IPL 2025: 'ಈಗಿನ ಪರಿಸ್ಥಿತಿ...'; ಟಿ20 ಟೂರ್ನಮೆಂಟ್ ರದ್ದಾಗುವ ಬಗ್ಗೆ ಮೌನ ಮುರಿದ ಐಪಿಎಲ್ ಚೇರ್‌ಮನ್

ಮೇ 11 ರಂದು ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯವನ್ನು ಅಹಮದಾಬಾದ್‌ಗೆ ಸ್ಥಳಾಂತರಿಸಲಾಗಿರುವುದರಿಂದ ಐಪಿಎಲ್ ವೇಳಾಪಟ್ಟಿಯ ಮೇಲೆ ಈಗಾಗಲೇ ಪರಿಣಾಮ ಬೀರಿದೆ.
ಧರ್ಮಶಾಲಾ ಕ್ರೀಡಾಂಗಣ
ಧರ್ಮಶಾಲಾ ಕ್ರೀಡಾಂಗಣ
Updated on

ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಐಪಿಎಲ್ ಪಂದ್ಯಗಳು ರದ್ದಾಗುವ ಸಾಧ್ಯತೆ ಉಂಟಾಗಿದೆ. ನೆರೆಯ ನಗರಗಳಲ್ಲಿನ ವಾಯುದಾಳಿಯ ಎಚ್ಚರಿಕೆಯಿಂದಾಗಿ ಗುರುವಾರ ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಪಂದ್ಯವನ್ನು ಅರ್ಧಕ್ಕೆ ಮೊಟಕುಗೊಳಿಸಲಾಯಿತು. ಲೀಗ್ ಆಡಳಿತಾಧಿಕಾರಿಗಳು ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಮತ್ತು ಹೆಚ್ಚುತ್ತಿರುವ ಮಿಲಿಟರಿ ಮುಖಾಮುಖಿ ಕುರಿತು ಪರಿಸ್ಥಿತಿಯನ್ನು ಗಮನಿಸುತ್ತಿದ್ದಾರೆ. ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವನ್ನು ಮಧ್ಯದಲ್ಲಿಯೇ ರದ್ದುಗೊಳಿಸಲಾಯಿತು. ಇದೀಗ ಐಪಿಎಲ್ 2025ರ ಆವೃತ್ತಿಯೇ ರದ್ದಾಗುವ ಅಪಾಯ ಎದುರಾಗಿದೆ.

ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯೊಂದಿಗೆ ಪ್ರಾರಂಭವಾದ ಸಂಘರ್ಷದ ನಡುವೆ ಟಿ20 ಲೀಗ್ ಮುಂದುವರಿಯುತ್ತದೆಯೇ ಎಂದು ಕೇಳಿದಾಗ, 'ನಾವು ಇದೀಗ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದೇವೆ. ಇದು ವಿಕಸನಗೊಳ್ಳುತ್ತಿರುವ ಪರಿಸ್ಥಿತಿಯಾಗಿದೆ. ಸರ್ಕಾರದಿಂದ ನಮಗೆ ಯಾವುದೇ ನಿರ್ದೇಶನ ಬಂದಿಲ್ಲ. ಎಲ್ಲ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ' ಎಂದು ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಪಿಟಿಐಗೆ ತಿಳಿಸಿದ್ದಾರೆ.

ಮಳೆಯಿಂದಾಗಿ ಆಟ ನಿಗದಿತ ಸಮಯಕ್ಕಿಂತ ತಡವಾಗಿ ಪ್ರಾರಂಭವಾಯಿತು. ಪಂಜಾಬ್ ತಂಡವು 10.1 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 122 ರನ್ ಗಳಿಸಿದ್ದಾಗ, ಆರಂಭದಲ್ಲಿ ಫ್ಲಡ್‌ಲೈಟ್ ವೈಫಲ್ಯದಿಂದಾಗಿ ದೀಪಗಳು ಆರಿದ್ದವು. ಬಳಿಕ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು.

ತಂಡಗಳು ಮತ್ತು ನೆರೆದಿದ್ದ ಅಭಿಮಾನಿಗಳನ್ನು ಅಂತಿಮವಾಗಿ ಅವರ ಭದ್ರತೆಯ ದೃಷ್ಟಿಯಿಂದ ಕ್ರೀಡಾಂಗಣದಿಂದ ಸ್ಥಳಾಂತರಿಸಲಾಯಿತು. ಈ ಮೈದಾನವು ಸುಮಾರು 23,000 ಪ್ರೇಕ್ಷಕರಿಗೆ ಅವಕಾಶ ಕಲ್ಪಿಸುವ ಸಾಮರ್ಥ್ಯ ಹೊಂದಿದ್ದು, ಸ್ಥಳಾಂತರಿಸುವ ಸಮಯದಲ್ಲಿ ಅದು ಅದರ ಸಾಮರ್ಥ್ಯದ ಸುಮಾರು ಶೇ 80 ರಷ್ಟು ತುಂಬಿತ್ತು.

'ಎರಡೂ ತಂಡಗಳ ಆಟಗಾರರು ಕ್ರೀಡಾಂಗಣದಿಂದ ಹೋಟೆಲ್‌ಗೆ ಸುರಕ್ಷಿತವಾಗಿ ಮರಳಿದ್ದಾರೆ. ಸದ್ಯಕ್ಕೆ ಇಲ್ಲಿ ವಿದ್ಯುತ್ ಕಡಿತಗೊಂಡಿಲ್ಲ. ಹೋಟೆಲ್‌ನಲ್ಲಿ ಭಾರಿ ಭದ್ರತೆ ಒದಗಿಸಲಾಗಿದೆ ಮತ್ತು ನಾವು ಬಿಸಿಸಿಐ ನಿರ್ಧಾರಕ್ಕಾಗಿ ಕಾಯುತ್ತಿದ್ದೇವೆ' ಎಂದು ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್‌ನ ಮೂಲಗಳು ಪಿಟಿಐಗೆ ತಿಳಿಸಿವೆ.

ಧರ್ಮಶಾಲಾ ಕ್ರೀಡಾಂಗಣ
ಪಾಕಿಸ್ತಾನ ದಾಳಿ ನಡುವೆ ಪಂಜಾಬ್ ಕಿಂಗ್ಸ್ vs ಡೆಲ್ಲಿ ಕ್ಯಾಪಿಟಲ್ಸ್ IPL ಪಂದ್ಯ ಸ್ಥಗಿತ!

ಎರಡೂ ತಂಡಗಳ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಯನ್ನು ಈಗ ಧರ್ಮಶಾಲಾದಿಂದ ಸುಮಾರು 85 ಕಿ.ಮೀ ದೂರದಲ್ಲಿರುವ ಪಠಾಣ್‌ಕೋಟ್‌ನಿಂದ ವಿಶೇಷ ರೈಲಿನ ಮೂಲಕ ದೆಹಲಿಗೆ ಕರೆತರಲಾಗುವುದು. ತಂಡಗಳು ರಸ್ತೆ ಮೂಲಕ ಪಠಾಣ್‌ಕೋಟ್ ತಲುಪಲಿವೆ ಎನ್ನಲಾಗಿದೆ.

ದಾಳಿಯನ್ನು ತಡೆಯುವ ಮುನ್ನೆಚ್ಚರಿಕೆ ಕ್ರಮಗಳ ಭಾಗವಾಗಿ ಧರ್ಮಶಾಲಾದ ಏಕೈಕ ವಿಮಾನ ನಿಲ್ದಾಣ ಮತ್ತು ನೆರೆಯ ಕಾಂಗ್ರಾ ಮತ್ತು ಚಂಡೀಗಢದಲ್ಲಿರುವ ವಿಮಾನ ನಿಲ್ದಾಣಗಳನ್ನು ಮುಚ್ಚಲಾಗಿದೆ.

ಇಂದು ರಾತ್ರಿ ಪಂದ್ಯ ರದ್ದಾದ ಕಾರಣ, ಲೀಗ್ ಮುಂದುವರಿಯುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ ಮತ್ತು ಧುಮಾಲ್ ಯಾವುದೇ ಸ್ಪಷ್ಟ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಶುಕ್ರವಾರ ಲಕ್ನೋದಲ್ಲಿ ನಡೆಯಲಿರುವ ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯಕ್ಕೆ ಸದ್ಯಕ್ಕೆ ಯಾವುದೇ ಅಡ್ಡಿ ಇಲ್ಲ ಎಂದು ಅವರು ದೃಢಪಡಿಸಿದರು.

ಮೇ 11 ರಂದು ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯವನ್ನು ಅಹಮದಾಬಾದ್‌ಗೆ ಸ್ಥಳಾಂತರಿಸಲಾಗಿರುವುದರಿಂದ ಐಪಿಎಲ್ ವೇಳಾಪಟ್ಟಿಯ ಮೇಲೆ ಈಗಾಗಲೇ ಪರಿಣಾಮ ಬೀರಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com