
ಕೋಲ್ಕತ್ತ: ಭಾರತದ ಕ್ರಿಕೆಟ್ ಕಾಶಿ ಎಂದೇ ಹೆಸರಾದ ಕೋಲ್ಕತ್ತದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ರಾಜಸ್ಥಾನ ರಾಯಲ್ಸ್ ವಿರುದ್ಧದ ರೋಚಕ ಐಪಿಎಲ್ ಹಣಾಹಣಿಯಲ್ಲಿ KKR ಒಂದು ರನ್ ಅಂತರದಿಂದ ಗೆಲುವು ಸಾಧಿಸಿತು. ಈ ಮೂಲಕ ಪ್ಲೇ- ಆಫ್ ಪ್ರವೇಶಿಸುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತ ನೈಟ್ ರೈಡರ್ಸ್ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 206 ರನ್ ಪೇರಿಸಿತು. ಆರಂಭಿಕ ಆಟಗಾರರಾದ ರಹಮಾನುಲ್ಲಾ ಗುರ್ಬಾಜ್ 35, ಸುನೀಲ್ ನರೈನ್ 11 ರನ್ ಗಳಿಗೆ ಔಟಾದರೆ, ನಾಯಕ ಅಂಜಿಕ್ಯಾ ರಹಾನೆ 24 ಎಸೆತಗಳಲ್ಲಿ 30 ರನ್ ಗಳಿಸಿ, ಪರಾಗ್ ಬೌಲಿಂಗ್ ನಲ್ಲಿ ನಿರ್ಗಮಿಸಿದರು.
ಬಳಿಕ ರಘುವಂಶಿ 44, ಆಂಡ್ರೆ ರಸೆಲ್ ಅಜೇಯ 57 ಮತ್ತು ರಿಂಕು ಸಿಂಗ್ ಅಜೇಯ 19 ರನ್ ಗಳ ಮೂಲಕ ರಾಜಸ್ಥಾನ ರಾಯಲ್ಸ್ ಗೆಲ್ಲಲು 207 ರನ್ ಗಳ ಟಾರ್ಗೆಟ್ ನೀಡಿದರು.
ಈ ಗುರಿ ಬೆನ್ನಟ್ಟಿದ್ದ ರಾಜಸ್ಥಾನ ರಾಯಲ್ಸ್ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ 34 ರನ್ ಗಳಿಸಿ ಔಟಾದರೆ, ವೈಭವ್ ಸೂರ್ಯವಂಶಿ ಕೇವಲ 4 ರನ್ ಗಳಿಸಿದಾಗ ರಹಾನೆ ಕ್ಯಾಚ್ ನೀಡಿ ನಿರ್ಗಮಿಸಿದರು. ಕುನಾಲ್ ಸಿಂಗ್ ಶೂನ್ಯಕ್ಕೆ ಔಟಾದರೆ ರಿಯಾನ್ ಮೊಯಿನ್ ಆಲಿಯ ಒಂದೇ ಒವರ್ ನಲ್ಲಿ ಆರು ಸಿಕ್ಸರ್ ಬಾರಿಸುವ ಮೂಲಕ ಅಬ್ಬರಿಸಿದರು. ಆದರೆ ಹರ್ಷಿತಾ ರಾಣ ಬೌಲಿಂಗ್ ನಲ್ಲಿ 95 ರನ್ ಗಳಿಸಿದಾಗ ಅರೋರಾ ಅವರಿಗೆ ಕ್ಯಾಚ್ ನೀಡುವ ಮೂಲಕ ಶತಕದಿಂದ ವಂಚಿತರಾದರು. ಇದು ತಂಡದ ತಂಡದ ಮೇಲೆ ತೀವ್ರ ಪರಿಣಾಮ ಬೀರಿತು.
ಉಳಿದ ಆಟಗಾರರಾದ ಧ್ರುವ ಜುರೆಲ್ ಹಾಗೂ ವನಿಂದು ಹಸರಂಗ ಶೂನ್ಯಕ್ಕೆ ಔಟಾದರೆ, ಶಿಮ್ರಾನ್ ಹೆಟ್ಮಾಯಿರ್ 29, ಶುಭಂ ದುಬೆ ಅಜೇಯ 25 ರನ್ ಗಳಿಸಿದರೆ, ಜೋಪ್ರಾ ಅರ್ಚರ್ 12 ರನ್ ಗಳಿಸಿದಾಗ ರನೌಟ್ ಆದರು. ಪರಿಣಾಮ ರಾಜಸ್ಥಾನ ರಾಯಲ್ಸ್ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಲಷ್ಟೇ ಶಕ್ತವಾಯಿತು. ಹೀಗಾಗಿ ರಿಯಾನ್ ಪರಾಗ್ ಅವರ 95 ರನ್ ಗಳ ಶ್ರಮ ವ್ಯರ್ಥವಾಗುವುದರೊಂದಿಗೆ KKR 1 ರನ್ ನಿಂದ ರೋಚಕ ಗೆಲುವು ಸಾಧಿಸಿತು. ಆ್ಯಂಡ್ರೆ ರಸೆಲ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.
Advertisement