

ನವದೆಹಲಿ: ಐಪಿಎಲ್ 2026 ರಲ್ಲಿ ಟೂರ್ನಿ ನಿನ್ನೆ ಮತ್ತೊಂದು ರಣರೋಚಕ ಕ್ರಿಕೆಟ್ ಪಂದ್ಯಕ್ಕೆ ಸಾಕ್ಷಿಯಾಗಿದ್ದು ಸೋಲುವ ಹಂತದಲ್ಲಿದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಗೆಲುವಿನ ದಡ ಸೇರಿಸಿದ ಮುಕುಲ್ ಚೌಧರಿ (Mukul Choudhary) ವ್ಯಾಪಕ ಶ್ಲಾಘನೆಗೆ ಪಾತ್ರರಾಗುತ್ತಿದ್ದಾರೆ.
ಈಡನ್ ಗಾರ್ಡನ್ಸ್ನಲ್ಲಿ ನಿನ್ನೆ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ತಂಡಕ್ಕೆ ಮುಕುಲ್ ಚೌದರಿ 3 ವಿಕೆಟ್ ಗಳ ರೋಚಕ ಜಯ ತಂದುಕೊಟ್ಟರು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 20 ಓವರ್ಗಳಲ್ಲಿ 4 ವಿಕೆಟ್ಗಳ ನಷ್ಟಕ್ಕೆ 181 ರನ್ ಗಳಿಸಿ ಗೆಲ್ಲಲು 182 ರನ್ಗಳ ಗುರಿ ನೀಡಿತು.
ಈ ಗುರಿ ಬೆನ್ನಟ್ಟಿದ ಲಕ್ನೋ 17ನೇ ಓವರ್ ಮುಕ್ತಾಯದವರೆಗೂ ಸೋಲಿನ ದವಡೆಗೆ ಸಿಲುಕಿತ್ತು. ಆದರೆ ಪಂದ್ಯದ ದಿಕ್ಕು ಬದಲಿಸಿದ ಲಕ್ನೋ ತಂಡದ ಯುವ ಬ್ಯಾಟರ್ ಮುಕುಲ್ ಚೌಧರಿ (Mukul Choudhary) ಸ್ಫೋಟಕ ಅರ್ಧಶತಕದ ಇನ್ನಿಂಗ್ಸ್ ಆಡುವ ಮೂಲಕ ಕೊನೆಯ ಎಸೆತದಲ್ಲಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.
ಸಂಕಷ್ಟದಲ್ಲಿದ್ದ ಲಕ್ನೋ ಗೆ ಮುಕುಲ್ ಆಸರೆ
182 ರನ್ಗಳನ್ನು ಬೆನ್ನಟ್ಟಿದ ಎಲ್ಎಸ್ಜಿ 16 ಓವರ್ಗಳಲ್ಲಿ ಕೇವಲ 128 ರನ್ ಗಳಿಸಿ 7 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟದಲ್ಲಿತ್ತು. ಆದರೆ ಈ ಹಂತದಲ್ಲಿ ಕ್ರೀಸ್ ನಲ್ಲಿದ್ದ ಮುಕುಲ್ ಅದ್ಭುತ ಪವರ್ಫುಲ್ ಬ್ಯಾಟಿಂಗ್ ಪ್ರದರ್ಶನ ನೀಡಿದರು.
21 ವರ್ಷದ ಆಟಗಾರ ಮುಕುಲ್ 27 ಎಸೆತಗಳಲ್ಲಿ ಅಜೇಯ 54 ರನ್ ಗಳಿಸಿ ಏಳು ಸಿಕ್ಸರ್ಗಳನ್ನು ಬಾರಿಸಿದರು, ಕೊನೆಯ 19 ಎಸೆತಗಳಲ್ಲಿ 52 ರನ್ಗಳನ್ನು ಗಳಿಸಿ ಅಂತಿಮ ಎಸೆತದಲ್ಲಿ ಮೂರು ವಿಕೆಟ್ಗಳ ಅದ್ಭುತ ಗೆಲುವು ಸಾಧಿಸಿಕೊಟ್ಟರು. ಅವರ ನಿರ್ಭೀತ ಬ್ಯಾಟಿಂಗ್ ಬಹುತೇಕ ಖಚಿತವಾದ ಸೋಲನ್ನು ಋತುವಿನ ಅತ್ಯಂತ ಸ್ಮರಣೀಯ ಚೇಸ್ಗಳಲ್ಲಿ ಒಂದನ್ನಾಗಿ ಪರಿವರ್ತಿಸಿತು.
ಕುಣಿದು ಕುಪ್ಪಳಿಸಿ ಕೋಚ್
ಇನ್ನು ಅತ್ತ ಸೋಲಬೇಕಿದ್ದ ಪಂದ್ಯವನ್ನು ಮುಕುಲ್ ಗೆಲ್ಲಿಸಿಕೊಡುತ್ತಿದ್ದಂತೆಯೇ ಡಗೌಟ್ ನಲ್ಲಿದ್ದ ಎಲ್ ಎಸ್ ಜಿ ಕೋಚ್ ಹಾಗೂ ಆಸಿಸ್ ಮಾಜಿ ಕ್ರಿಕೆಟ್ ದಂತಕಥೆ ಜಸ್ಟಿನ್ ಲ್ಯಾಂಗರ್ ಕುಣಿದು ಕಪ್ಪಳಿಸಿದರು. ಅಲ್ಲದೆ ಮುಕುಲ್ ರನ್ನು ತಬ್ಬಿ ಮೆಚ್ಚುಗೆ ಸೂಚಿಸಿದರು.
'ಭಾರತದ ಅತ್ಯಂತ ಅಪಾಯಕಾರಿ ಬ್ಯಾಟರ್ ಆಗಿ ಮಾಡ್ತೀನಿ'
ಇನ್ನು ಮುಕುಲ್ ರ ಅಬ್ಬರದ ಬ್ಯಾಟಿಂಗ್ ವ್ಯಾಪಕ ಶ್ಲಾಘನೆಗೆ ಪಾತ್ರರಾಗುತ್ತಿರುವಂತೆಯೇ ಅದಕ್ಕೆ ಕಾರಣ ಎಲ್ಎಸ್ ಜಿ ಕೋಚ್ ಜಸ್ಟಿನ್ ಲ್ಯಾಂಗರ್ ಎಂಬ ಮಾತುಗಳು ಕೇಳಿಬರುತ್ತಿವೆ.
ಇದಕ್ಕೆ ಇಂಬು ನೀಡುವಂತೆ ಈ ಹಿಂದೆ ಇದೇ ಮುಕುಲ್ ಗೆ ಬ್ಯಾಟಿಂಗ್ ತರಬೇತಿ ನೀಡುವ ವೇಳೆ ಜಸ್ಟಿನ್ ಲ್ಯಾಂಗರ್ ಆಡಿದ್ದ ಮಾತುಗಳು ಇದೀಗ ವೈರಲ್ ಆಗುತ್ತಿವೆ.
ಲಕ್ನೋ ತಂಡದ ಕೋಚಿಂಗ್ ವೇಳೆ ಮುಕುಲ್ ಗೆ ಬ್ಯಾಟ್ ನೀಡಿದ ಜಸ್ಟಿನ್ ಲ್ಯಾಂಗರ್, ಬ್ಯಾಟ್ ಮಾಡುತ್ತಿದ್ದ ವೇಳೆ 'ಮುಂದಿನ ನಾಲ್ಕು ತಿಂಗಳುಗಳಲ್ಲಿ ನಿನ್ನನ್ನು ನಂ. 6 ಅಥವಾ 7 ಸ್ಥಾನದ ಭಾರತದ ಅತ್ಯಂತ ಅಪಾಯಕಾರಿ ಬ್ಯಾಟರ್ ಆಗಿ ಪರಿವರ್ತಿಸುವುದಾಗಿ' ಘೋಷಿಸಿದ್ದರು.
ಇದೀಗ ಇದೇ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದ್ದು, ಲ್ಯಾಂಗರ್ ಕೊನೆಗೂ ತಾವು ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ ಎಂಬ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ.
Advertisement