
ಜೈಪುರ: ಹಾಲಿ ಐಪಿಎಲ್ ಟೂರ್ನಿಯಲ್ಲಿ ಪ್ಲೇಆಫ್ ಕನಸು ಕಾಣುತ್ತಿದ್ದ ರಾಜಸ್ತಾನ ರಾಯಲ್ಸ್ ತಂಡಕ್ಕೆ ಡಬಲ್ ಆಘಾತ ಎದುರಾಗಿದ್ದು, ಮುಂಬೈ ಇಂಡಿಯನ್ಸ್ ವಿರುದ್ಧ ಸೋತು ರಿಯಾನ್ ಪರಾಗ್ ಪಡೆ ಟೂರ್ನಿಯಿಂದಲೇ ಹೊರಬಿದ್ದಿದ್ದರೆ, ಇತ್ತ ತಂಡದ ಪ್ರಮುಖ ವೇಗಿ ಗಾಯಗೊಂಡು ಬಾಕಿ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ.
ಹಾಲಿ ಐಪಿಎಲ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಮುಂಬೈ ವಿರುದ್ಧ ರಾಜಸ್ತಾನ ತಂಡ 100 ರನ್ ಗಳ ಹೀನಾಯ ಸೋಲುಕಂಡಿದೆ. ಈ ಪಂದ್ಯದ ಸೋಲಿನ ಮೂಲಕ ರಾಜಸ್ತಾನ ರಾಯಲ್ಸ್ ತಂಡ ಟೂರ್ನಿಯಿಂದಲೇ ಹೊರಬಿದ್ದಿದೆ.
ಇಂದಿನ ಪಂದ್ಯವೂ ಸೇರಿದಂತೆ ಒಟ್ಟು 11 ಪಂದ್ಯಗಳನ್ನಾಡಿರುವ ರಾಜಸ್ತಾನ ತಂಡ ಕೇವಲ 3 ಪಂದ್ಯಗಳನ್ನು ಮಾತ್ರ ಗೆದ್ದಿದ್ದು, 8 ಪಂದ್ಯಗಳಲ್ಲಿ ಸೋಲು ಕಂಡಿದೆ. ಅಂಕ ಪಟ್ಟಿಯಲ್ಲಿ ಕೇವಲ 6 ಅಂಕಗಳೊಂದಿಗೆ 8ನೇ ಸ್ಥಾನದಲ್ಲಿದೆ. ಲೀಗ್ ಹಂತದಲ್ಲಿ ರಾಜಸ್ತಾನ ಇನ್ನೂ 3 ಪಂದ್ಯಗಳನ್ನಾಡಲಿದ್ದು ಈ ಮೂರು ಪಂದ್ಯಗಳನ್ನು ಗೆದ್ದರೂ ಪ್ಲೇಆಫ್ ಗೇರುವ ಸಾಧ್ಯತೆ ಇಲ್ಲ.
ಗಾಯಾಳು ಸ್ಟಾರ್ ವೇಗಿ ಕೂಡ ಟೂರ್ನಿಯಿಂದ ಔಟ್
ಇತ್ತ ರಾಜಸ್ತಾನ ತಂಡದ ಅನುಭವಿ ವೇಗದ ಬೌಲರ್ ಸಂದೀಪ್ ಶರ್ಮಾ (Sandeep Sharma) ಇಂಜುರಿಯಿಂದಾಗಿ ಇಡೀ ಟೂರ್ನಿಯಿಂದಲೇ ಹೊರಬಿದಿದ್ದಾರೆ. ಏಪ್ರಿಲ್ 28 ರಂದು ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದ ವೇಳೆ ರಾಜಸ್ಥಾನ್ ರಾಯಲ್ಸ್ ತಂಡದ ವೇಗಿ ಸಂದೀಪ್ ಶರ್ಮಾ ಗಾಯಗೊಂಡಿದ್ದರು.
ಆಗಿದ್ದೇನು?
ಗುಜರಾತ್ ಟೈಟಾನ್ಸ್ ಇನ್ನಿಂಗ್ಸ್ನ 16 ನೇ ಓವರ್ ಎಸೆದಿದ್ದ ಸಂದೀಪ್ ಶರ್ಮಾ ಅವರ ನಾಲ್ಕನೇ ಎಸೆತವನ್ನು ಗಿಲ್ ಚೆಂಡನ್ನು ಡ್ರೈವ್ ಮಾಡಿದರು. ಸಂದೀಪ್ ತನ್ನ ಫಾಲೋ ಥ್ರೂನಲ್ಲಿ ಚೆಂಡನ್ನು ತಡೆಯಲು ಪ್ರಯತ್ನಿಸಿದರು. ಈ ವೇಳೆ ಅವರ ಬಲಗೈ ಬೆರಳಿಗೆ ಗಾಯವಾಯಿತು. ಇದರ ಹೊರತಾಗಿಯೂ, ಅವರು ಬೌಲಿಂಗ್ ಮುಂದುವರಿಸಿ ನಾಲ್ಕು ಓವರ್ಗಳ ಕೋಟಾವನ್ನು ಪೂರ್ಣಗೊಳಿಸಿದರು. ಈ ಪಂದ್ಯದಲ್ಲಿ ಅವರು 4 ಓವರ್ಗಳಲ್ಲಿ 33 ರನ್ಗಳಿಗೆ ಒಂದು ವಿಕೆಟ್ ಪಡೆದರು.
ಮೇ 1 ರಂದು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ಸಂದೀಪ್ ಶರ್ಮಾ ತಂಡದ ಬಸ್ಸಿನಿಂದ ಇಳಿಯುವಾಗ ಅವರ ಬಲಗೈಗೆ ಬ್ಯಾಂಡೇಜ್ ಹಾಕಲಾಗಿತ್ತು. ರಾಜಸ್ಥಾನ ರಾಯಲ್ಸ್ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತನ್ನ ವಿಡಿಯೋವನ್ನು ಹಂಚಿಕೊಂಡಿದೆ. ಅದರಲ್ಲಿ ಬೆರಳಿನಲ್ಲಿ ಮೂಳೆ ಮುರಿತವಾಗಿದ್ದರೂ ತಂಡಕ್ಕಾಗಿ ತನ್ನ ದೇಹವನ್ನು ಪಣಕ್ಕಿಟ್ಟು ತನ್ನ ಖೋಟಾವನ್ನು ಪೂರ್ಣಗೊಳಿಸಿದ ಈ ಯೋಧನಿಗೆ ಚಪ್ಪಾಳೆ ತಟ್ಟಿ ಎಂದು ಬರೆದುಕೊಂಡಿದೆ.
Advertisement