
ಐಪಿಎಲ್ 2025ರ ಆವೃತ್ತಿಯಲ್ಲಿ ಬ್ಯುಸಿಯಾಗಿರುವ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಅಜಿಂಕ್ಯ ರಹಾನೆ ಮುಂಬೈ ತಂಡದ ಸಹ ಆಟಗಾರ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿರುವ ವಿಚಾರ ತಿಳಿದು ಆಶ್ಯರ್ಯಚಕಿತರಾಗಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ವಿರುದ್ಧ ಕೆಕೆಆರ್ನ ಲೀಗ್ ಹಂತದ ಪಂದ್ಯಕ್ಕೆ ರಹಾನೆ ತಯಾರಿ ನಡೆಸುತ್ತಿದ್ದ ವೇಳೆ ರೋಹಿತ್ ಶರ್ಮಾ ಈ ನಿರ್ಧಾರ ತೆಗೆದುಕೊಂಡಿದ್ದರು. ಪಂದ್ಯದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ರಹಾನೆ, ರೋಹಿತ್ ರಾಜೀನಾಮೆ ನೀಡುವ ನಿರ್ಧಾರ ಕೇಳಿ 'ಆಘಾತಕ್ಕೊಳಗಾಗಿದ್ದೇನೆ' ಎಂದರು. ಈ ಸುದ್ದಿಯನ್ನು ನಂಬಲು ಸಾಧ್ಯವಾಗುತ್ತಿಲ್ಲ ಮತ್ತು ಡ್ರೆಸ್ಸಿಂಗ್ ರೂಂಗೆ ಹಿಂತಿರುಗಿದ ನಂತರ ರೋಹಿತ್ಗೆ ಕರೆ ಮಾಡುವುದಾಗಿ ಹೇಳಿದರು.
'ಓಹ್, ಹೌದಾ?'. 'ನನಗೆ ತಿಳಿದಿರಲಿಲ್ಲ. ನನಗೆ ನಿಜಕ್ಕೂ ಆಘಾತವಾಯಿತು. ನಾನು ಆಟ ಆಡುತ್ತಿದ್ದೆ, ಆದ್ದರಿಂದ ನನಗೆ ಈ ವಿಚಾರ ತಿಳಿದಿರಲಿಲ್ಲ. ಆದರೆ, ನಾನು ಅವರಿಗೆ ಶುಭ ಹಾರೈಸುತ್ತೇನೆ' ಎಂದು ರೋಹಿತ್ ಟೆಸ್ಟ್ ನಿವೃತ್ತಿಯ ಬಗ್ಗೆ ತಿಳಿಸಿದಾಗ ರಹಾನೆ ಪ್ರತಿಕ್ರಿಯಿಸಿದರು.
'ರೋಹಿತ್ ಶರ್ಮಾ ಅವರು ಆರಂಭದಲ್ಲಿ ಮಧ್ಯಮ ಕ್ರಮಾಂಕದಲ್ಲಿ 5 ಅಥವಾ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ನಂತರ ಇನಿಂಗ್ಸ್ ಆರಂಭಿಸಿದರು. ಅವರು ಅದಕ್ಕೆ ಹೊಂದಿಕೊಂಡ ರೀತಿ ಅದ್ಭುತವಾಗಿತ್ತು. ಅವರು ಯಾವಾಗಲೂ ಬೌಲರ್ಗಳನ್ನು ಎದುರಿಸಲು ಮತ್ತು ಸ್ವಾತಂತ್ರ್ಯದಿಂದ ಆಡಲು ಬಯಸುತ್ತಿದ್ದರು. ಇತರರು ಸಹ ಹಾಗೆ ಮಾಡಬೇಕೆಂದು ಅವರು ಬಯಸುತ್ತಿದ್ದರು' ಎಂದು ರಹಾನೆ ಹೇಳಿದರು.
ನಾನು ಡ್ರೆಸ್ಸಿಂಗ್ ಕೋಣೆಗೆ ಹಿಂತಿರುಗಿದ ನಂತರ ಬಹುಶಃ ನಾನು ಅವರಿಗೆ ಕರೆ ಮಾಡುತ್ತೇನೆ ಅಥವಾ ಅವರಿಗೆ ಸಂದೇಶ ಕಳುಹಿಸುತ್ತೇನೆ. ಆದರೆ, ನಾನು ಖಂಡಿತವಾಗಿಯೂ ಅವರ ಅದ್ಭುತ ಟೆಸ್ಟ್ ವೃತ್ತಿಜೀವನವನ್ನು ಅಭಿನಂದಿಸಲು ಬಯಸುತ್ತೇನೆ ಎಂದು ತಿಳಿಸಿದರು.
ಪಂದ್ಯದ ವಿಷಯಕ್ಕೆ ಬಂದರೆ, ಡೆವಾಲ್ಡ್ ಬ್ರೆವಿಸ್ ಮತ್ತು ಶಿವಂ ದುಬೆ ಉತ್ತಮ ಜೊತೆಯಾಟದಿಂದಾಗಿ ರಹಾನೆ ನೇತೃತ್ವದ ಕೆಕೆಆರ್ ಸಿಎಸ್ಕೆ ವಿರುದ್ಧ ಅಲ್ಪ ಅಂತರದ ಸೋಲನ್ನು ಅನುಭವಿಸಿತು. ಸಿಎಸ್ಕೆ ಈಗಾಗಲೇ ಪ್ಲೇಆಫ್ ರೇಸ್ನಿಂದ ಹೊರಬಿದ್ದಿದ್ದು, ಈ ಸೋಲಿನೊಂದಿಗೆ, ಕೆಕೆಆರ್ನ ಪ್ಲೇಆಫ್ಗೆ ಅರ್ಹತೆ ಪಡೆಯುವ ಅವಕಾಶಗಳು ಸಹ ತೀರಾ ಕಡಿಮೆಯಾಗಿದೆ.
Advertisement