

ಐಪಿಎಲ್ 2026ರ 12ನೇ ಪಂದ್ಯ ಇಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ನಡೆಯಬೇಕಿತ್ತು. ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕ ಅಜಿಂಕ್ಯ ರಹಾನೆ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಕೆಕೆಆರ್ ಎರಡು ಬದಲಾವಣೆಗಳೊಂದಿಗೆ ಕಣಕ್ಕಿಳಿದಿತ್ತು. ವರುಣ್ ಚಕ್ರವರ್ತಿ ಮತ್ತು ಸುನಿಲ್ ನರೈನ್ ಅವರನ್ನು ಪಂದ್ಯದಿಂದ ಹೊರಗಿಟ್ಟು ರೋವ್ಮನ್ ಪೊವೆಲ್ ಮತ್ತು ನವದೀಪ್ ಸೈನಿಗೆ ಅವಕಾಶ ನೀಡಲಾಗಿತ್ತು.
ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ನಡುವಿನ ಐಪಿಎಲ್ ಪಂದ್ಯ ಮಳೆಯಿಂದಾಗಿ ರದ್ದಾಗಿದ್ದು ಪ್ರಸಕ್ತ ಋತುವಿನಲ್ಲಿ ರದ್ದಾದ ಮೊದಲ ಪಂದ್ಯ ಇದಾಗಿದೆ. ಇನ್ನು ಉಭಯ ತಂಡಗಳಿಗೂ ತಲಾ 1 ಅಂಕವನ್ನು ನೀಡಲಾಗಿದೆ. ರಾತ್ರಿ 7:46ಕ್ಕೆ ಮಳೆ ಶುರುವಾಗಿದ್ದು ಕೆಕೆಆರ್ ತಂಡವು 3.4 ಓವರ್ಗಳಲ್ಲಿ ಎರಡು ವಿಕೆಟ್ಗಳಿಗೆ 25 ರನ್ ಗಳಿಸಿತ್ತು. ನಾಯಕ ಅಜಿಂಕ್ಯ ರಹಾನೆ 8 ರನ್ ಮತ್ತು ಅಂಗ್ಕ್ರಿಶ್ ರಘುವಂಶಿ 7 ರನ್ ಗಳಿಸಿ ಕಣದಲ್ಲಿದ್ದರು. ಇನ್ನು ಪಂದ್ಯದ ಎರಡನೇ ಓವರ್ನಲ್ಲಿ ಕ್ಯಾಮರೂನ್ ಗ್ರೀನ್ (4 ರನ್) ಮತ್ತು ಫಿನ್ ಅಲೆನ್ (6 ರನ್) ಅವರನ್ನು ಕ್ಸೇವಿಯರ್ ಬಾರ್ಟ್ಲೆಟ್ ಔಟ್ ಮಾಡಿದರು.
ಕೋಲ್ಕತ್ತಾ ನೈಟ್ ರೈಡರ್ಸ್ ಐಪಿಎಲ್ 2026ರಲ್ಲಿ ಕಳಪೆ ಆರಂಭ ಕಂಡಿದೆ. ಕೆಕೆಆರ್ ತನ್ನ ಆರಂಭಿಕ ಎರಡೂ ಪಂದ್ಯಗಳಲ್ಲಿ ಸೋತ್ತಿದ್ದು ಪಾಯಿಂಟ್ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಅಜಿಂಕ್ಯ ರಹಾನೆ ನೇತೃತ್ವದ ಕೆಕೆಆರ್ ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ಅನ್ನು ಸೋಲಿಸುವ ಮೂಲಕ ಋತುವಿನ ಮೊದಲ ಗೆಲುವು ದಾಖಲಿಸಲು ನೋಡುತ್ತಿತ್ತು. ಆದರೆ ಪಂದ್ಯ ರದ್ದಾಗಿದೆ.
Advertisement