ಬೆಂಗಳೂರು: 25 ಎಸೆತಗಳಲ್ಲಿ 70 ರನ್ ಗಳಿಸಿ ಪಂದ್ಯಕ್ಕೆ ತಿರುವು ನೀಡಿದ ಆಸ್ಟ್ರೇಲಿಯಾದ ಬಿಗ್-ಹಿಟ್ಟರ್ ಟಿಮ್ ಡೇವಿಡ್, ಸಿಎಸ್ಕೆ ವಿರುದ್ಧದ ತಮ್ಮ ಅದ್ಭುತ ಪ್ರದರ್ಶನಕ್ಕೆ ತಮ್ಮ ತಂಡದ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ನೀಡಿದ ಸಲಹೆಗಳೇ ಕಾರಣ ಎಂದು ಹೇಳಿದ್ದಾರೆ.
ಟಿಮ್ ಡೇವಿಡ್, ಮೂರು ಬೌಂಡರಿಗಳಲ್ಲದೆ ಎಂಟು ಸಿಕ್ಸರ್ಗಳನ್ನು ಬಾರಿಸಿದರು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ 3 ವಿಕೆಟ್ ಕಳೆದುಕೊಂಡು ಭರ್ಜರಿ 250 ರನ್ ಕಲೆಹಾಕಿತು. 251 ರನ್ ಗುರಿ ಬೆನ್ನತ್ತಿದ ಸಿಎಸ್ಕೆಯನ್ನು 207 ರನ್ಗಳಿಗೆ ಆಲೌಟ್ ಮಾಡಿತು.
'ನಾನು ನನ್ನ ಆಟವನ್ನು ಹೆಚ್ಚು ಬದಲಿಸುವುದಿಲ್ಲ, ಆದರೆ ನಾನು ಮಾಡುವ ಎಲ್ಲ ಸಿದ್ಧತೆಗಳಿಂದ ನನಗೆ ವಿಶ್ವಾಸವಿದೆ. ಡಿಕೆ (ದಿನೇಶ್ ಕಾರ್ತಿಕ್) ಜೊತೆ ಕೆಲಸ ಮಾಡುವುದು ಸಂತೋಷಕರವಾಗಿದೆ. ಅವರು ಈ ಪರಿಸ್ಥಿತಿಗಳಲ್ಲಿ ಅನುಭವಿ ಆಟಗಾರ. ನಾನು ಕೆಲವು ವರ್ಷಗಳಿಂದ ಐಪಿಎಲ್ನಲ್ಲಿದ್ದೇನೆ ಮತ್ತು ಆ ರೀತಿಯ ತಯಾರಿಯೊಂದಿಗೆ, ನಿಮ್ಮ ಮೇಲೆ ಯಾವುದೇ ಒತ್ತಡ ಇರುವುದಿಲ್ಲ' ಎಂದು ಪಂದ್ಯದ ನಂತರದ ಪ್ರಸ್ತುತಿಯಲ್ಲಿ ಡೇವಿಡ್ ಹೇಳಿದರು.
'ಈ ರೀತಿಯ ಪ್ರದರ್ಶನ ಪ್ರತಿದಿನ ನೀಡಲು ಆಗುವುದಿಲ್ಲವಾದ್ದರಿಂದ ನಾನು ಖಂಡಿತವಾಗಿಯೂ ಸಂತೋಷವಾಗಿದ್ದೇನೆ. ನಾಯಕ (19 ಎಸೆತಗಳಲ್ಲಿ 48 ರನ್ ಗಳಿಸಿದ ರಜತ್ ಪಾಟೀದಾರ್) ಉತ್ತಮ ಪ್ರದರ್ಶನ ನೀಡುತ್ತಿದ್ದರು. ನಾನು ಅವರಿಂದ ಕೆಲವು ಎಸೆತಗಳನ್ನು ತೆಗೆದುಕೊಂಡೆ - ಅದು ತುಂಬಾ ಖುಷಿಯಾಗಿತ್ತು. ನನ್ನ ಹಿಂದೆ ಜಿತೇಶ್ ಶರ್ಮಾ ಮತ್ತು ರೊಮಾರಿಯ ಶೆಫರ್ಡ್ನೊಂದಿಗೆ ಬ್ಯಾಟಿಂಗ್ಗೆ ಇರುವುದು ನನಗೆ ಆತ್ಮವಿಶ್ವಾಸ ನೀಡುತ್ತದೆ' ಎಂದು ಅವರು ಹೇಳಿದರು.
ರಜತ್ ಪಾಟೀದಾರ್ ಹೇಳಿದ್ದೇನು?
'ಅವರು (ಡೇವಿಡ್) ಒಬ್ಬ ಸ್ಪೆಷಲಿಸ್ಟ್ ಮತ್ತು ಅತ್ಯುತ್ತಮ ಫಿನಿಷರ್ಗಳಲ್ಲಿ ಒಬ್ಬರು. ಅವರು ಸ್ಥಿರ ಮತ್ತು ನಾನು ನೋಡಿದ ಅತ್ಯುತ್ತಮ ಫಿನಿಷರ್ಗಳಲ್ಲಿ ಒಬ್ಬರು' ಎಂದು ನಾಯಕ ರಜತ್ ಪಾಟೀದಾರ್ ಹೇಳಿದರು. ಸರ್ಫರಾಜ್ ಖಾನ್ ಮತ್ತು ಕಾರ್ತಿಕ್ ಶರ್ಮಾ ಅವರನ್ನು ಒಂದೇ ಓವರ್ನಲ್ಲಿ ಔಟ್ ಮಾಡಿದ ಹಿರಿಯ ಆಟಗಾರ ಕೃನಾಲ್ ಪಾಂಡ್ಯ ಅವರನ್ನು ಪಾಟೀದಾರ್ ವಿಶೇಷವಾಗಿ ಉಲ್ಲೇಖಿಸಿದರು.
'ನಾನು ಒತ್ತಡಕ್ಕೆ ಒಳಗಾದಾಗಲೆಲ್ಲ, ಕೆಪಿ (ಕೃನಾಲ್ ಪಾಂಡ್ಯ) ಅವರನ್ನು ನೋಡುತ್ತೇನೆ ಮತ್ತು ಅವರ ಮೇಲೆ ನನಗೆ ಅಷ್ಟೊಂದು ನಂಬಿಕೆ ಇದೆ' ಎಂದರು.
Advertisement