೀಗ ರಾಜ್ಯದಲ್ಲಿ ರಾಜಕೀಯ ತಿರುವು ಪಡೆದುಕೊಂಡಿದೆ.
ಆದಾಗ್ಯೂ, ದುರಂತಕ್ಕೆ ರಾಜ್ಯ ಸರ್ಕಾರ, ಫ್ರಾಂಚೈಸಿ ಅಥವಾ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್ಸಿಎ) ಅನ್ನು ದೂಷಿಸಲು ದ್ರಾವಿಡ್ ನಿರಾಕರಿಸಿದರು.
ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಕೆಲವು ಆರ್ಸಿಬಿ ಮತ್ತು ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಯ ಅಧಿಕಾರಿಗಳನ್ನು ಸಹ ಬಂಧಿಸಲಾಗಿದೆ. ಐಪಿಎಲ್ ಫ್ರಾಂಚೈಸಿ ವಿರುದ್ಧವೂ ಎಫ್ಐಆರ್ ದಾಖಲಿಸಲಾಗಿದೆ.
Advertisement