
2025ರ ಐಪಿಎಲ್ ಆವೃತ್ತಿಯು ಮಾರ್ಚ್ 22ರ ಶನಿವಾರದಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣಸಲಿವೆ. ಐಪಿಎಲ್ ಇತಿಹಾಸದಲ್ಲಿ ಆರ್ಸಿಬಿ ಮತ್ತು ಸಿಎಸ್ಕೆ ನಡುವಿನ ಪಂದ್ಯವೆಂದರೆ ವಿಶೇಷ. ಈ ತಂಡಗಳ ಪೈಪೋಟಿ ನಡುವೆಯೇ ಅಭಿಮಾನಿಗಳ ನಡುವೆಯೂ ಪೈಪೋಟಿ ಏರ್ಪಡುತ್ತದೆ. ಆರ್ಸಿಬಿ ಸದ್ಯ ಪ್ರಶಸ್ತಿಗಾಗಿ ತವಕಿಸುತ್ತಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಐದು ಬಾರಿಯ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಮುಂಬರುವ ಆವೃತ್ತಿಗೆ ಮುನ್ನ, ಸಿಎಸ್ಕೆ ತಂಡದ ಮಾಜಿ ಬ್ಯಾಟ್ಸ್ಮನ್ ಸುಬ್ರಮಣಿಯಂ ಬದ್ರಿನಾಥ್ ಪ್ರಸಿದ್ಧ ಮೀಮ್ ಅನ್ನು ಮರುಸೃಷ್ಟಿಸಿ ಆರ್ಸಿಬಿಯನ್ನು ಅಣಕಿಸಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ಬದ್ರಿನಾಥ್ ಸಿಎಸ್ಕೆ ಪ್ರತಿನಿಧಿಯಾಗಿ ಕಾಣಿಸಿಕೊಂಡಿದ್ದಾರೆ. ಸರದಿಯಲ್ಲಿ ನಿಂತಿರುವ ಇತರ ತಂಡಗಳ ಪ್ರತಿನಿಧಿಗಳೊಂದಿಗೆ ಕೈಕುಲುಕುವುದು ಮತ್ತು ಕೆಲವರನ್ನು ಅಪ್ಪಿಕೊಳ್ಳುವುದನ್ನು ಮಾಡಿದ್ದಾರೆ.
ಆದರೆ, ಆರ್ಸಿಬಿ ಪ್ರತಿನಿಧಿಯನ್ನು ಸ್ವಾಗತಿಸುವ ಸರದಿ ಬಂದಾಗ, ಬದ್ರಿನಾಥ್ ಅವರು ಆರ್ಸಿಬಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಇನ್ನೊಂದು ತಂಡದತ್ತ ಸಾಗುತ್ತಾರೆ. ಈ ವಿಡಿಯೊ ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆರ್ಸಿಬಿ ಮತ್ತು ಸಿಎಸ್ಕೆ ಅಭಿಮಾನಿಗಳ ನಡುವಿನ ಬೆಂಕಿಗೆ ತುಪ್ಪ ಸುರಿದಿದೆ.
ಐಪಿಎಲ್ 2025ನೇ ಆವೃತ್ತಿಯ ಲೀಗ್ ಹಂತದಲ್ಲಿ ಆರ್ಸಿಬಿ ಎರಡು ಬಾರಿ ಸಿಎಸ್ಕೆ ವಿರುದ್ಧ ಸೆಣಸಲಿದೆ. ಎರಡೂ ತಂಡಗಳ ನಡುವಿನ ಮೊದಲ ಪಂದ್ಯ ಮಾರ್ಚ್ 28 ರಂದು ಚೆಪಾಕ್ನಲ್ಲಿ ನಡೆಯಲಿದೆ. ಆರ್ಸಿಬಿ ಮತ್ತು ಸಿಎಸ್ಕೆ ಮೇ 3 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೆ ಮುಖಾಮುಖಿಯಾಗಲಿವೆ.
ಇತ್ತೀಚೆಗೆ, ಮಾಜಿ ಆರ್ಸಿಬಿ ಸ್ಪಿನ್ನರ್ ಹಾಗೂ ಸಿಎಸ್ಕೆ ಮಾಜಿ ಆಟಗಾರ ಶಾದಾಬ್ ಜಕಾತಿ ಅವರು ಬೆಂಗಳೂರು ಮೂಲದ ಫ್ರಾಂಚೈಸಿ ಇಲ್ಲಿಯವರೆಗೆ ಒಂದೇ ಒಂದು ಐಪಿಎಲ್ ಟ್ರೋಫಿಯನ್ನು ಗೆದ್ದಿಲ್ಲ ಏಕೆ ಎಂಬುದರ ಕುರಿತು ಮಾತನಾಡಿದ್ದರು.
'ಇದು ತಂಡದ ಆಟ. ನೀವು ಟ್ರೋಫಿಗಳನ್ನು ಗೆಲ್ಲಲು ಬಯಸಿದರೆ, ತಂಡವು ಒಂದು ಘಟಕದಂತೆ ಆಡಬೇಕು. 2-3 ಆಟಗಾರರು ಟ್ರೋಫಿಯನ್ನು ಗೆಲ್ಲಲು ನಿಮಗೆ ಸಹಾಯ ಮಾಡಲು ಸಾಧ್ಯವಿಲ್ಲ. ಚೆನ್ನೈ ತಂಡವು ಭಾರತೀಯ ಆಟಗಾರರ ಬಲವಾದ ಗುಂಪನ್ನು ಮತ್ತು ಕೆಲವು ಯೋಗ್ಯ ವಿದೇಶಿ ಆಟಗಾರರನ್ನು ಹೊಂದಿತ್ತು. ಆಟಗಾರರ ನಡುವೆ ಸೌಹಾರ್ಧತೆ ಮೂಡಿಸುವುದು ಮುಖ್ಯ. ನಾನು ಆರ್ಸಿಬಿಯಲ್ಲಿದ್ದಾಗ, ಅವರು 2-3 ಆಟಗಾರರ ಮೇಲೆ ಮಾತ್ರ ಗಮನ ಹರಿಸುತ್ತಿದ್ದರು. ಅದಕ್ಕಾಗಿಯೇ ಅವರು ಕಪ್ ಗೆದ್ದಿಲ್ಲ' ಎಂದು ಸ್ಪೋರ್ಟ್ಸ್ಕೀಡಾಗೆ ತಿಳಿಸಿದ್ದರು.
Advertisement